ಮೋದಿ ಸಮಾವೇಶಕ್ಕೆ ಬಾಂಬ್ ಹಾಕಿದ್ದ ಉಗ್ರನ ಸೆರೆ
ನವದೆಹಲಿ, ಮಾ.23: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಮಾವೇಶದ ಸಂದರ್ಭದಲ್ಲಿ ಸ್ಫೋಟ ನಡೆಸಿದ್ದ ಪಾಕಿಸ್ತಾನ ಮೂಲದ ಉಗ್ರ ಸೇರಿದಂತೆ ಇಂಡಿಯನ್ ಮುಜಾಹಿದೀನ್ (ಐಎಂ) ಸಂಘಟನೆಯ ನಾಲ್ವರು ಉಗ್ರರನ್ನು ದೆಹಲಿ ವಿಶೇಷ ಘಟಕ ಹಾಗೂ ರಾಜಸ್ಥಾನ ಪೊಲೀಸರುಭಾನುವಾರ ಬಂಧಿಸಿದ್ದಾರೆ.
ನರೇಂದ್ರ ಮೋದಿ ಅವರ ಪಾಟ್ನಾ ಮತ್ತು ಗಯಾ ಸಮಾವೇಶದಲ್ಲಿ ನಡೆದ ಸ್ಫೋಟ ಹಾಗೂ 13/7ರ ಮುಂಬೈ ಸ್ಫೋಟದ ಪ್ರಮುಖ ಆರೋಪಿ ಪಾಕಿಸ್ತಾನ ಮೂಲದ ವಕಾಸ್ ಬಂಧಿತ ಪ್ರಮುಕ ಉಗ್ರನಾಗಿದ್ದಾನೆ.ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಮುಖ ರಾಜಕೀಯ ನಾಯಕರನ್ನು ಗುರಿಯಾಗಿರಿಸಿಕೊಂಡು ಸ್ಫೋಟ ನಡೆಸುವ ಸಂಚನ್ನು ರೂಪಿಸಿದ್ದ ಎಂದು ತಿಳಿದು ಬಂದಿದೆ. ಬಂಧಿತರನ್ನು ವಖಾರ್ ಅಜರ್, ಮಹರೂಫ್, ಮೆಹರಾಜ್ ಹಾಗೂ ಸಖೀಬ್ ಎಂದು ಗುರುತಿಸಾಲಾಗಿದೆ ಎಂದು ವಿಶೇಷ ಘಟಕದ ಆಯುಕ್ತ ಎಸ್ ಎಂ ಶ್ರೀವಾಸ್ತವ್ ಹೇಳಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಅನೇಕ ನಗರಗಳಲ್ಲಿ ಬಾಂಬ್ ಗಳನ್ನು ಸ್ಫೋಟಿಸುವ ಮೂಲಕ ಮತದಾರರಲ್ಲಿ ಭೀತಿ ಮೂಡಿಸಿ ಜನರು ಮತಗಟ್ಟೆಗೆ ಹೋಗಲು ಹಿಂಜರಿಯುವಂತೆ ಮಾಡುವುದು ಇವರ ಉದ್ದೇಶವಾಗಿತ್ತು. ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಪ್ರಮುಖ ರಾಜಕೀಯ ನಾಯಕರನ್ನು ಕೊಲ್ಲಲು ಕೂಡ ಈ ಉಗ್ರರು ಸಂಚು ಮಾಡಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೆ ಬಿಜೆಪಿ ನಾಯಕರು ತಮಗೆ ಉಗ್ರರ ಭೀತಿ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ, ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್ ಮತ್ತು ನಿರ್ಮಲಾ ಸೀತಾರಾಮನ್ ಅವರ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರನ್ನು ಭೇಟಿ ಮಾಡಿ ಇಂಡಿಯನ್ ಮುಜಾಹಿದ್ದೀನ್ ಉಗ್ರರು ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರನ್ನು ಕೊಲ್ಲುವ ಸಂಚು ಮಾಡಿದ್ದು, ಪಕ್ಷದ ನಾಯಕರುಗಳಿಗೆ ನೀಡಿರುವ ಭದ್ರತೆ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಇಂದಿನ ಇಂಡಿಯನ್ ಮುಜಾಹಿದೀನ್ ಉಗ್ರರ ಬಂಧನವಾಗಿರುವುದನ್ನು ಗಮನಿಸಿದರೆ ಬಿಜೆಪಿ ನಾಯಕರ ಅನುಮಾನಕ್ಕೆ ಪುಷ್ಟಿ ನೀಡಿದಂತಾಗಿದೆ.
ಬಿಜೆಪಿ ನಾಯಕರ ಮನವಿಗೆ ಸ್ಪಂದಿಸಿದ್ದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ರಾಜಕೀಯ ನಾಯಕರ ಭದ್ರತೆಗೆ ವಿಶೇಷ ಗಮನ ಹರಿಸಿ ಭದ್ರತೆಯನ್ನು ಹೆಚ್ಚಿಸುವ ಭರವಸೆ ನೀಡಿದರು. ರಾಜ್ಯಮಟ್ಟದಲ್ಲಿ ಕೂಡ ವಿವಿಧ ನಾಯಕರಿಗೆ ಸೂಕ್ತ ರಕ್ಷಣೆ ಒದಗಿಸಲು ಆಯಾ ರಾಜ್ಯಗಳ ಆಡಳಿತಗಳಿಗೆ ಸೂಚಿಸಲಾಗಿದೆ ಎಂದು ಶಿಂಧೆ ತಿಳಿಸಿದ್ದಾರೆ. (ಪಿಟಿಐ)












Click it and Unblock the Notifications