ರಾಜಕೀಯ ಲಾಭಕ್ಕಾಗಿ ಏನೋ ಮಾಡಿಬಿಡುವ ಹಪಹಪಿ ಇಲ್ಲ: ಪ್ರಧಾನಿ
ರಾಯ್ ಗಡ್, ಡಿಸೆಂಬರ್ 24: ಕೇಂದ್ರ ಸರಕಾರ ರಾಜಕೀಯ ಲಾಭಕ್ಕಾಗಿ, ದೂರದೃಷ್ಟಿ ಇಟ್ಟುಕೊಳ್ಳದೆ ನೋಟು ನಿಷೇಧದ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದ ದೇಶಕ್ಕೆ ದೀರ್ಘಾವಧಿಯಲ್ಲಿ ಲಾಭವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ನೋಟು ನಿಷೇಧದ ಜತೆಗೆ ದೇಶದ ಆರ್ಥಿಕತೆ ಬಗ್ಗೆಯೂ ಅವರು ಮಾತನಾಡಿದರು.
'ನಾನು ಒಂದು ವಿಷಯವನ್ನು ಸ್ಪಷ್ಟಪಡಿಸ್ತೀನಿ. ಭಾರತದ ಭವ್ಯ ಭವಿಷ್ಯಕ್ಕಾಗಿ ಸರಕಾರವು ತುಂಬ ಶಕ್ತವಾದ ಮತ್ತು ವಿವೇಕಯುತವಾದ ಆರ್ಥಿಕ ನೀತಿಗಳನ್ನು ಅನುಸರಿಸುತ್ತದೆ. ರಾಜಕೀಯ ಲಾಭಕ್ಕಾಗಿ, ತಕ್ಷಣಕ್ಕೆ ಏನೋ ಮಾಡಿಬಿಡಬೇಕೆಂಬ ಹಪಹಪಿ ನಮಗಿಲ್ಲ ಎಂದು ಮೋದಿ ಹೇಳಿದರು.
ರಾಯ್ ಗಡ ಜಿಲ್ಲೆಯಲ್ಲಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮ್ಯಾನೇಜ್ ಮೆಂಟ್ ನ ಹೊಸ ಕ್ಯಾಂಪಸ್ ಉದ್ಘಾಟಿಸಿದ ಪ್ರಧಾನಿ, ದೇಶಕ್ಕೆ ಒಳಿತಾಗುತ್ತದೆ ಎಂಬ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ನಾವು ಯಾವುದಕ್ಕೂ ಹಿಂಜರಿಯುವುದಿಲ್ಲ. ನಾಚಿಕೆ ಮಾತಿಲ್ಲ. ಅದಕ್ಕೆ ನೋಟು ನಿಷೇಧ ಒಂದು ಉದಾಹರಣೆ ಎಂದು ಹೇಳಿದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳು ನೋಟು ನಿಷೇಧ ವಿಚಾರವಾಗಿ ಸರಕಾರದ ವಿರುದ್ಧ ಕೆಂಡ ಕಾರುತ್ತಿವೆ. ಸಂಸತ್ ನೊಳಗೆ ಹಾಗೂ ಹೊರಗೆ ಆರೋಪಗಳನ್ನು ಮಾಡುತ್ತಿವೆ. ನೋಟು ನಿಷೇಧ ಸರಿಯಾಗಿ ಜಾರಿಯಾಗಿಲ್ಲ. ಇದರಿಂದ ಭ್ರಷ್ಟರಿಗಿಂತ ಬಡವರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸುತ್ತಿವೆ.
ಆದರೆ, ಈಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಉಪ ಚುನಾವಣೆಗಳಲ್ಲಿ ಜನರು ಬಿಜೆಪಿಯನ್ನು ಗೆಲ್ಲಿಸಿರುವುದು ಗಮನಿಸಿದರೆ ನೋಟು ನಿಷೇಧದ ನಿರ್ಧಾರಕ್ಕೆ ಜನ ಬೆಂಬಲ ಇದೆ ಎಂದು ಗೊತ್ತಾಗುತ್ತಿದೆ ಎಂದು ಬಿಜೆಪಿ ಹೇಳಿಕೊಂಡಿದೆ.