ಅಸ್ಸಾಂ ಸೇರಿ ಉತ್ತರ ಭಾರತದಲ್ಲಿ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಅಸ್ಸಾಂ, ಜುಲೈ 3: ಈಶಾನ್ಯ ರಾಜ್ಯ ಅಸ್ಸಾಂ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.
ಮಳೆಯಿಂದ ಅಸ್ಸಾಂನ ಲಖಿಂಪುರ್ ನಲ್ಲಿ ಯುವಕನೊಬ್ಬ ಸಾವನ್ನಪ್ಪಿದ್ದರೆ, ರಾಜ್ಯದ 7 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 498ಕ್ಕೂ ಹೆಚ್ಚು ಜಿಲ್ಲೆಗಳು ಮಳೆಯಿಂದ ತೊಂದರೆಗೆ ಸಿಲುಕಿದ್ದು 2.7 ಲಕ್ಷ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನು ಹಿಮಾಚಲ ಪ್ರದೇಶ, ಕಾಶ್ಮೀರ ಮತ್ತು ಗುಜಾರಾತ್ ನಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಗುಜರಾತಿನ ಟಂಕಾರಾದಲ್ಲಿ 24 ಸೆಂಟಿ ಮೀಟರ್ ಮಳೆ ಬಿದ್ದಿದ್ದು ಇಲ್ಲಿನ ಚೆಕ್ ಡ್ಯಾಂಗಳೆಲ್ಲಾ ಕೊಚ್ಚಿ ಹೋಗಿವೆ. ಇಲ್ಲಿ ರಕ್ಷಣಾ ತಂಡದವರು ನೀರು ಪಾಲಾಗಲಿದ್ದ 14 ಜನರನ್ನು ರಕ್ಷಿಸಿದ್ದಾರೆ.
ಬನಸ್ಕಾಂತ, ಕೊಡಿನಾರ್, ಗಿರ್ ಸೋಮನಾಥ್, ಕಲ್ಯಾಣಪುರದಲ್ಲೂ ಭಾರಿ ಮಳೆ ಸುರಿಯುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ರಾಜಧಾನಿ ಅಹಮದಾಬಾದ್ ನ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ರಾಜ್ಯದಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿಯೂ ನಿರಂತರ ಮಳೆ ಸುರಿಯುತ್ತಿದ್ದು ಜಮ್ಮು-ಶ್ರೀನಗರ ನಡುವಿನ ಏಕೈಕ ಹೆದ್ದಾರಿ ಟ್ರಾಫಿಕ್ ಜಾಂನಿಂದಾಗಿ ವಾಹನಗಳಿದ್ದ ತುಂಬಿಕೊಂಡಿದೆ. ಇದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
ಇನ್ನು ಹಿಮಾಚಲ ಪ್ರದೇಶದಲ್ಲಿಯೂ ಮಳೆಯಿಂದ ಅಲ್ಲಲ್ಲಿ ಭೂಕುಸಿತಗಳು ಸಂಭವಿಸಿವೆ.