ನೋಟಿನ ನಂಟು ಬಿಡಿಸಿಕೊಂಡು ಇಹಲೋಕ ತ್ಯಜಿಸಿದವರು 55 ಮಂದಿ
ಬೆಂಗಳೂರು, ನವೆಂಬರ್ 18: ನೋಟು ರದ್ದು ಎಂದು ಘೋಷಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಜಿಕಲ್ ಸ್ಟ್ರೈಕ್ ಅಂತಲೇ ಕರೆಯಲಾಗುತ್ತಿದೆ. ಅದು ಹೌದಾದರೆ, ಈ ಸರ್ಜಿಕಲ್ ಸ್ಟ್ರೈಕ್ ನಲ್ಲಿ ನವೆಂಬರ್ 17ರವರೆಗೆ 55 ಮಂದಿ ಉಸಿರು ಚೆಲ್ಲಿದ್ದಾರೆ. ಇದು ಅಧಿಕೃತವಾಗಿ ಮಾಧ್ಯಮಗಳಲ್ಲಿ ವರದಿಯಾದ ಸಾವಿನ ಸಂಖ್ಯೆ. ಇನ್ನು ವರದಿಯೇ ಅಗದ ಸಾವಿನ ಸಂಖ್ಯೆ ಮತ್ತೂ ಹೆಚ್ಚಾಗಬಹುದು.
ಹೆಚ್ಚಿನ ಸಾವುಗಳು ಹಿರಿಯ ನಾಗರಿಕರದು. ಬ್ಯಾಂಕ್ ಗಳಲ್ಲಿ ದೊಡ್ಡ ಸಾಲಿನಲ್ಲಿ ನಿಂತಿರುವಾಗ ಆಗಿರುವಂಥದ್ದು. ಕೆಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಅದರಲ್ಲೂ ಗೃಹಿಣಿಯರು ಸಂಖ್ಯೆ ಹೆಚ್ಚು. ಸಾವನ್ನಪ್ಪಿದವರ ಪೈಕಿ ಒಬ್ಬೊಬ್ಬರ ಸಂಕಟ ಒಂದೊಂದು ರೀತಿಯದು. ಆದರೆ ಅವೆಲ್ಲ ತಳುಕು ಹಾಕಿಕೊಂಡಿರುವುದು ನೋಟು ರದ್ದು ನಿರ್ಧಾರಕ್ಕೆ.[10 ಪ್ರಶ್ನೆಗಳನ್ನು ಹುಟ್ಟುಹಾಕಿದ ದಿಢೀರ್ ತೀರ್ಮಾನಗಳು]

ದೆಹಲಿಯ ಇಪ್ಪತ್ತೈದು ವರ್ಷದ ವ್ಯಾಪಾರಿ ವೀರೇಂದರ್ ಬಸೋಯಾಗೆ ಹನ್ನೆರಡು ಲಕ್ಷ ರುಪಾಯಿ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆಯೇ ಬಂದಿತ್ತು. ಅದರೆ ಅದನ್ನು ಬದಲಿಕೊಳ್ಳೋದಿಕ್ಕೆ ಅಗಲಿಲ್ಲ ಎಂಬ ಚಿಂತೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಚಿತ್ತೂರಿನ ಎಪ್ಪತ್ತು ವರ್ಷದ ರತ್ನಾ ಪಿಳ್ಳೈ ಬ್ಯಾಂಕ್ ನಲ್ಲಿ ಸರತಿಯಲ್ಲಿ ನಿಂತಿದ್ದಾಗಲೇ ಸಾವನ್ನಪ್ಪಿದ್ದಾರೆ.
ಹರಿಯಾಣದ ಬ್ಯಾಂಕ್ ಮ್ಯಾನೇಜರ್ ವೊಬ್ಬರು ಸತತ ಮೂರು ದಿನ ಹಗಲು-ರಾತ್ರಿ ಕೆಲಸ ಮಾಡಿದ್ದವರು ಮೃತಪಟ್ಟಿದ್ದಾರೆ. ಇನ್ನು ರಾಜಸ್ತಾನದ ಜಗದೀಶ್ ಪನ್ವಾರ್ ಅವರಿಗೆ ತಮ್ಮ ಮಗಳ ಮದುವೆಗೆ ನಗದು ಹೊಂದಿಸಲಿಕ್ಕೆ ಅಗಲ್ಲ ಎಂಬ ಆತಂಕವಾಗಿ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ.[33 ಜನರನ್ನು ಆಪೋಶನ ತೆಗೆದುಕೊಂಡ 500, 1000 ನೋಟು!]
ತೆಲಂಗಾಣದ ನಿಜಾಮ್ ಬಾದ್ ನ ಆಟೋ ಡ್ರೈವರ್ ಶೇಖ್ ಬಶೀರ್ ತಮ್ಮ ವಾಹನ ಸಾಲ ಕಟ್ಟಲು ಹಳೇ ನೋಟುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಸ್ವೀಕರಿಸಲ್ಲ ಎಂದು ಫೈನಾನ್ಷಿಯರ್ ಹೇಳಿದ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಚಿಕ್ಕಬಳ್ಳಾಪುರದ ನಲವತ್ತು ವರ್ಷದ ಮಹಿಳೆ ತನ್ನ ಕುಡುಕ ಗಂಡನಿಂದ ಕಾಪಾಡಿಕೊಂಡಿದ್ದ ಹಣ ಜಮೆ ಮಾಡುವ ಸಂದರ್ಭದಲ್ಲಿ ಕಳೆದುಕೊಂಡು, ಆ ದುಃಖದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸನ್ನಿವೇಶದಲ್ಲಿ ಕೆಲವು ಸಾವು ಆಯಾ ವ್ಯಕ್ತಿಯ ದೈಹಿಕ-ಮಾನಸಿಕ ಸ್ಥಿತಿಯ ಪ್ರಭಾವ ಕೂಡ ಆಗಿರಬಹುದು.












Click it and Unblock the Notifications