ಜೆಎನ್ ಯುನಲ್ಲಿ ಮಾಸ್ಕ್ ತೊಟ್ಟವರ ದುಷ್ಕೃತ್ಯಕ್ಕೆ ವಿದ್ಯಾರ್ಥಿಗಳು ಕೆಂಡಾಮಂಡಲ
ದೆಹಲಿ, ಜನವರಿ.06: ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯವು ಇತ್ತೀಚಿಗೆ ಗಲಭೆ, ಹಿಂಸಾಚಾರ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಿದೆ. ಬಾನುವಾರ ವಿವಿ ಆವರಣದಲ್ಲಿ ಮುಸುಕುಧಾರಿಗಳು ನಡೆಸಿದ ಕೃತ್ಯವನ್ನು ವಿರೋಧಿಸಿ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಮಾಸ್ಕ್ ಧರಿಸಿ ವಿವಿಯಲ್ಲಿ ರಾಡ್ ನಿಂದ ಕಂಡ ಕಂಡವರ ಮೇಲೆಲ್ಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಇದರಿಂದ 36ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 18ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದೆಹಲಿ ಪೊಲೀಸರು ಹಿಂಸಾಚಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಈಗಾಗಲೇ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋಗಳನ್ನೇ ಆಧರಿಸಿ ತನಿಖೆಯನ್ನು ಚುರುಕುಗೊಳಿಸಲಾಗುತ್ತಿದೆ ಎಂದು ಡಿಜಿಪಿ ದೇವೇಂದ್ರ ಆರ್ಯ ತಿಳಿಸಿದ್ದಾರೆ.

ಜೆಎನ್ ಯು ಹಿಂಸಾಚಾರಕ್ಕೆ ಕೆರಳಿದ ಸಿಲಿಕಾನ್ ಸಿಟಿ ಸ್ಟೂಡೆಂಟ್ಸ್
ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಗರದ ಟೌನ್ ಹಾಲ್ ಬಳಿ ನೆರೆದ ನೂರಾರು ವಿದ್ಯಾರ್ಥಿಗಳು ಜೆಎನ್ ಯು ಘಟನೆ ವಿರುದ್ಧ ಧಿಕ್ಕಾರ ಕೂಗಿದರು.

ಅಮೃತಸರ್ ನಲ್ಲೂ ಮೊಳಗಿದ ಧಿಕ್ಕಾರ ಘೋಷಣೆ
ಪಂಜಾಬ್ ನಲ್ಲೂ ಕೂಡಾ ಜೆಎನ್ ಯು ಹಿಂಸಾಚಾರವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಅಮೃತ್ ಸರ್ ನಲ್ಲಿ ಬ್ಯಾನರ್, ಪೋಸ್ಟರ್ ಗಳನ್ನು ಹಿಡಿದು ಬೀದಿಗಿಳಿದ ವಿದ್ಯಾರ್ಥಿ ಸಂಘಟನೆಗಳು ಧಿಕ್ಕಾರ ಘೋಷಣೆಗಳನ್ನು ಕೂಗಿದರು.

ಸಿಎಎ ವಿರುದ್ಧ ರಾಂಚಿ ವಿವಿಯಲ್ಲೂ ಪ್ರತಿಭಟನೆ
ಇತ್ತ, ರಾಂಚಿ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕಟ್ಟಡದ ಎದುರು ನೆರೆದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ನೀಯ ನಾಗರಿಕ ನೊಂದಣಿ ಹಾಗೂ ಜೆಎನ್ ಯುನಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

ಬಾನುವಾರ ಜೆಎನ್ ಯು ವಿವಿಯಲ್ಲಿ ನಡೆದಿದ್ದೇನು?
ಕಳೆದ ಜನವರಿ.05ರ ಬಾನುವಾರ ಜೆಎನ್ ಯುಗೆ ಸಂಜೆ 6.30ರ ವೇಳೆಗೆ 50 ಮಂದಿ ಮುಸುಕುಧಾರಿಗಳ ತಂಡ ಏಕಾಏಕಿ ನುಗ್ಗಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ 36ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದವು. ನಂತರ ದೆಹಲಿಯ ಈ ಕೇಂದ್ರ ವಿಶ್ವವಿದ್ಯಾಲಯದಲ್ಲಿನ ಆತಂಕ ವಾತವರಣ, ಹಲ್ಲೆ ಹಿಂದೆ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಇದೆ ಎಂದು ಜೆಎನ್ ಯು ವಿದ್ಯಾರ್ಥಿ ಸಂಘಟನೆ ಹೇಳಿಕೆ ನೀಡಿದೆ. ಆದರೆ, ಈ ಗಲಾಟೆ ಶುರುವಾಗಿದ್ದು ಎಡಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳಿಂದ ಎಂದು ಎಬಿವಿಪಿ ಹೇಳಿದೆ.












Click it and Unblock the Notifications