'ವಿಷ'ಕಾರಿದ ಸೋನಿಯಾ ಮೇಲೆ ಕೆಂಡಕಾರಿದ ಮೋದಿ
ಮೀರತ್ (ಉತ್ತರ ಪ್ರದೇಶ), ಫೆ. 2 : ಬಿಜೆಪಿ ವಿಷದ ಬೀಜ ಬಿತ್ತುತ್ತಿದೆ ಎಂದ ಸೋನಿಯಾ ಗಾಂಧಿ ಮೇಲೆ ಹರಿಹಾಯ್ದಿರುವ ಭಾರತ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, ಕಳೆದ 64 ವರ್ಷಗಳಿಂದ ವಿಷದ ಬೀಜ ಬಿತ್ತುತ್ತಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಲಬರ್ಗದಲ್ಲಿ ಶನಿವಾರ ಮಾಡಿದ ಭಾಷಣದಲ್ಲಿ ಸೋನಿಯಾ ಗಾಂಧಿ ಅವರು, "ವಿಷದ ಬೀಜ ಬಿತ್ತುತ್ತಿರುವವರನ್ನು, ಜಾತ್ಯತೀತ ವಾದದಲ್ಲಿ ನಂಬಿಕೆ ಇಲ್ಲದವರನ್ನು, ಯಶಸ್ಸಿಗಾಗಿ ಹಿಂಸೆಯನ್ನು ಪ್ರೋತ್ಸಾಹಿಸುವ ಹೊಲಸು ರಾಜಕೀಯ ಆಟ ಆಡುವವರನ್ನು ನೀವು ನಂಬುವುದಿಲ್ಲ ಎಂದು ಗೊತ್ತು" ಎಂದು ಬಿಜೆಪಿ ಮೇಲೆ ಕೆಂಡ ಕಾರಿದ್ದರು. [ಅಧಿಕಾರಕ್ಕಾಗಿ ಬಿಜೆಪಿ ಹಪಾಹಪಿ : ಸೋನಿಯಾ]
ಮೀರತ್ ಜಿಲ್ಲೆಯ ಗೋರಖಪುರದಲ್ಲಿ ಭಾನುವಾರ ಮಧ್ಯಾಹ್ನ ಬೃಹತ್ ಸಭೆ ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, "ಕಾಂಗ್ರೆಸ್ ಒಡೆದು ಆಳುವ ಪಕ್ಷ. ಮತ ಬ್ಯಾಂಕ್ ಗಳಲ್ಲಿ ಅದಕ್ಕೆ ಅಪಾರವಾದ ನಂಬಿಕೆ. ಎರಡು ಕೋಮುಗಳ ನಡುವೆ ಜಗಳ ತಂದಿಡುವುದು ಅದಕ್ಕೆ ತೃಪ್ತಿ" ಎಂದು ವ್ಯಂಗ್ಯವಾಡಿದ್ದಾರೆ.
1857ರ ಹುತಾತ್ಮರ ಅವಮಾನ : ಇತಿಹಾಸದ ಪುಟಗಳನ್ನು ಕೆದಕುತ್ತ ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ ಮೋದಿ ಅವರು, "1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಹುತಾತ್ಮರನ್ನು ಕಾಂಗ್ರೆಸ್ ಅವಮಾನಿದೆ. ಕಾಂಗ್ರೆಸ್ ಮತ್ತು ಯುಪಿಎಗಳಿಗೆ ಜನರು 1857ರ ದಂಗೆಯನ್ನು ನೆನಪಿನಲ್ಲಿಡುವುದು ಬೇಕಾಗಿಲ್ಲ" ಎಂದು ಕಾಲೆಳೆದಿದ್ದಾರೆ.
ಆಮ್ ಆದ್ಮಿ ಪಕ್ಷದ ವಿರುದ್ಧವೂ ಮಾತಿನ ಲಹರಿ ಹರಿಬಿಟ್ಟ ಮೋದಿ, ಈಶಾನ್ಯ ಭಾರತ ಮತ್ತು ಆಫ್ರಿಕಾ ಜನರನ್ನು ರಕ್ಷಿಸುವಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಕ್ಷ ಸಂಪೂರ್ಣ ಸೋತಿದೆ ಎಂದು ಟೀಕಿಸಿದರು. ಭಾರತದ ಈಶಾನ್ಯ ಭಾಗದಲ್ಲಿರುವ ಮಕ್ಕಳು ಕೂಡ ನಮ್ಮ ಮಕ್ಕಳೇ ಅಲ್ಲವೆ ಎಂದು ಪ್ರಶ್ನಿಸಿದರು.
ತಮ್ಮ ಎಂದಿನ ಶೈಲಿಯಲ್ಲಿ ನಿರರ್ಗಳವಾಗಿ ಭಾಷಣ ಮಾಡಿದ ಮೋದಿ ನಂತರ ಉತ್ತರ ಪ್ರದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಸಮಾಜವಾದಿ ಪಕ್ಷವನ್ನು ಗುರಿ ಮಾಡಿಕೊಂಡರು. ರಾಜ್ಯದಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು, ದುರಾಡಳಿತ ಮನೆಮಾಡಿದ ಎಂದ ಅವರು, ಸಮಾಜವಾದಿ ಪಕ್ಷವನ್ನು ಸಮಾಜ ವಿದ್ರೋಹಿ ಸರಕಾರ ಎಂದು ಟೀಕಿಸಿದರು.