ಕಾಶ್ಮೀರಕ್ಕೆ ಸ್ವಾತಂತ್ರ್ಯ ಬೇಕಿದೆ ಎಂದು ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ನವದೆಹಲಿ, ಜೂನ್ 22: "ಪರ್ವೇಜ್ ಮುಷರಫ್ ಮಾತು ಸತ್ಯ. ಕಾಶ್ಮೀರವು ಸ್ವಾತಂತ್ರ್ಯ ಬಯಸುತ್ತಿದೆ" ಎನ್ನುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ ಕಾಂಗ್ರೆಸ್ ಮುಖಂಡ ಸೈಫುದ್ದಿನ್ ಸೋಜ್.
"ಮುಷರಫ್ ಒಮ್ಮೆ ಹೇಳಿದ್ದರು, ಕಾಶ್ಮೀರಿಗಳು ಪಾಕಿಸ್ತಾನದೊಂದಿಗೆ ಸೇರಲು ಇಷ್ಟಪಡುವುದಿಲ್ಲ. ಅವರಿಗೆ ಅತ್ಯವಿರುವುದು ಸ್ವತಂತ್ರ ರಾಷ್ಟ್ರ ಎಂದು. ಬಹುಶಃ ಆ ಮಾತು ಸತ್ಯ ಎನ್ನಿಸುತ್ತಿದೆ" ಎಂದು ಸೋಜ್ ಹೇಳಿದ್ದಾರೆ. ಈ ಮೂಲಕ ಕಾಶ್ಮೀರಿಗಳಿಗೆ ಭಾರತದೊಂದಿಗೆ ಇರಲೂ ಇಷ್ಟವಿಲ್ಲ ಎಂಬುದನ್ನು ಪರೋಕ್ಷವಾಗಿ ಅವರು ಹೇಳಿದ್ದಾರೆ. ಅದೂ ಅಲ್ಲದೆ, ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ರನ್ನು ಬೆಂಬಲಿಸಿದ್ದಾರೆ ಎಂಬ ಆರೋಪವೂ ಅವರ ವಿರುದ್ಧ ಕೇಳಿಬರುತ್ತಿದೆ.
ಕಾಶ್ಮೀರದಲ್ಲಿ ಪಿಡಿಪಿ ಜೊತೆ ಬಿಜೆಪಿ ಡೈವೋರ್ಸ್: ಅಸಲಿ ಸಿನಿಮಾ ಶುರುವಾಗೋದೇ ಇನ್ಮುಂದೆ?
"ಮುಷರಫ್ ಮಾತು ಸತ್ಯ. ಆದರೆ ಅದನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ನನಗನ್ನಿಸುತ್ತದೆ" ಎನ್ನುವ ಮೂಲಕ ಪ್ರತ್ಯೇಕ ರಾಷ್ಟ್ರದ ಬೆಂಕಿಗೆ, ತುಪ್ಪ ಸುರಿದಿದ್ದಾರೆ ಸೋಜ್.
"Kashmir: Glimpses of History and the Story of Struggle" ಎಂಬ ತಮ್ಮ ಪುಸ್ತಕದಲ್ಲಿ ಅವರು ಈ ಕುರಿತು ವಿವರವಾಗಿ ಬರೆದಿದ್ದಾರೆ. ಇತ್ತೀಚೆಗಷ್ಟೇ, ಜಮ್ಮು-ಕಾಶ್ಮೀರದಲ್ಲಿ ಉಂಟಾದ ರಾಜಕೀಯ ತಲ್ಲಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು ಈ ರೀತಿ ಹೇಳಿದ್ದಾರೆ. ಜಮ್ಮು-ಕಾಶ್ಮೀರದಲ್ಲಿದ್ದ ಪಿಡಿಪಿ-ಬಿಜೆಪಿ ಮೈತ್ರಿಕೂಟ, ಬಿಜೆಪಿಯು ಬೆಂಬಲ ವಾಪಸ್ ಪಡೆಯುವುದರೊಂದಿಗೆ ಮುರಿದುಬಿದ್ದಿತ್ತು. ಮುಖ್ಯಮಂತ್ರಿ ಪಿಡಿಪಿಯ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ ನಂತರ ಈ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಗೆ ಬಂದಿದೆ.
ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯೆ
"ಕೇಂದ್ರ ಸಚಿವರಾಗಿದ್ದ ಸಮಯದಲ್ಲಿ ಸೈಫುದ್ದಿನ್ ಸೋಜ್ ಕೇಂದ್ರ ಸರ್ಕಾರದಿಂದ ಸಾಕಷ್ಟು ಉಪಯೋಗ ಪಡೆದಿದ್ದಾರೆ. ಅವರ ಮಗಳನ್ನು ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಅಪಹರಣ ಮಾಡಿದ್ದಾಗಲು ಭಾರತ ಸರ್ಕಾರ ಅವರಿಗೆ ಸಹಾಯ ಮಾಡಿದೆ. ಇಂಥ ಜನರಿಗೆ ಸಹಾಯ ಮಾಡಿ ಉಪಯೋಗವಿಲ್ಲ. ಈ ದೇಶದ ಸಂವಿಧಾನಕ್ಕೆ ಬದ್ಧವಾಗಿರುವವರು ಇಲ್ಲಿರಲಿ. ಮುಷರಫ್ ರನ್ನೇ ಇಷ್ಟಪಡುವವರು ಅಲ್ಲಿಗೇ ಹೋಗಲಿ, ಅವರಿಗೆ ಪಾಕಿಸ್ತಾನಕ್ಕೆ ಒನ್ ವೇ ಟಿಕೆಟ್ ನೀಡಲು ನಾವು ಎಂದಿಗೂ ಸಿದ್ಧ" ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.