G20 Summit: ಮೋದಿ ಇದ್ದ ಕಡೆ ಮನುವಾದ ಇರುತ್ತೆ: ಕಾಂಗ್ರೆಸ್ ನಾಯಕ
ಭಾರತದ ನೇತೃತ್ವದಲ್ಲಿ ಜಿ20 ಶೃಂಗಸಭೆ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಈ ಮಹತ್ವದ ಶೃಂಗಸಭೆ ಶುರುವಾಗಲಿದೆ. ಆದ್ರೆ ಇದೆ ಸಂದರ್ಭದಲ್ಲಿ ಪ್ರಧಾನಿ ಮೋದಿ & ಕೇಂದ್ರ ಸರ್ಕಾರದ ವಿರುದ್ಧ ಜಾತಿ ತಾರತಮ್ಯದ ಆರೋಪ ಮಾಡಿದೆ ಕಾಂಗ್ರೆಸ್. ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಿ20 ಶೃಂಗಸಭೆಯ ವಿಶೇಷ ಔತಣ ಕೂಟಕ್ಕೆ ಆಹ್ವಾನಿಸದೇ ಇರುವ ಬಗ್ಗೆ ಆಕ್ರೋಶ ಹೊರಹಾಕಿದೆ ಕಾಂಗ್ರೆಸ್.
ಹೌದು, ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಿ20 ನಾಯಕರಿಗೆ ವಿಶೇಷ ಔತಣ ಕೂಟ ಆಯೋಜಿಸಿದ್ದಾರೆ. ಆದರೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಔತಣ ಕೂಟಕ್ಕೆ ಆಹ್ವಾನಿಸಿಲ್ಲ. ಕ್ಯಾಬಿನೆಟ್ ಮತ್ತು ರಾಜ್ಯ ಸಚಿವರು, ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳು ಸೇರಿದಂತೆ ಎಲ್ಲಾ ರಾಜ್ಯಗಳ ಸಿಎಂಗಳನ್ನು ಔತಣಕೂಟಕ್ಕೆ ಆಹ್ವಾನಿಸಲಾಗಿದ್ದು ವಿಶ್ವ ನಾಯಕರು ಭಾಗವಹಿಸಲಿದ್ದಾರೆ. ಆದ್ರೆ ಈ ಔತಣ ಕೂಟಕ್ಕೆ ಖರ್ಗೆ ಅವರಿಗೆ ಮಾತ್ರ ಆಹ್ವಾನ ನೀಡಿಲ್ಲ. ಇದು ವಿವಾದದ ಕಿಚ್ಚು ಹೊತ್ತಿಸಿರುವ ಹೊತ್ತಲ್ಲೇ, ಕಾಂಗ್ರೆಸ್ ನಾಯಕ ಜಾತಿ ತಾರತಮ್ಯದ ಆರೋಪ ಮಾಡಿದ್ದಾರೆ.

'ಮೋದಿ ಇದ್ದ ಕಡೆ ಮನುವಾದ...'
ತಮಿಳುನಾಡು ಕಾಂಗ್ರೆಸ್ ನಾಯಕ ಮೋಹನ್ ಕುಮಾರಮಂಗಲಂ ಪ್ರಧಾನಿ ಮೋದಿ ಮತ್ತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ, 'ಮೋದಿ ಇದ್ದ ಕಡೆ ಮನುವಾದ ಇರುತ್ತೆ' ಅಂತಾ ಆರೋಪ ಮಾಡಿದ್ದಾರೆ. ಅಲ್ಲದೆ ದಲಿತ ನಾಯಕ ಖರ್ಗೆ ಅವರಿಗೆ ಮಹತ್ವದ ಕಾರ್ಯಕ್ರಮಕ್ಕೇ ಆಹ್ವಾನ ನೀಡದಿರುವ ಬಗ್ಗೆ ಕಾಂಗ್ರೆಸ್ ನಾಯಕ ಮೋಹನ್ ಕುಮಾರಮಂಗಲಂ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಮನುವಿನ ಪರಂಪರೆಯನ್ನು ಎತ್ತಿಹಿಡಿಯುತ್ತಿದ್ದಾರೆ ಎನ್ನುವ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾರ್ಲಿಮೆಂಟ್ ವಿಚಾರ & ರಾಷ್ಟ್ರಪತಿ!
ಹೌದು, ಇದೇ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಇನ್ನೂ ಹಲವು ಆರೋಪ ಮಾಡಿದ್ದಾರೆ ಮೋಹನ್ ಕುಮಾರಮಂಗಲಂ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಆಹ್ವಾನಿಸಲಿಲ್ಲ, ಹಾಗೇ ನೂತನ ಸಂಸತ್ ಭವನ ಉದ್ಘಾಟನೆಯ ಸಂದರ್ಭದಲ್ಲಿ ಈಗಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಿಲ್ಲ. ಇದು ಹಿಂದುಳಿದ ವರ್ಗಗಳ ನಾಯಕರ ಬಗ್ಗೆ ಕೇಂದ್ರದ ತಾತ್ಸಾರ ತೋರಿಸುತ್ತಿದೆ ಎಂದಿದ್ದಾರೆ ಕೈ ನಾಯಕ ಮೋಹನ್ ಕುಮಾರಮಂಗಲಂ.

ಅಲ್ಲದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮಲ್ಲಿಕಾರ್ಜುನ ಖರ್ಗೆ ಅವ್ರನ್ನ ಹೀಗೆ ಔತಣ ಕೂಟಕ್ಕೆ ಆಹ್ವಾನಿಸದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಇದು ಕೇಂದ್ರದ ತಾತ್ಸಾರ ಹಾಗೂ ವಿಪಕ್ಷಗಳ ಬಗ್ಗೆ ಇರುವ ಮನೋಭಾವ ತೋರಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಹೀಗೆ ಜಿ20 ಶೃಂಗಸಭೆಯ ವಿಶೇಷ ಔತಣ ಕೂಟ ದೊಡ್ಡ ವಿವಾದ ಎಬ್ಬಿಸಿ, ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ಆದರೆ ಈವರೆಗೂ ಕೇಂದ್ರ ಸರ್ಕಾರವಾಗಲಿ ಅಥವಾ ಸಂಬಂಧಪಟ್ಟವರು ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಇದೇ ವಿಚಾರವನ್ನ ಹಿಡಿದು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕುತ್ತಿದೆ.












Click it and Unblock the Notifications