ಮೈತ್ರಿ ವಿಚಾರದಲ್ಲಿ ಕಾಂಗ್ರೆಸ್ ಹಿರಿಯ ನಾಯಕರ ನಡುವೆ ಕಿತ್ತಾಟ
ನವದೆಹಲಿ, ಮಾರ್ಚ್ 2: ಕಾಂಗ್ರೆಸ್ ಪಕ್ಷದ ಕೇಂದ್ರದಲ್ಲಿನ ಪ್ರಮುಖ ನಾಯಕರ ನಡುವಿನ ಸಂಘರ್ಷ ಭುಗಿಲೆದ್ದಿದೆ. ಹಿರಿಯ ಮುಖಂಡರಾದ ಆನಂದ್ ಶರ್ಮಾ ಮತ್ತು ಅಧೀರ್ ರಂಜನ್ ಚೌಧುರಿ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜಾತ್ಯಾತೀತ ದಳ (ಐಎಸ್ಎಫ್) ಜತೆ ಕಾಂಗ್ರೆಸ್ನ ಹೊಂದಾಣಿಕೆಯನ್ನು ಆನಂದ್ ಶರ್ಮಾ ಪ್ರಶ್ನಿಸಿದ್ದರು. ಕೋಮುವಾದದ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಆಯ್ಕೆಗಳನ್ನು ಹುಡುಕಬಾರದು ಎಂದು ಅವರು ಹೇಳಿದ್ದರು.
ಕಾಂಗ್ರೆಸ್ನ ನಾಯಕತ್ವದ ವಿರುದ್ಧ ಕಳೆದ ವರ್ಷ ಪತ್ರ ಬರೆದಿದ್ದ 'ಜಿ-23' ನಾಯಕರ ಗುಂಪಿನ ಸದಸ್ಯರಾಗಿರುವ ಆನಂದ್ ಶರ್ಮಾ, ಐಎಸ್ಎಫ್ನಂತಹ ಪಕ್ಷದೊಂದಿಗಿನ ಕಾಂಗ್ರೆಸ್ ಮೈತ್ರಿಯು ಕಾಂಗ್ರೆಸ್ನ ಸೈದ್ಧಾಂತಿಕ ನಿಲುವಿಗೆ ಪೆಟ್ಟು ನೀಡುತ್ತದೆ. ಈ ಮೈತ್ರಿಯ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪರಾಮರ್ಶೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಪಶ್ಚಿಮ ಬಂಗಾಳ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧುರಿ, ಆನಂದ್ ಶರ್ಮಾ ಅವರ ಟೀಕೆಯು ಬಿಜೆಪಿಯ ಧ್ರುವೀಕರಣ ಕಾರ್ಯಸೂಚಿಗೆ ಅನುಕೂಲ ಮಾಡಿಕೊಡುವುದೇ ಆಗಿದೆ ಎಂದು ಹೇಳಿದ್ದಾರೆ. ಮುಂದೆ ಓದಿ.

ವಾಸ್ತವ ತಿಳಿದುಕೊಳ್ಳಿ
'ಆನಂದ್ ಶರ್ಮಾ ಅವರೇ ವಾಸ್ತವಗಳನ್ನು ಅರಿತುಕೊಳ್ಳಿ' ಎಂದು ಆನಂದ್ ಶರ್ಮಾ ವಿರುದ್ಧ ಸರಣಿ ಟ್ವೀಟ್ಗಳನ್ನು ಮಾಡಿರುವ ಅಧೀರ್ ರಂಜನ್, 'ಕಾಂಗ್ರೆಸ್ಸಿಗರ ಒಂದು ಆಯ್ದ ಭಿನ್ನಮತೀಯರ ಗುಂಪು ವೈಯಕ್ತಿಕ ಹಿತಕರ ಜಾಗವನ್ನು ಯಾವಾಗಲೂ ನೋಡುತ್ತಿದ್ದಾರೆ. ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುವುದನ್ನು ನಿಲ್ಲಿಸಲಿ' ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಮೈತ್ರಿಕೂಟದ ಭಾಗ
'ಸಿಪಿಎಂ ನೇತೃತ್ವದ ಎಡಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ಜಾತ್ಯತೀಯ ಮೈತ್ರಿಕೂಟವನ್ನು ಮುನ್ನಡೆಸುತ್ತಿವೆ. ಕಾಂಗ್ರೆಸ್ ಅದರ ಅವಿಭಾಜ್ಯ ಅಂಗವಾಗಿದೆ. ನಾವು ಬಿಜೆಪಿಯ ಕೋಮು ಹಾಗೂ ವಿಭಜನೀಯ ರಾಜಕಾರಣವನ್ನು ಮತ್ತು ದುರಾಡಳಿತವನ್ನು ಸೋಲಿಸಲು ದೃಢನಿರ್ಧಾರ ತೆಗೆದುಕೊಂಡಿದ್ದೇವೆ' ಎಂದು ತಿಳಿಸಿದ್ದಾರೆ.

ಬಿಜೆಪಿ ನೆರವಾಗಲಿದೆ
'ಕಾಂಗ್ರೆಸ್ಗೆ ತನ್ನ ಸೀಟುಗಳ ಸಂಪೂರ್ಣ ಹಂಚಿಕೆಯನ್ನು ಪಡೆದುಕೊಂಡಿದೆ. ಎಡಪಂಥವು ತನ್ನಲ್ಲಿನ ಸೀಟುಗಳನ್ನು ಹೊಸದಾಗಿ ಸೃಷ್ಟಿಯಾದ ಜಾತ್ಯತೀತ ಪಡೆ ಐಎಸ್ಎಫ್ ಜತೆ ಹಂಚಿಕೊಳ್ಳುತ್ತಿದೆ. ಸಿಪಿಎಂ ನೇತೃತ್ವದ ಪಡೆಯನ್ನು ಕೋಮುವಾದಿ ಎಂದು ಕರೆಯುವ ನಿಮ್ಮ ನಿರ್ಧಾರವು ಬಿಜೆಪಿಯ ಧ್ರುವೀಕರಣ ರಾಜಕೀಯಕ್ಕೆ ಮಾತ್ರವೇ ನೆರವಾಗಲಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಹೇಳಿಕೆ ದುರದೃಷ್ಟಕರ
ತಮ್ಮ ವಿರುದ್ಧ ಅಧೀರ್ ರಂಜನ್ ಅವರು ನೀಡಿರುವ ಹೇಳಿಕೆ 'ದುರದೃಷ್ಟಕರ' ಎಂದು ಆನಂದ್ ಶರ್ಮಾ ವ್ಯಾಖ್ಯಾನಿಸಿದ್ದಾರೆ. 'ನಾನು ಹೇಳಿರುವುದು ನನ್ನ ಕಳವಳದ ಅಭಿವ್ಯಕ್ತಿ. ನಾನು ಕಾಂಗ್ರೆಸ್ನ ಸಿದ್ಧಾಂತಗಳಿಗೆ ಅಚಲವಾಗಿ ಬದ್ಧನಾಗಿದ್ದೇನೆ. ಆದರೆ ನಾನು ಇತಿಹಾಸಕಾರ ಹಾಗೂ ಪಕ್ಷದ ಸಿದ್ಧಾಂತವಾದಿ. ಆ ನೆಲೆಗಟ್ಟಿನಲ್ಲಿ ನನ್ನ ಹೇಳಿಕೆಯನ್ನು ತೆಗೆದುಕೊಳ್ಳಬೇಕು' ಆನಂದ್ ಶರ್ಮಾ ಹೇಳಿದ್ದಾರೆ.












Click it and Unblock the Notifications