ಆರತಕ್ಷತೆಯ ದಿನ ವಧುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವರ!
ರಾಯ್ಪುರ ಫೆಬ್ರವರಿ 22: ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ವಿವಾಹದ ಆರತಕ್ಷತೆಗೆ ಮುನ್ನ ನವವಿವಾಹಿತರು ತಮ್ಮ ಮನೆಯ ಕೊಠಡಿಯೊಳಗೆ ತಮ್ಮ ದೇಹದ ಮೇಲೆ ಇರಿತದ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಇಬ್ಬರ ನಡುವೆ ಜಗಳ ನಡೆದಿದ್ದು, ಬಳಿಕ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಮಂಗಳವಾರ ತಡರಾತ್ರಿ ತಿಕ್ರಪಾರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಿಜ್ನಗರದಲ್ಲಿ ಈ ಘಟನೆ ನಡೆದಿದೆ. ಅಸ್ಲಾಂ (24) ಮತ್ತು ಕಹ್ಕಶಾ ಬಾನೊ (22) ಭಾನುವಾರ ವಿವಾಹವಾಗಿದ್ದು, ಮಂಗಳವಾರ ರಾತ್ರಿ ಅವರ ವಿವಾಹ ಆರತಕ್ಷತೆ ನಡೆಯಬೇಕಿತ್ತು. ಅವರು ತಮ್ಮ ಕೊಠಡಿಯೊಳಗೆ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದಾಗ ವರನ ತಾಯಿ ವಧುವಿನ ಕಿರುಚಾಟವನ್ನು ಕೇಳಿ ಗಾಬರಿಗೊಂಡಿದ್ದಾರೆ.

ಕೋಣೆಯು ಒಳಗಿನಿಂದ ಬೀಗ ಹಾಕಲ್ಪಟ್ಟಿತ್ತು. ಅವರು ಪ್ರತಿಕ್ರಿಯಿಸದಿದ್ದಾಗ, ಕುಟುಂಬದ ಸದಸ್ಯರು ಕಿಟಕಿಯ ಮೂಲಕ ಇಣುಕಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಾಗಿಲು ಒಡೆದು ಒಳನುಗ್ಗಿ ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸ್ಥಳದಿಂದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.
ದಂಪತಿಗಳ ನಡುವೆ ವಾಗ್ವಾದ ನಡೆದಿದ್ದು, ಪತಿ ಪತ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications