ಭಾರತದಲ್ಲಿ 'ಮಹಾ' ಆತಂಕ ಸೃಷ್ಟಿಸಿದ ಕೊರೊನಾ; ಇಲ್ಲಿದೆ ಅಸಲಿ ಕಾರಣ
ನವದೆಹಲಿ, ಮಾರ್ಚ್.17: ಕೊರೊನಾ.. ಕೊರೊನಾ.. ಕೊರೊನಾ.. ಚೀನಾದಲ್ಲಿ ಹುಟ್ಟಿದ ಈ ರಕ್ತಬೀಜಾಸುರನ ಅಟ್ಟಹಾಸಕ್ಕೆ ಭಾರತದಲ್ಲಿ 100ಕ್ಕೂ ಅಧಿಕ ಮಂದಿ ಸಿಲುಕಿ ನರಳುತ್ತಿರುವುದು ದೃಢಪಟ್ಟಿದೆ. ಅತಿಹೆಚ್ಚು ಪ್ರಕರಣಗಳು ಕಾಣಿಸಿಕೊಂಡ ಮಹಾರಾಷ್ಟ್ರವು ಬೂದಿ ಮುಚ್ಚಿದ ಕೆಂಡದಂತೆ ಆಗಿ ಬಿಟ್ಟಿದೆ.
Recommended Video
ಚೀನಾದಲ್ಲಿ ಮಾರಕ ಸೋಂಕು ಅಬ್ಬರಿಸುತ್ತಿದ್ದರೂ ನಿರಾತಂಕವಾಗಿದ್ದ ಭಾರತದಲ್ಲಿ ಕೊರೊನಾ ಕೀಚಕನ ಕಪಿಮುಷ್ಟಿಗೆ 129ಕ್ಕೂ ಅಧಿಕ ಮಂದಿ ಸಿಲುಕಿರುವುದು ದೃಢಪಟ್ಟಿದೆ. ಸೋಂಕಿತರ ಸಂಪರ್ಕದಲ್ಲಿ ಇರುವವರ ವೈದ್ಯಕೀಯ ತಪಾಸಣೆಗೆ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ.
ಕರ್ನಾಟಕದ ಕಲಬುರಗಿಯಲ್ಲಿ ಕೊರೊನಾ ವೈರಸ್ ಗೆ 76 ವರ್ಷದ ಮೊಹ್ಮದ್ ಹುಸೇನ್ ಸಿದ್ದಿಕಿ ಪ್ರಾಣ ಬಿಟ್ಟಿದ್ದು, ಇದರ ಬೆನ್ನಲ್ಲೇ ನವದೆಹಲಿಯಲ್ಲಿ 68 ವರ್ಷದ ಮತ್ತೊಬ್ಬ ವ್ಯಕ್ತಿಯು ಮಾರಕ ರೋಗಕ್ಕೆ ಬಲಿಯಾಗಿದ್ದನು. ಮುಂಬೈನಲ್ಲಿ ಮಂಗಳವಾರ 64 ವರ್ಷದ ಮತ್ತೊಬ್ಬ ವ್ಯಕ್ತಿ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾನೆ.

ಮಹಾರಾಷ್ಟ್ರವೇ ಕೊರೊನಾ ವೈರಸ್ ಕಾಟಕ್ಕೆ ಸ್ತಬ್ಧ
ಮಹಾರಾಷ್ಟ್ರ ಒಂದರಲ್ಲೇ 39ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದ್ದು ಸಾಕಷ್ಟು ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನೆಲೆ ರಾಜ್ಯಕ್ಕೆ ರಾಜ್ಯವೇ ಸ್ತಬ್ಧಗೊಂಡಿದೆ. ಮುಂದಿನ ಮೂರು ದಿನಗಳ ಕಾಲ ಪೂಣೆಯಲ್ಲಿ ಅಂಗಡಿ-ಮುಂಗಟ್ಟುಗಳೆಲ್ಲ ಬಂದ್ ಮಾಡಲಾಗಿದೆ. ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆಗಳು ಖಾಲಿ ಖಾಲಿ ಹೊಡೆಯುತ್ತಿವೆ.
|
ಸಿನಿಮಾ ಥಿಯೇಟರ್, ಪಬ್-ಕ್ಲಬ್, ಜಿಮ್ ಬಂದ್
ರಾಜ್ಯದಲ್ಲಿ 39ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದಂತೆ ಮಹಾರಾಷ್ಟ್ರ ಸ್ತಬ್ಧಗೊಂಡಿದೆ. ಶಾಲಾ-ಕಾಲೇಜು, ಸಿನಿಮಾ ಥಿಯೇಟರ್, ಪಬ್-ಕ್ಲಬ್, ಜಿಮ್ ಗಳೆಲ್ಲ ಬಂದ್ ಆಗಿವೆ. ರಾಜ್ಯದ ಜನರು ಅನಗತ್ಯವಾಗಿ ಪ್ರಯಾಣ ಮಾಡದಂತೆ, ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ವೈರಸ್ ಸಹಾಯವಾಣಿ ಪರಿಚಯಿಸಿದ ಸರ್ಕಾರ
ಭಾರತದಲ್ಲಿ ಕೊರೊನಾ ವೈರಸ್ ಮಹಾಮಾರಿಯ ಹಾವಳಿ ಹೆಚ್ಚಾಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವಾಲಯವು ಹೊಸದಾಗಿ ಸಹಾಯವಾಣಿಯನ್ನು ಆರಂಭಿಸಿದೆ. ಈಗಾಗಲೇ ಜಾರಿಯಲ್ಲಿರುವ ಸಹಾಯವಾಣಿ 01123978046ರ ಜೊತೆಗೆ 1075 ಎಂಬ ಹೊಸ ಸಹಾಯವಾಣಿಯನ್ನು ಪರಿಚಯಿಸಿದೆ. ಈ ಸಹಾಯವಾಣಿಯು ದಿನದ 24ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಕೊರೊನಾಗೆ ಬಲಿಯಾದವರ ಸಂಖ್ಯೆ 7 ಸಾವಿರಕ್ಕೂ ಅಧಿಕ
ವಿಶ್ವದಾದ್ಯಂತ ಒಟ್ಟು 1,82,723 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಪೈಕಿ 7174 ಮಂದಿ ಮೃತಪಟ್ಟಿದ್ದಾರೆ. 79,883 ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.












Click it and Unblock the Notifications