7 ಕೋಟಿ ವಿಮೆ ಹಣಕ್ಕಾಗಿ ತನ್ನದೆ ಸಾವಿನ ನಾಟಕವಾಡಿದ ತೆಲಂಗಾಣದ ಸರ್ಕಾರಿ ಉದ್ಯೋಗಿಗಾದ ಗತಿಯೇನು?
ಹೈದರಾಬಾದ್, ಜನವರಿ, 19: ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಮಾತಿದೆ. ಆದರೆ ಹಣಕ್ಕಾಗಿ ಏನೂ ಬೇಕಾದರೂ ಮಾಡುವ ಜನರ ಸಂಕ್ಯೆ ಹೆಚ್ಚಾಗಿದೆ. ಕೊನೆಗೆ ತಾವೇ ಸತ್ತು ಹೋದ ಹಾಗೆಯೂ ಮಾಡುವವರಿದ್ದಾರೆ. ಹೀಗೇ 7 ಕೋಟಿ ರೂಪಾಯಿಗೂ ಅಧಿಕ ವಿಮಾ ಹಣ ಪಡೆಯಲು ತನ್ನದೇ ಸಾವಿನ ನಾಟಕವಾಡಿದ ಸರ್ಕಾರಿ ಅಧಿಕಾರಿ ಈಗ ಜೈಲಿನ ಕಂಬಿ ಎಣಿಸುತ್ತಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣ ರಾಜ್ಯ ಸೆಕ್ರೆಟರಿಯೇಟ್ನಲ್ಲಿ ಸಹಾಯಕ ಸೆಕ್ಷನ್ ಆಫೀಸರ್ ಆಗಿರುವ ವ್ಯಕ್ತಿ ಮಾಡಿರುವ ಈ ಕೃತ್ಯಕ್ಕೆ ಸಾಆಥ್ ನಿಡಿದ್ದ ಆತನ ಪತ್ನಿ ಮತ್ತು ಇತರ ನಾಲ್ವರನ್ನು ಮೇದಕ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ರಾಜ್ಯ ಸೆಕ್ರೆಟರಿಯೇಟ್ನಲ್ಲಿ ಸಹಾಯಕ ಸೆಕ್ಷನ್ ಆಫೀಸರ್ (ಎಎಸ್ಒ) ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ಆರೋಪಿ, ಷೇರು ಮಾರುಕಟ್ಟೆಯಲ್ಲಿ 85 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದರು. ಇದರಿಂದ ಹೊರಬರಲು ತನ್ನ ಪತ್ನಿ ಮತ್ತು ಸಂಬಂಧಿಕರೊಂದಿಗೆ ಸೇರಿ ಮತ್ತೊಬ್ಬ ವ್ಯಕ್ತಿಯನ್ನು ಕೊಂದು ತನ್ನ ಸಾವಿನ ನಾಟಕವಾಡಲು ಯೋಜನೆ ರೂಪಿಸಿದ್ದರು. ಬಳಿಕ ನಷ್ಟದಿಂದ ಚೇತರಿಸಿಕೊಳ್ಳಲು ಮತ್ತು ಅವರ ಸಾಲವನ್ನು ತೀರಿಸಲು ವಿಮಾ ಮೊತ್ತವನ್ನು ಕ್ಲೈಮ್ ಮಾಡುವುದು ಎಂದು ಪ್ಲ್ಯಾನ್ ಅಗಿತ್ತು.

ಈ ಯೋಜನೆಯ ಭಾಗವಾಗಿ, ಸರ್ಕಾರಿ ಅಧಿಕಾರಿ ಮತ್ತು ಇತರರು ಆತನನ್ನು ಹೋಲುವ ವ್ಯಕ್ತಿಯನ್ನು ಕೊಲ್ಲಲು ಯೋಜಿಸಿದ್ದರು. ಹೀಗಾಗಿಯೇ ಕಳೆದ ಒಂದು ವರ್ಷದಲ್ಲಿ ಅವರ ಹೆಸರಿನಲ್ಲಿ 7.4 ಕೋಟಿ ಮೌಲ್ಯದ 25 ವಿಮಾ ಪಾಲಿಸಿಗಳನ್ನು ಖರೀದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗಾಗಿ ಜನವರಿ 8 ರಂದು, ಎಎಸ್ಒ ಮತ್ತೊಬ್ಬ ಆರೋಪಿಯೊಂದಿಗೆ ನಿಜಾಮಾಬಾದ್ ರೈಲ್ವೆ ನಿಲ್ದಾಣದ ಬಳಿ ತನ್ನನ್ನು (ಎಎಸ್ಒ) ಹೋಲುವ ವ್ಯಕ್ತಿಯನ್ನು ಯಾವುದೋ ನೆಪದಲ್ಲಿ ಜೊತೆಯಲ್ಲಿ ಬರುವಂತೆ ಕೇಳಿಕೊಂಡಿದ್ದಾನೆ. ಇವರಿಬ್ಬರೂ ಆ ವ್ಯಕ್ತಿಗೆ ತಲೆ ಬೋಳಿಸಿ, ಅಧಿಕಾರಿಯ ಉಡುಗೆ ತೊಡಿಸಿ, ನಂತರ ವೆಂಕಟಾಪುರ ಗ್ರಾಮಕ್ಕೆ ಕರೆದೊಯ್ಯಲಾಗಿದೆ. ನಂತರ ಕಾರಿನ ಒಳಗೆ ಮತ್ತು ಹೊರಗೆ ಪೆಟ್ರೋಲ್ ಸುರಿದು ಕಾರಿನಲ್ಲಿ ಕುಳಿತುಕೊಳ್ಳಲು ವ್ಯಕ್ತಿಗೆ ಒತ್ತಾಯಿಸಿದ್ದಾರೆ. ಆತ ನಿರಾಕರಿಸಿದಾಗ, ಇಬ್ಬರೂ ಕೊಡಲಿ ಮತ್ತು ದೊಣ್ಣೆಗಳಿಂದ ಆತನನ್ನು ಕೊಂದು, ಶವವನ್ನು ಕಾರಿನಲ್ಲಿ ಹಾಕಿ ನಂತರ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇದಕ್ ಜಿಲ್ಲೆಯ ವೆಂಕಟಾಪುರ ಗ್ರಾಮದ ಹೊರವಲಯದಲ್ಲಿರುವ ಕಮರಿಯಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಕಾರಿನಲ್ಲಿ ಸುಟ್ಟು ಕರಕಲಾದ ವ್ಯಕ್ತಿಯ ಶವ ಪತ್ತೆಯಾದ ನಂತರ ಪೊಲೀಸರು ಈ ಹಿಂದೆ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ಎಲ್ಲಾ ಕೋನಗಳಿಂದ ತನಿಖೆ ಕೈಗೊಂಡಿದ್ದರು.

ಬ್ಯಾಗ್ನಲ್ಲಿ ಪತ್ತೆಯಾದ ಗುರುತಿನ ಚೀಟಿಯ ಆಧಾರದ ಮೇಲೆ ಸರ್ಕಾರಿ ನೌಕರನನ್ನು ಮೃತ ವ್ಯಕ್ತಿ ಎಂದು ಆರಂಭದಲ್ಲಿ ನಂಬಲಾಗಿತ್ತು. ಹೈದರಾಬಾದ್ನಲ್ಲಿರುವ ತೆಲಂಗಾಣ ರಾಜ್ಯ ಸಚಿವಾಲಯದಲ್ಲಿ ಸಹಾಯಕ ವಿಭಾಗ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ 44 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿತ್ತು.
ಆದರೆ, ತನಿಖೆಯ ಸಂದರ್ಭದಲ್ಲಿ, ಉದ್ಯೋಗಿ ಜೀವಂತವಾಗಿರುವುದು, ವಿಮಾ ಹಣವನ್ನು ಪಡೆಯಲು ಅವನು ತನ್ನ ಸಾವನ್ನೇ ನಾಟಕವಾಡಿರುವುದು ಬೆಳಕಿಗೆ ಬಂದಿತ್ತು. ಮಂಗಳವಾರ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಆತನ ಪತ್ನಿ ಮತ್ತು ಇಬ್ಬರು ಸಂಬಂಧಿಕರು ಸೇರಿದಂತೆ ನಾಲ್ವರನ್ನು ಔಪಚಾರಿಕವಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications