ಇಲ್ಲಿ ಕಿರೀಟ ಧರಿಸೋದು ಜರೂರತ್ತು, ಅಲ್ಲಿ ಬದುಕು ಉಳಿಸೋಕೆ ಕಸರತ್ತು!

ಬನಶ್ಕಂಠ(ಗುಜರಾತ್), ನವೆಂಬರ್ 13: ಬಣ್ಣದ ಪೇಟತೊಟ್ಟು, ಮಾಲೆಗೆ ಕೊರಳೊಡ್ಡಿದರೆ ಎಲ್ಲಿ ಪೇಟ ಕೆಳಗೆ ಬಿದ್ದೀತೋ ಎಂಬ ಭಯದಲ್ಲೇ ತಲೆಬಾಗುವುದಕ್ಕೆ ಕಷ್ಟಪಡುತ್ತಿರುವ ರಾಹುಲ್ ಗಾಂಧಿಯವರ ಚಿತ್ರವನ್ನು 'ಪಿಕ್ಚರ್ ಆಫ್ ದಿ ಡೆ' ಎಂದರೆ ತಪ್ಪೇನಿಲ್ಲ.

ಪೇಟ ಬೀಳದಂತೆ ಉಳಿಸಿಕೊಳ್ಳೋದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಎಷ್ಟು ಮುಖ್ಯವೋ, ಅಧಿಕಾರ ಪಡೆದು ಗುಜರಾತ್ ನಲ್ಲಿ ಕಿರೀಟ ಧರಿಸುವುದೂ ಕಾಂಗ್ರೆಸ್ ಗೆ ಅಷ್ಟೇ ಮುಖ್ಯ. ಪ್ರಧಾನಿ ನರೇಂದ್ರ ಮೋದಿಯವರ ಕಾಂಗ್ರೆಸ್ ಮುಕ್ತ ಭಾರತದ ಅಲೆಗೆ ದೇಶದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಕಾಂಗ್ರೆಸ್ ಗೆ ಒಂದು ರಾಜ್ಯದ ಚುಕ್ಕಾಣಿಯನ್ನು ನೀಡುವುದಕ್ಕೆ ಕರ್ನಾಟಕವನ್ನು ಬಿಟ್ಟರೆ ಬೇರೆ ಯಾವ ರಾಜ್ಯಕ್ಕೂ ಸಾಧ್ಯವಿಲ್ಲವೇನೋ ಎಂಬಂಥ ಪರಿಸ್ಥಿತಿಯಲ್ಲಿ, ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅಖಾಡಕ್ಕಿಳಿದಿದ್ದಾರೆ.

ಗುಜರಾತ್ ನಲ್ಲಿ ಹಲವು rally ಗಳಲ್ಲಿ ಭಾಗವಹಿಸಿ, ಖುದ್ದು ಆಸ್ಥೆ ವಹಿಸಿ ಪ್ರಚಾರಕ್ಕಿಳಿದಿದ್ದಾರೆ ರಾಹುಲ್ ಗಾಂಧಿ. ಅತ್ತ ಕಿರೀಟ ಉಳಿಸಿಕೊಳ್ಳೋ ಜರೂರತ್ತಲ್ಲಿ ಕಾಂಗ್ರೆಸ್ಸಿಗರಿದ್ದರೆ, ಉತ್ತರ ಭಾರತದಲ್ಲಿ ಮೀತಿ ಮೀರಿದ ವಾಯುಮಾಲಿನ್ಯದಿಂದಾಗಿ ಸಾಮಾನ್ಯ ಜನರು ಬದುಕು ಉಳಿಸಿಕೊಳ್ಳುವ ಕಸರತ್ತಿಗೆ ಬಿದ್ದಿದ್ದಾರೆ. ಒಂದೆಡೆ ಕಿರೀಟ ಧರಿಸೋದು ಕಾಂಗ್ರೆಸ್ಸಿಗೆ ಜರೂರತ್ತು, ಸಾಮಾನ್ಯ ಜನರಿಗೆ ಬದುಕು ಉಳಿಸಿಕೊಳ್ಳೋದೇ ಕಸರತ್ತು! ಇದು ದೇಶದ ಇಬ್ಬಂದಿ ಸ್ಥಿತಿ.

ಇವುಗಳೊಂದಿಗೆ ದೇಶದಲ್ಲಿ ನಡೆದ ಮತ್ತೊಂದಷ್ಟು ಸುದ್ದಿಗಳ ಗುಚ್ಛ ಚಿತ್ರ ಸಮೇತ, ಇಲ್ಲಿದೆ...

ಪೇಟ ಬಿದ್ದೀತು ಜೋಕೆ..!

ಪೇಟ ಬಿದ್ದೀತು ಜೋಕೆ..!

ಗುಜರಾತಿನ ಬನಶ್ಕಂಠದಲ್ಲಿ ನ.12 ರಂದು ನಡೆದ ಪ್ರಚಾರ ಸಭೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಅಭಿಮಾನಿಯೊಬ್ಬರು ಪೇಟ ಹಾಕಿ ಸ್ವಾಗತಿಸಿದರು. ಇದೇ ಡಿಸೆಂಬರ್ 9 ಮತ್ತು 14 ರಂದು ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ದಣಿವರಿಯದೆ ಪ್ರಚಾರ ಕೈಗೊಂಡಿದ್ದಾರೆ. ಕೇಂದ್ರ ಎನ್ ಡಿಎ ಸರ್ಕಾರದ ಅಪನಗದೀಕರ, ಜಿಎಸ್ ಟಿಯಂಥ ನಿರ್ಧಾರಗಳು ಜನಸಾಮಾನ್ಯನ ಬದುಕಿಗೆ ಬರೆ ಎಳೆದಿವೆ ಎಂಬುದನ್ನೇ ಬಿಜೆಪಿ ವಿರುದ್ಧದ ಅಸ್ತ್ರವನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಗುಜರಾತಿನ ಸಿಂಹಾಸನ ಯಾರ ಪಾಲಾಗಲಿದೆ ಎಂಬುದು ಡಿ.18 ರ ಫಲಿತಾಂಶದಂದು ತಿಳಿಯಲಿದೆ.

ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು..!

ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು..!

ಉತ್ತರ ಪ್ರದೇಶದ ಮೀರತ್ ನಲ್ಲಿ ಅತಿಯಾದ ವಾಯುಮಾಲಿನ್ಯದಿಂದಾಗಿ ಎಲ್ಲೆಲ್ಲೂ ಧೂಳು ಮಿಶ್ರಿತ ಮಂಜು ತುಂಬಿದೆ. ದಿನವೆಲ್ಲ ಮಬ್ಬುಕವಿದ ವಾತಾವರಣ ಮೀರತ್ತಿನ ಜನರಿಗೆ ಅಸಹನೀಯ ಎನ್ನಿಸಿದದರೂ, ತುತ್ತಿನ ಚೀಲ ತುಂಬಿಕೊಳ್ಳುವುದು ಅನಿವಾರ್ಯ. ಅದಕ್ಕೆಂದೇ ವ್ಯಕ್ತಿಯೊಬ್ಬರು ವಾಯುಮಾಲಿನ್ಯದ ಅಸಾಧ್ಯ ಸನ್ನಿವೇಶದಲ್ಲೂ ಸೈಕಲ್ ತುಳಿಯುತ್ತ, ಬೆಲೂನು ಮಾರುತ್ತಿರುವ ದೃಶ್ಯ ಕಣ್ಣಿಗೆ ರಾಚುವಂತಿತ್ತು. ರಾಜಧಾನಿ ದೆಹಲಿ, ವಾರಣಾಸಿ, ಗುರ್ಗಾಂವ್, ಲಕ್ನೋ, ಮೀರತ್ ಸೇರಿದಂತೆ ಹಲವು ಪ್ರದೇಶಗಳು ವಾಯುಮಾಲಿನ್ಯದಿಂದ ತತ್ತರಿಸಿವೆ.

ಇಂಥ ಜೋಡೀನಾ ಎಲ್ಲಾರ ಕಂಡಿರಾ..?

ಇಂಥ ಜೋಡೀನಾ ಎಲ್ಲಾರ ಕಂಡಿರಾ..?

ಮುಂಬೈಯಲ್ಲಿ ನಡೆದ ಇಂಡಿಯನ್ ಸ್ಫೋರ್ಟ್ಸ್ ಆನರ್, ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಯಾಮರಾ ಕಣ್ಣಿಗೆ ಒಟ್ಟಾಗಿ ಪೋಸು ನೀಡಿದ ಸೆಲೆಬ್ರಿಟಿ ಜೋಡಿಗಳಾದ ವಿರಾಟ್ ಕೋಹ್ಲಿ ಮತ್ತು ಅನುಷ್ಕಾ ಶರ್ಮಾ , ತಮ್ಮ ಅಭಿಮಾನಿಗಳ ಕಣ್ಣು ತಂಪು ಮಾಡಿದರು. ಪ್ರೇಮಿಗಳಾದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಮತ್ತು ಬಾಲಿವುಡ್ ನ ಪ್ರಸಿದ್ಧ ತಾರೆ ಅನುಷ್ಕಾ ಶರ್ಮಾ ಸದ್ಯದಲ್ಲೇ ಹಸಮಣೆ ಏರಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹಬ್ಬಿತ್ತಾದರೂ, ಅವೆಲ್ಲ ಕೇವಲ 'ವದಂತಿ'ಗಳಷ್ಟೇ ಎಂದು ಇಬ್ಬರೂ ಸಮಜಾಯಿಷಿ ನೀಡಿದ್ದರು.

ನಟರು ರಾಜಕೀಯ ಸೇರೋದು ದುರಂತ!

ನಟರು ರಾಜಕೀಯ ಸೇರೋದು ದುರಂತ!

ಇತ್ತೀಚೆಗೆ ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರಾಜ್ ನ.12 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದ ನಡೆಸಿದರು. ತಾವು ಯಾವುದೇ ಕಾರಣಕ್ಕೂ ರಾಜಕೀಯ ಸೇರುವುದಿಲ್ಲ, ನಟರ ರಾಜಕೀಯ ಸೇರುವುದು ಒಂದು ದುರಂತ ಎಂದು ಅವರು ಪ್ರತಿಕ್ರಿಯಿಸಿದರು. ಸ್ನೇಹಿತೆ ಗೌರಿ ಲಂಕೇಶ್ ಹತ್ಯೆಯ ನಂತರ ಬಲಪಂಥೀಯರ ವಿರುದ್ಧ ಮತ್ತು ಕೇಂದ್ರ ಮೋದಿ ಸರ್ಕಾರದ ವಿರುದ್ಧ ಅವರು ನೀಡಿದ ಹಲವು ಹೇಳಿಕೆಗಳು ವಿವಾದ ಸೃಷ್ಟಿಸಿದ್ದವು.

ನಮಗೂ ಹಕ್ಕು ಕೊಡಿ!

ನಮಗೂ ಹಕ್ಕು ಕೊಡಿ!

ನವದೆಹಲಿಯಲ್ಲಿ ನ.12 ರಂದು ನಡೆದ 10ನೇ ಕ್ವೀರ್ ಪ್ರೈಡ್ ಮಾರ್ಚ್ ನಲ್ಲಿ ಸಲಿಂಗಿಗಳು, ಲಿಂಗ ಪರಿವರ್ತಿತರು, ತಮಗೂ ಎಲ್ಲರಂತೇ ಬದುಕುವ ಹಕ್ಕು ನೀಡಿ, ನಮ್ಮನ್ನೂ ಎಲ್ಲರಂತೆಯೇ ನೋಡಿ ಎಂದು ಪ್ರತಿಭಟನೆ ನಡೆಸಿದರು. ಎಲ್ ಜಿಬಿಟಿ(ಲೆಸ್ಬಿಯನ್, ಗೇ, ಬೈಸೆಕ್ಶುವಲ್, ಟ್ರಾನ್ಸ್ ಜೆಂಡರ್) ಗುಂಪಿನ ಸದಸ್ಯರು ಈ ಪ್ರತಿಭಟನೆ ನಡೆಸಿದರು.

ಚೆಂದದ ಧಿರಿಸಿನಲ್ಲಿ ಬ್ಯಾಡ್ಮಿಂಟನ್ ತಾರೆಯರು

ಚೆಂದದ ಧಿರಿಸಿನಲ್ಲಿ ಬ್ಯಾಡ್ಮಿಂಟನ್ ತಾರೆಯರು

ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆಯರಾದ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್ ಮುಂಬೈಯಲ್ಲಿ ನಡೆದ ಇಂಡಿಯನ್ ಸ್ಫೋರ್ಟ್ ಆನರ್ ನಲ್ಲಿ ಚೆಂದದ ಉಡುಗೆ ತೊಟ್ಟು ಮಿಂಚಿದ್ದು ಹೀಗೆ. 2016 ರ ರಿಯೋ ಒಲಿಂಪಿಕ್ಸ್ ನಲ್ಲಿ ರಜತ ಪದಕ ಗಳಿಸಿದ್ದ ಸಿಂಧು, ಪ್ರಸ್ತುತ ವಿಶ್ವ ಬ್ಯಾಡ್ಮಿಂಟನ್ ನಲ್ಲಿ 2 ನೇ ಶ್ರೇಯಾಂಕ ಗಳಿಸಿದ್ದಾರೆ. 2012 ರಲ್ಲಿ ಲಂಡನ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದ ಸೈನಾ ನೆಹ್ವಾಲ್ ಪ್ರಸ್ತುತ ವಿಶ್ವ ನಂ.11 ಶ್ರೇಯಾಂಕ ಪಡೆದಿದ್ದಾರೆ.

ಮಾತೆ-ಶಿಶುವನ್ನು ಉಳಿಸಿ

ಮಾತೆ-ಶಿಶುವನ್ನು ಉಳಿಸಿ

ಚಂಡಿಗಢದಲ್ಲಿ ನಡೆದ ಮೆಟರ್ನಿಟಿ ಕ್ವೀನ್ 2017 ಪ್ರಶಸ್ತಿಯಲ್ಲಿ ಗೆಲುವು ಸಾಧಿಸಿದ ಗರ್ಭಿಣಿಯರು ಸ್ಪರ್ಧೆಯ ನಂತರ "ಸ್ವಚ್ಛ ಹವಾ-ಸುರಕ್ಷಿತ ಮಾ-ಶಿಶು" ಎಂಬ ಆಂದೋಲನಕ್ಕೆ ಮಾಸ್ಕ್ ಧರಿಸುವ ಮೂಲಕ ಚಾಲನೆ ನೀಡಿದರು. ವಾಯುಮಾಲಿನ್ಯ ತಡೆದು, ಗರ್ಭಿಣಿ ಮತ್ತು ಹುಟ್ಟಲಿರುವ ಮಗುವನ್ನು ರಕ್ಷಿಸಿ ಎಂದು ಕೋರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+