ಇಂಟರ್ ಪೋಲ್ ನಿಂದ ಮೋದಿಗೆ ಭರವಸೆ : ದಾವೂದ್ ಸೆರೆ ಖಚಿತ
ನವದೆಹಲಿ, ನ.19: ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಸೆರೆ ಹಿಡಿಯಲು ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ಬೆಂಬಲ ನೀಡುವುದಾಗಿ ಇಂಟರ್ ಪೋಲ್ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಇಂಟರ್ ಪೋಲ್ ಮುಖ್ಯಸ್ಥ ಜರ್ಜೆನ್ ಸ್ಟಾಕ್ ಅವರ ಜೊತೆ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ದಾವೂದ್ ಇಬ್ರಾಹಿಂನನ್ನು ಸೆರೆ ಹಿಡಿಯುವುದು ಖಚಿತ ಎಂದು ಪ್ರಧಾನಿ ಮೋದಿ ಅವರಿಗೆ ಇಂಟರ್ ಪೋಲ್ ಮುಖ್ಯಸ್ಥ ಭರವಸೆ ನೀಡಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೂಡಾ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.[ಮೋದಿ ಸರ್ಕಾರದ ಮುಂದಿನ ಟಾರ್ಗೆಟ್ ದಾವೂದ್]
6ನೇ ಆಸ್ತಿ ರೆಕವರಿ ಬಗ್ಗೆ ಜಾಗತಿಕ ಫೋಕಲ್ ಪಾಯಿಂಟ್ ಸಮ್ಮೇಳನದಲ್ಲಿ ಭಾಗವಹಿಸಲು ಸ್ಟಾಕ್ ಅವರು ಭಾರತಕ್ಕೆ ಬಂದಿದ್ದಾರೆ. ಸುಮಾರು 50 ದೇಶಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿರುವುದು ವಿಶೇಷ.

ವಿದೇಶಗಳಲ್ಲಿ ಸುಮಾರು 50 ಸ್ಥಳಗಳಲ್ಲಿ ದಾವೂದ್ ಇಬ್ರಾಹಿಂಗೆ ಸೇರಿದ ಆಸ್ತಿ ಪಾಸ್ತಿ ಇದೆ ಎಂದು ಗುರುತಿಸಲಾಗಿದ್ದು, ಇದನ್ನು ವಶಪಡಿಸಲು ವಿವಿಧ ದೇಶಗಳ ನೆರವು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ದೇಶಗಳು ಒಗ್ಗೂಡಿ ಕಾರ್ಯಾಚರಣೆಗೆ ಇಳಿಯುವ ನಿರೀಕ್ಷೆಯಿದೆ. [ಛೋಟಾ ರಾಜನ್ : ಡಾನ್ ಆಗಿದ್ದು ಹೇಗೆ?]
ಹತ್ತು ಹಲವು ವರ್ಷಗಳಿಂದ ಇಂಟರ್ ಪೋಲ್ ನ ಹದ್ದಿನ ಕಣ್ಣು ಡಿ ಗ್ಯಾಂಗ್ ಮೇಲೆ ಬಿದ್ದಿದೆ. ಅದರೆ, ಅನೇಕ ಬಾರಿ ಕೈಗೆ ಸಿಗದಂತೆ ಚಳ್ಳೆಹಣ್ಣು ತಿನ್ನಿಸುವಲ್ಲಿ ದಾವೂದ್ ಯಶಸ್ವಿಯಾಗಿದ್ದಾನೆ.
ಕೊನೆಯ ಬಾರಿಗೆ ದುಬೈಗೆ ದಾವೂದ್ ತೆರಳಿದ ಮಾಹಿತಿ ಬಿಟ್ಟರೆ ಆತ ಸದ್ಯಕ್ಕೆ ಕರಾಚಿಯಲ್ಲಿ ನೆಲೆಸಿರುವುದಕ್ಕೆ ಖಚಿತ ದಾಖಲೆಗಳು ಸಿಕ್ಕಿವೆ. ಪಾಕಿಸ್ತಾನದ ಐಎಸ್ ಐ ನೆರವಿನಿಂದ ಅಡಗಿ ಕುಳಿತಿರುವ ದಾವೂದ್ ನನ್ನು ಸೆರೆ ಹಿಡಿಯಲು ಭಾರತಕ್ಕೆ ಇಂಟರ್ ಪೋಲ್ ನೆರವು ಸಿಗಲಿದೆ.
ಛೋಟಾ ರಾಜನ್ ನಂತರ 1993ರ ಮುಂಬೈ ಸರಣಿ ಸ್ಫೋಟದ ಆರೋಪಿ ದಾವೂದ್ ಇಬ್ರಾಹಿಂ ನಮ್ಮ ಟಾರ್ಗೆಟ್ ಎಂದು ಸಚಿವ ಕೀರೆನ್ ಹೇಳಿದ್ದಾರೆ. ಪಾಕಿಸ್ತಾನದ ಕರಾಚಿಯಲ್ಲಿ ಅಡಗಿ ಕುಳಿತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಕೂಡ ಛೋಟಾ ರಾಜನ್ ರೀತಿಯಲ್ಲೇ ಬಂಧಿಸಿ ಭಾರತಕ್ಕೆ ಕರೆತರಲಾಗುವುದು ಎಂದಿದನ್ನು ಇಲ್ಲಿ ಸ್ಮರಿಸಬಹುದು (ಒನ್ ಇಂಡಿಯಾ ಸುದ್ದಿ)












Click it and Unblock the Notifications