'ಗುಲಾಬ್' ಚಂಡಮಾರುತ ಪ್ರಭಾವ; ಈ ಎರಡು ರಾಜ್ಯಗಳಿಗೆ ಹೈಅಲರ್ಟ್
ನವದೆಹಲಿ, ಸೆಪ್ಟೆಂಬರ್ 25: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪ್ರಭಾವ ತೀವ್ರಗೊಂಡು ಚಂಡಮಾರುತ ರೂಪ ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಭಾನುವಾರ ಸಂಜೆ ವೇಳೆಗೆ ಭಾರತದ ಪೂರ್ವ ಕರಾವಳಿಯಲ್ಲಿ 70ರಿಂದ 80 ಕಿಲೋಮೀಟರ್ ವೇಗದಲ್ಲಿ ಮಾರುತಗಳು ಬೀಸಲಿವೆ. ಈ 'ಗುಲಾಬ್' ಚಂಡಮಾರುತ ಎರಡು ರಾಜ್ಯಗಳನ್ನು ಹಾದುಹೋಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಬಂಗಾಳಕೊಲ್ಲಿಯ ಈಶಾನ್ಯ ಹಾಗೂ ಪೂರ್ವ ಮಧ್ಯಭಾಗದಲ್ಲಿ ವಾಯುಭಾರ ಕುಸಿತವಾಗಲಿದ್ದು, ಇದರ ಪ್ರಭಾವ ಒಡಿಶಾ ಹಾಗೂ ಆಂಧ್ರಪ್ರದೇಶದ ಮೇಲೆ ಹೆಚ್ಚಾಗಲಿದೆ. ಈ ಎರಡು ರಾಜ್ಯಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಗೋಪಾಲಪುರದ ಪೂರ್ವ-ಆಗ್ನೇಯ ದಿಕ್ಕಿನಲ್ಲಿ 510 ಕಿ.ಮೀ. ಹಾಗೂ ಆಂಧ್ರದ ಕಳಿಂಗಪಟ್ಟಣದಿಂದ 590ಕಿ.ಮೀ. ದೂರದಲ್ಲಿ ಶನಿವಾರ ವಾಯುಭಾರ ಕುಸಿತ ಸಂಭವಿಸಿದೆ.
ಚಂಡಮಾರುತ ಪ್ರಭಾವದಿಂದಾಗಿ ಪಶ್ಚಿಮ ಬಂಗಾಳದಲ್ಲಿಯೂ ಶನಿವಾರ ಅಧಿಕ ಮಳೆ ಮುನ್ಸೂಚನೆ ನೀಡಲಾಗಿದೆ. ಕೋಲ್ಕತ್ತಾ, ಮಿಡ್ನಾಪುರ, ಉತ್ತರ 24 ಪರಗಣ ಹಾಗೂ ದಕ್ಷಿಣ 24 ಪರಗಳ ಜಿಲ್ಲೆಗಳಲ್ಲಿ ಅಧಿಕ ಮಳೆ ಮುನ್ಸೂಚನೆ ನೀಡಲಾಗಿದೆ. ಕೋಲ್ಕತ್ತಾದಲ್ಲಿ ಕಂಟ್ರೋಲ್ ರೂಂ ಆರಂಬಿಸಲಾಗಿದೆ.
ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳಲಿದೆ. ಚಂಡಮಾರುತ ಪಶ್ಚಿಮ ದಿಕ್ಕಿಗೆ ಚಲಿಸಿ, ಆಂಧ್ರ ಪ್ರದೇಶದ ಉತ್ತರ ಭಾಗ ಹಾಗೂ ಒಡಿಶಾದ ದಕ್ಷಿಣ ಭಾಗದ ಕರಾವಳಿಯನ್ನು ದಾಟಲಿದೆ. ಸೆಪ್ಟೆಂಬರ್ 26ರಂದು ವಿಶಾಖಪಟ್ಟಣಂ ಹಾಗೂ ಗೋಪಾಲಪುರಂ ನಡುವೆ ಕಳಿಂಗಪಟ್ಟಣಂ ಸುತ್ತಮುತ್ತ ಚಂಡಮಾರುತ ಉಂಟಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ.
ಎರಡೂ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಒಡಿಶಾದ ಏಳು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ. ಗಂಜಾಮ್, ಗಜಪತಿ, ಕೋರಪುಟ್, ರಾಯಗಡ, ನಬರಂಗಪುರ, ಕಂದಮಾಲ್, ಮಾಲ್ಕಂಗಿರಿಯಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ಒಡಿಶಾ ಸರ್ಕಾರ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ತಿಳಿಸಿದೆ.

ಆಂಧ್ರ ಪ್ರದೇಶ ಹಾಗೂ ಅದಕ್ಕೆ ಹೊಂದಿಕೊಂಡಿರುವ ದಕ್ಷಿಣ ಕರಾವಳಿ ಪ್ರದೇಶಗಳಿಗೆ ಚಂಡಮಾರುತ ಎಚ್ಚರಿಕೆ ನೀಡಲಾಗಿದೆ. ಈ ಚಂಡಮಾರುತದ ಪ್ರಭಾವದಿಂದಾಗಿ ಶನಿವಾರ ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಆಂಧ್ರದ ಕರಾವಳಿ ತೀರಗಳಲ್ಲಿ ಅತ್ಯಧಿಕ ಮಳೆಯಾಗಬಹುದು ಎಂದು ತಿಳಿಸಿದೆ.
ಮೂರು ದಿನಗಳ ಅವಧಿ ಈ ಚಂಡಮಾರುತ ಪ್ರಭಾವ ಈ ರಾಜ್ಯಗಳಲ್ಲಿ ಇರಲಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ಎರಡು ದಿನ ಪ್ರವಾಹ ಮುನ್ನೆಚ್ಚರಿಕೆಯನ್ನೂ ಆಂಧ್ರ, ಒಡಿಶಾ, ಛತ್ತೀಸ್ಗಡಕ್ಕೆ ನೀಡಲಾಗಿದೆ.
ಸೆಪ್ಟೆಂಬರ್ 26ರಂದು ದಕ್ಷಿಣ ಒಡಿಶಾ, ಆಂಧ್ರ ಕರಾವಳಿ ಉತ್ತರ, ತೆಲಂಗಾಣದಲ್ಲಿ ಭಾರೀ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದೆ. ಸೋಮವಾರದ ವೇಳೆಗೆ ಚಂಡಮಾರುತ ಪ್ರಭಾವ ತಗ್ಗಲಿದೆ. ಪಶ್ಚಿಮ ಹಾಗೂ ನೈಋತ್ಯದೆಡೆಗೆ ಮಾರುತಗಳು ಚಲಿಸಲಿದ್ದು, ಮಂಗಳವಾರ ಮಧ್ಯಪ್ರದೇಶ ತಲುಪಲಿದೆ. ಬುಧವಾರ ಗುಜರಾತ್ ತಲುಪಲಿದ್ದು, ಈ ಪ್ರದೇಶಗಳಲ್ಲಿ ಆಯಾ ದಿನ ಮಳೆ ಅಧಿಕವಾಗಬಹುದು ಎಂದು ತಿಳಿಸಿದೆ.
ಈ ಮುಂಗಾರಿನಲ್ಲಿ ಸೃಷ್ಟಿಯಾಗಿರುವ ಎರಡನೇ ವಾಯುಭಾರ ಕುಸಿತ ಇದಾಗಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಎರಡನೇ ಬಾರಿ ಸೃಷ್ಟಿಯಾಗಿದೆ. ಜೂನ್ ತಿಂಗಳಿನಿಂದ ಆಗಸ್ಟ್ವರೆಗೆ ವಾಯುಭಾರ ಕುಸಿತ ಉಂಟಾಗಿರಲಿಲ್ಲ.
ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಮಧ್ಯ ಹಾಗೂ ಪಶ್ಚಿಮ ಭಾರತದಲ್ಲಿ ಐದರಿಂದ ಆರು ಬಾರಿ ವಾಯುಭಾರ ಕುಸಿತ ಉಂಟಾಗುತ್ತದೆ. ಆದರೆ ಈ ಬಾರಿ ಎರಡು ಬಾರಿ ಆಗಿದ್ದು, ಸೆಪ್ಟೆಂಬರ್ 28ರ ವೇಳೆಗೆ ಮತ್ತೊಂದು ಚಂಡಮಾರುತ ಪರಿಚಲನೆ ಇರಲಿದ್ದು, ಪೂರ್ವ ಹಾಗೂ ಮಧ್ಯ ಭಾರತದಲ್ಲಿ ಅಧಿಕ ಮಳೆ ತರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications