Gujarat Weather Forecast: ಗುಜರಾತ್ನಲ್ಲಿ ಮಳೆ ಸೃಷ್ಟಿಸಿದ ಅವಾಂತರ- ನಗರಗಳು ಜಲಾವೃತ- ಕೊಚ್ಚಿಹೋದ ಅಣೆಕಟ್ಟು!
ಗುಜರಾತ್ನಲ್ಲಿ ಮಳೆ ಅರ್ಭಟ ಜೋರಾಗಿದ್ದು ಅನೇಕ ನಗರಗಳು ಜಲಾವೃತಗೊಂಡಿವೆ. ಅಲ್ಲದೆ ಹಲವೆಡೆ ಮನೆಗಳು, ವಿದ್ಯುತ್ ಕಂಬ ಹಾಗೂ ಮರಗಳು ಧರೆಗೆ ಉರುಳಿ ಬಿದ್ದಿವೆ. ಲೋನಾವಾಲಾದಲ್ಲಿನ ಅಣೆಕಟ್ಟು ಮಳೆ ನೀರಿನಲ್ಲಿ ಮುಳುಗಿ ಐವರು ಸಾವನ್ನಪ್ಪಿದ್ದಾರೆ.
ದೇಶಕ್ಕೆ ಮುಂಗಾರು ಪ್ರವೇಶಿಸಿದೆ. ಮಾನ್ಸೂನ್ ದೇಶದ ಬಹುತೇಕ ಎಲ್ಲಾ ರಾಜ್ಯಗಳನ್ನು ತಲುಪಿದೆ. ಮುಂದಿನ ಮೂರು ದಿನಗಳಲ್ಲಿ ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಉಳಿದ ಭಾಗಗಳನ್ನು ಆವರಿಸುವ ನಿರೀಕ್ಷೆಯಿದೆ. ಕಳೆದ 30 ದಿನಗಳಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ.11ರಷ್ಟು ಕಡಿಮೆ ಮಳೆಯಾಗಿದೆ. ಆದರೆ, ಈಗ ದೇಶಾದ್ಯಂತ ಧಾರಾಕಾರ ಮಳೆಯಾಗುತ್ತಿದೆ.

ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾನುವಾರ ಭಾರೀ ಮಳೆಯಾಗಿದೆ.
ಜೊತೆಗೆ ಈಶಾನ್ಯ ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಪರಿಚಲನೆಯಿಂದಾಗಿ ಗುಜರಾತ್ನಲ್ಲಿ ಭಾರೀ ಮಳೆಯಾಗುತ್ತಿದೆ. ಸೂರತ್, ಭುಜ್, ವಾಪಿ, ಭರೂಚ್ ಮತ್ತು ಅಹಮದಾಬಾದ್ ಪ್ರದೇಶಗಳು ಜಲಾವೃತಗೊಂಡಿವೆ. ಇನ್ನು ನಾಲ್ಕು ದಿನ ರಾಜ್ಯದಲ್ಲಿ ಇದೇ ರೀತಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

ಐವರು ನೀರು ಪಾಲು!
ಭಾನುವಾರ ಮಧ್ಯಾಹ್ನ ಒಂದೇ ಕುಟುಂಬದ ಐವರು ಪುಣೆ ಸಮೀಪದ ಲೋನಾವಲದ ಭೂಶಿ ಅಣೆಕಟ್ಟಿನ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇವರಲ್ಲಿ ಒಬ್ಬ ಮಹಿಳೆ, 13 ವರ್ಷದ ಬಾಲಕಿ, 6 ವರ್ಷದ ಇಬ್ಬರು ಬಾಲಕಿಯರು ಮತ್ತು 4 ವರ್ಷದ ಬಾಲಕ ಸೇರಿದ್ದಾರೆ. ಈ ಪೈಕಿ ಮಹಿಳೆ ಹಾಗೂ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.
ಭಾನುವಾರ ರಜೆ ದಿನವಾಗಿದ್ದರಿಂದ ನೀರು ತುಂಬಿ ಹರಿಯುತ್ತಿರುವ ಭೂಶಿ ಅಣೆಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳಿದ್ದರು. ಈ ವೇಳೆ ಏಕಾಏಕಿ ಜೋರಾಗಿ ಹರಿಯುತ್ತಿದ್ದ ನೀರಿನ ರಭಸಕ್ಕೆ ಐವರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರ ಶವಗಳು ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿವೆ. ಮೂರು ಶವಗಳು ಪತ್ತೆಯಾದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಇಂದು ಬೆಳಗ್ಗೆ ರಕ್ಷಣಾ ಕಾರ್ಯ ಪುನರಾರಂಭವಾಗಿದೆ.

25 ರಾಜ್ಯಗಳಲ್ಲಿ ಮುಂದಿನ ಐದು ದಿನ ಮಳೆ
ಐಎಂಡಿ ಪ್ರಕಾರ, ಸೋಮವಾರ ದೇಶದಾದ್ಯಂತ ಹಗುರದಿಂದ ಭಾರೀ ಮಳೆಯಾಗಲಿದೆ. ದೇಶದ 25 ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಇದರಲ್ಲಿ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ, ಪಂಜಾಬ್, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ದೆಹಲಿ, ಬಿಹಾರ, ಜಾರ್ಖಂಡ್, ದಕ್ಷಿಣ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳು ಸೇರಿವೆ.
ಮಳೆಯಿಂದಾಗಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ. ಸಹಾಯಧನ
ದೆಹಲಿಯಲ್ಲಿ ಮಳೆಯಿಂದಾಗಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಜೂನ್ 28 ರಂದು ಸಂಭವಿಸಿದ ಭಾರೀ ಮಳೆಯಿಂದಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ದೆಹಲಿ ಸಚಿವ ಅತಿಶಿ ಭಾನುವಾರ ಘೋಷಿಸಿದ್ದಾರೆ.
ಮಾನ್ಸೂನ್ನ ಮೊದಲ ದಿನವಾದ ಶುಕ್ರವಾರ ದೆಹಲಿಯಲ್ಲಿ 228.1 ಮಿಮೀ ಮಳೆಯಾಗಿದ್ದು, ಇಡೀ ದೆಹಲಿ ಜಲಾವೃತವಾಗಿದೆ. ಇದರಿಂದಾಗಿ 11 ಮಂದಿ ಸಾವನ್ನಪ್ಪಿರುವ ಮಾಹಿತಿ ಬೆಳಕಿಗೆ ಬಂದಿದೆ. ಮುಂದಿನ ಎರಡು ದಿನಗಳ ಕಾಲ ದೆಹಲಿಯಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ಇದೆ. ಈ ಕಾರಣದಿಂದಾಗಿ, ಜಲಾವೃತವನ್ನು ತಡೆಗಟ್ಟಲು, ನಾಗರಿಕ ಸಂಸ್ಥೆಗಳು ಕೆಲಸ ಶುರು ಮಾಡಿವೆ.
ಸತತ 3ನೇ ವರ್ಷವೂ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆ
ಸತತ ಮೂರನೇ ವರ್ಷವೂ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಎರಡು-ಮೂರು ದಿನಗಳಿಂದ ದೇಶದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಳೆದ ಗುರುವಾರದವರೆಗೆ (ಜೂನ್ 27) ಜೂನ್ನಲ್ಲಿ ಶೇ.19 ರಷ್ಟಿದ್ದ ಮಳೆಯ ಕೊರತೆ ಭಾನುವಾರ (ಜೂ.30) ಶೇ.11ಕ್ಕೆ ಇಳಿದಿದೆ.
ಸಾಮಾನ್ಯವಾಗಿ ಜೂನ್ 29ರವರೆಗೆ 165.3 ಮಿ.ಮೀ ಮಳೆಯಾಗಬೇಕಿದ್ದು, 147.2 ಮಿ.ಮೀ ಮಳೆಯಾಗಿದೆ. ಜೂನ್ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗಿರುವುದು ಇದು ಮೂರನೇ ವರ್ಷ. 10 ವರ್ಷಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು ಕೇವಲ ನಾಲ್ಕು ಬಾರಿ ಮಾತ್ರ.












Click it and Unblock the Notifications