ಮತ್ತೆ ಸಂಕಷ್ಟಕ್ಕೆ ಸಿಲುಕಿದ ದೇವಮಾತೆ ರಾಧೇ ಮಾ
ಮುಂಬೈ, ಡಿ. 18: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾತೆ ರಾಧೇ ಮಾ ಬಂಧನದ ಭೀತಿಯಿಂದ ಪಾರಾಗಿ ಬಾಂಬೆ ಹೈಕೋರ್ಟ್ ನಿಂದ ನಿರೀಕ್ಷಿತಾ ಜಾಮೀನು ಪಡೆದುಕೊಂಡಿದ್ದಾರೆ. ಆದರೆ, ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಧೇ ಮಾ ವಿರುದ್ಧ ತನಿಖೆ ನಡೆಸುವಂತೆ ಹರಿಯಾಣ ಹೈಕೋರ್ಟ್ ಪೊಲೀಸರಿಗೆ ನಿರ್ದೇಶಿಸಿದೆ.
ಪಂಜಾಬಿನ ಫಗ್ವಾರ ನಿವಾಸಿ ಅವರು ಸಲ್ಲಿಸಿರುವ ದೂರಿನ ಅನ್ವಯ ರಾಧೇ ಮಾ ಅವರು ಸ್ವಯಂಘೋಷಿತ ದೇವಮಾತೆ ಎಂದು ಕರೆದುಕೊಳ್ಳುವುದು, ದುರ್ಗಾ ಮಾತೆಯ ಅವತಾರ ಎಂದು ಹೇಳಿಕೊಂಡಿರುವುದು ಎಲ್ಲವೂ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ.[ಸ್ವಯಂ ಘೋಷಿತ ದೇವಮಾತೆ ರಾಧೇ ಮಾಗೆ ರಿಲೀಫ್]

ಅರ್ಜಿ ವಿಚಾರಣೆ ನಡೆಸಿದ ಹರ್ಯಾಣ ಹೈಕೋರ್ಟ್, ಈ ಬಗ್ಗೆ ಮೂರು ತಿಂಗಳೊಳಗೆ ತನಿಖೆ ನಡೆಸಿ ವಿಚಾರಣೆ ಕೈಗೊಳ್ಳುವಂತೆ ಕಪುರ್ಥಾಲಾ ಪೊಲೀಸರಿಗೆ ಆದೇಶಿಸಲಾಗಿದೆ.
ರಾಧೇ ಮಾ ವಿರುದ್ಧ ಅರ್ಜಿ ಹಾಕಿರುವ ಸುರೇಂದ್ರ ಮಿತ್ತಲ್ ಅವರು ಮಾತನಾಡಿ, ದುರ್ಗಾ ದೇವಿಯ ಅವತಾರ ಎಂದು ಹೇಳಿಕೊಂಡು ಧರ್ಮದ ಹೆಸರಿನಲ್ಲಿ ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತಿದೆ. ರಾಧೇ ಮಾ ವಿರುದ್ಧ ಈಗಾಗಲೇ ಕೇಳಿ ಬಂದಿರುವ ದೂರುಗಳು ಇತ್ಯರ್ಥವಾಗಿಲ್ಲ, ಆಪಾದನೆಗಳಿಂದ ಆಕೆ ಮುಕ್ತರಾಗಿಲ್ಲ ಹೀಗಾಗಿ ದೇವಿಯಂತೆ ವಸ್ತ್ರಧರಿಸಿ ಭಕ್ತರ ಜೊತೆ ನಡೆದುಕೊಳ್ಳುವುದನ್ನು ನೋಡಲು ಆಗುವುದಿಲ್ಲ ಎಂದಿದ್ದಾರೆ.
ಈಗಾಗಲೇ ವರದಕ್ಷಿಣೆ ಕಿರುಕುಳಕ್ಕೆ ಕುಮ್ಮಕ್ಕು ನೀಡಿರುವ ಆರೋಪ, ಸೆಕ್ಸ್ ರಾಕೆಟ್ ನಡೆಸಿರುವ ಆರೋಪವನ್ನು ರಾಧೇ ಮಾ ಹೊತ್ತುಕೊಂಡಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications