ಗೋವಾ: ಮತ್ತೊಮ್ಮೆ ಸರ್ಕಾರ ರಚನೆಗೆ ಮುಂದಾದ ಕಾಂಗ್ರೆಸ್
ಪಣಜಿ, ಅಕ್ಟೋಬರ್ 15: ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಅನಾರೋಗ್ಯ ಪೀಡಿತರಾಗಿ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆದು ಸದ್ಯ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿದ್ದಾಗಲೂ ಆಡಳಿತ ಯಂತ್ರ ಸರಾಗ ನಡೆಯುವುದಂತೆ ನೋಡಿಕೊಂಡಿದ್ದರು.
ಆದರೆ, ಗೋವಾ ಕಾಂಗ್ರೆಸ್ ಮಾತ್ರ ತನ್ನ ಸರ್ಕಾರ ರಚನೆ ಪ್ರಯತ್ನವನ್ನು ಮತ್ತೊಮ್ಮೆ ಮುಂದುವರೆಸಿದೆ. ಬಿಜೆಪಿ ಸರ್ಕಾರಕ್ಕೆ ಬೇಕಾದ ಬೆಂಬಲವಿಲ್ಲ, ಆಡಳಿತ ಯಂತ್ರ ಕುಸಿದಿದೆ ಎಂದು ಆರೋಪಿಸಿದೆ.
ಈ ಹಿಂದೆ ಸರ್ಕಾರ ರಚನೆಗೆ ಯತ್ನಿಸಿ, ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದ ಕಾಂಗ್ರೆಸ್ ಗೆ ಮುಖಭಂಗವಾಗಿತ್ತು. ರಾಜ್ಯಪಾಲರ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ.
ಮೇದೋಜೀರಕ ಗ್ರಂಥಿಯ ಸಮಸ್ಯೆಯಿಂದ ಬಳಲುತ್ತಿರುವ 62 ವರ್ಷದ ಪರಿಕ್ಕರ್ ಅವರನ್ನು ಸೆಪ್ಟೆಂಬರ್ 15ರಂದು ನವದೆಹಲಿಯ ಏಮ್ಸ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಈಗ ದೆಹಲಿಯಿಂದ ಗೋವಾಕ್ಕೆ ತೆರಳಲು ಸಿದ್ಧರಾಗಿದ್ದಾರೆ. ಆದರೆ, ಪಣಜಿಯಲ್ಲಿರುವ ತಮ್ಮ ಖಾಸಗಿ ನಿವಾಸದಲ್ಲಿ ಉಳಿದುಕೊಳ್ಳಲಿದ್ದಾರೆ.
ಶುಕ್ರವಾರದಂದು ಗೋವಾ ಬಿಜೆಪಿ ಸಮಿತಿಯ ಸದಸ್ಯರು, ಸಚಿವರು ಹಾಗೂ ಮಿತ್ರ ಪಕ್ಷಗಳ ಸದಸ್ಯರ ಜತೆಗೆ ಪರಿಕರ್ ಸಭೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇತ್ತ ಗೋವಾ ಕಾಂಗ್ರೆಸ್, ಬಿಜೆಪಿಯ ಆಡಳಿತ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಗೋವಾದಲ್ಲಿ ಪಕ್ಷಗಳ ಬಲಾಬಲ ಏನಿದೆ?
40 ಮಂದಿ ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ 16 ಮಂದಿ ಕಾಂಗ್ರೆಸ್ ಶಾಸಕರಿದ್ದರೆ, ಬಿಜೆಪಿ 14 ಮಂದಿ ಶಾಸಕರನ್ನು ಹೊಂದಿದೆ. ಗೋವಾ ಫಾರ್ವರ್ಡ್ ಪಕ್ಷ ಹಾಗೂ ಎಂಜಿಪಿಯ ತಲಾ ಮೂವರು ಹಾಗೂ 3 ಪಕ್ಷೇತರರು ಬೆಂಬಲ ಸೂಚಿಸಿದ್ದಾರೆ. ಹೀಗಾಗಿ 23 ಸಂಖ್ಯಾ ಬಲ ಪಡೆದು ಮನೋಹರ್ ಪರಿಕ್ಕಾರ್ ಅವರು ಸರ್ಕಾರ ರಚಿಸಲು ಸಾಧ್ಯವಾಯಿತು.

ನಾಯಕತ್ವ ಬದಲಾವಣೆ ಕೂಗು
ಮನೋಹರ್ ಪರಿಕ್ಕಾರ್ ಅವರು ವಿದೇಶಕ್ಕೆ ಚಿಕಿತ್ಸೆಗಾಗಿ ತೆರಳಿದ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಗೋವಾದಲ್ಲಿ ನಾಯಕತ್ವ ಬದಲಿ ಮಾಡಲು ಚರ್ಚೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಸ್ಥಾನ ತೊರೆಯಲು ಮನೋಹರ್ ಪರಿಕ್ಕರ್ ಮುಂದಾಗಿ, ತಮ್ಮ ಇಚ್ಛೆಯನ್ನು ಹೈಕಮಾಂಡ್ ಗೆ ತಿಳಿಸಿದ್ದರು. ಆದರೆ, ಅವರ ಮನವಿಯನ್ನು ಪುರಸ್ಕರಿಸಿಲ್ಲ. ಬದಲಿಗೆ ಗೋವಾ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಹೇಳಿ, ಮನೋಹರ ಪರಿಕ್ಕರ್ ಅವರೇ ಗೋವಾ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸ್ವತಃ ಅಮಿತ್ ಶಾ ಸ್ಪಷ್ಟಪಡಿಸಿದ್ದರು.

ಮನೋಹರ್ ಬಗ್ಗೆ ಬಿಜೆಪಿಗೆ ಭಯ
ಮನೋಹರ್ ಬಗ್ಗೆ ಬಿಜೆಪಿಗೆ ಭಯ: ಮನೋಹರ್ ಪರಿಕ್ಕಾರ್ ಅವರನ್ನು ಗೋವಾ ಸಿಎಂ ಸ್ಥಾನದಿಂದ ಕೆಳಗಿಸಿದರೆ, ಬಿಜೆಪಿಗೆ ಇಲ್ಲಿನ ಸರ್ಕಾರ ಕುಸಿಯುವ ಭೀತಿ ಇದೆ. ಅಲ್ಲದೆ, ಆನಂತರ ಮನೋಹರ್ ಅವರು ರಫೆಲ್ ಒಪ್ಪಂದ ಬಗ್ಗೆ ತಮಗೆ ಗೊತ್ತಿರುವ ಮಾಹಿತಿಯನ್ನು ಹೊರ ಹಾಕಬಹುದು. ಇದೆಲ್ಲವೂ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ. ಹೀಗಾಗಿ, ಅವರೇ ಕೇಳಿಕೊಂಡರೂ ಅವರನ್ನು ಸಿಎಂ ಸ್ಥಾನದಲ್ಲಿ ಮುಂದುವರೆಸಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

ಆಡಳಿತ ವಿರೋಧಿ ಅಲೆ ಆರಂಭ
ಪ್ರಜಾಪ್ರಭುತ್ವ ವಿರೋಧಿ: ಆಡಳಿತ ವಿರೋಧಿ ಅಲೆ ಆರಂಭವಾಗಿದ್ದು, ಪ್ರಜಾಪ್ರಭುತ್ವವನ್ನು ಬಲಿಕೊಟ್ಟು, ಪ್ರಜೆಗಳಿಗೆ ಬಿಜೆಪಿ ಅನ್ಯಾಯ ಮಾಡಿದೆ. ಆಡಳಿತ ದಾಹದಿಂದ ಬಿಜೆಪಿ ಬಳಲುತ್ತಿದೆ, ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಅಡಳಿತ ನಡೆಸುವ ಯಾವುದೇ ನೈತಿಕ, ಸಾಂವಿಧಾನಿಕ ಹಕ್ಕಿಲ್ಲ, ಕೂಡಲೇ ವಿಧಾನಸಭೆ ವಿಸರ್ಜಿಸಬೇಕು ಎಂದು ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಾಂಕರ್ ಹೇಳಿದ್ದಾರೆ.
|
ಆಡಳಿತ ವಿರೋಧಿ ಅಲೆ ಆರಂಭ
ಕಾಂಗ್ರೆಸ್ ಪರ ಜನರು ಮತ ಹಾಕಿ ಗೆಲ್ಲಿಸಿದ್ದರು ಆದರೆ, ರಾಜ್ಯಪಾಲೆ ಮೃದಲಾ ಸಿನ್ಹಾ ಅವರು ಜನತೆಯ ಮಾತು ಕೇಳಿಸಿಕೊಳ್ಳಬೇಕು. ವಿಶೇಷ ಅಧಿವೇಶನಕ್ಕೆ ಕರೆ ನೀಡಿ, ಬಹುಮತ ಸಾಬೀತುಪಡಿಸಲು ನಮಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಹೇಳಿದರು

ಮನೋಹರ್ ಸಂಪುಟಕ್ಕೆ ಸರ್ಜರಿ
ಅನಾರೋಗ್ಯದಿಂದ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಫ್ರಾನ್ಸಿಸ್ ಡಿ ಸೋಜಾ ಹಾಗೂ ಕೆಲ ತಿಂಗಳುಗಳ ಹಿಂದೆ ಮೆದುಳು ಪಾರ್ಶ್ವಕ್ಕೆ ಒಳಗಾದ ಪಾಂಡುರಂಗ ಮಡೈಕರ್ ಅವರನ್ನು ಸಂಪುಟದಿಂದ ಮನೋಹರ ಪರಿಕ್ಕರ್ ಅವರು ಕೈಬಿಟ್ಟಿದ್ದಾರೆ.
ಫ್ರಾನ್ಸಿಸ್ ಅವರು ನಗರಾಭಿವೃದ್ಧಿ ಖಾತೆ ನಿರ್ವಹಿಸುತ್ತಿದ್ದರೆ, ಮಡೈಕರ್ ಅವರು ಇಂಧನ ಖಾತೆ ನಿರ್ವಹಿಸುತ್ತಿದ್ದರು. ಈ ಇಬ್ಬರ ಸ್ಥಾನಕ್ಕೆ ಮಿಲಿಂದ್ ನಾಯಕ್ ಮತ್ತು ನೀಲೇಶ್ ಕಾಬ್ರಾಲ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಈಗ ಗೋವಾಕ್ಕೆ ಹಿಂತಿರುಗಿದ ಬಳಿಕ ಮನೋಹರ್ ಅವರು ಮತ್ತೊಮ್ಮೆ ತಮ್ಮ ಸಚಿವ ಸಂಪುಟಕ್ಕೆ ಸರ್ಜರಿ ಮಾಡುವ ಸಾಧ್ಯತೆಯಿದೆ. ತಮ್ಮ ಬಳಿ ಇರುವ ಕೆಲ ಖಾತೆಗಳನ್ನು ಬೇರೆಯವರಿಗೆ ಹಂಚಲಿದ್ದಾರೆ ಎಂದು ತಿಳಿದು ಬಂದಿದೆ.










Click it and Unblock the Notifications