ಚಾರ್ಧಾಮ್ ಯಾತ್ರೆ 2022: ಇದುವರೆಗೂ 41 ಯಾತ್ರಾರ್ಥಿಗಳ ಸಾವು
ಡೆಹರಾಡೂನ್ ಮೇ 17: ಈ ವರ್ಷದ ಚಾರ್ಧಾಮ್ ಯಾತ್ರೆಯಲ್ಲಿ ಇದುವರೆಗೂ 41 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಕೋವಿಡ್-19 ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಚಾರ್ಧಾಮ್ ಯಾತ್ರೆ ಈ ವರ್ಷದ ಮೇ 3ರಂದು ಮತ್ತೆ ಆರಂಭವಾಗಿದೆ.
ಚಾರ್ಧಾಮ್ ಯಾತ್ರೆಯು ಪವಿತ್ರ ಕ್ಷೇತ್ರಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಒಳಗೊಂಡಿದೆ. ಯಾತ್ರೆ ವೇಳೆ ಸೋಮವಾರ 4 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಒಟ್ಟಾರೆಯಾಗಿ ಯಮುನೋತ್ರಿ ಮಾರ್ಗವಾಗಿ 14 ಮಂದಿ ಯಾತ್ರಾರ್ಥಿಗಳು, ಗಂಗೋತ್ರಿ ಮಾರ್ಗವಾಗಿ 4 ಮಂದಿ, ಕೇದರನಾಥ ಮಾರ್ಗವಾಗಿ 15 ಮಂದಿ ಹಾಗೂ ಬದರಿನಾಥ ಮಾರ್ಗದ 8 ಮಂದಿ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.

ಯಾತ್ರಾರ್ಥಿಗಳ ಸಾವಿನ ಹಿನ್ನಲೆಯಲ್ಲಿ ಮಾತನಾಡಿರುವ ಉತ್ತರಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, "ಭಕ್ತರು ವೈದ್ಯರನ್ನು ಸಂಪರ್ಕಿಸಿದ ನಂತರವಷ್ಟೇ ಚಾರ್ಧಾಮ್ ಯಾತ್ರೆಗೆ ಅಣಿಯಾಗಬೇಕು. ಸ್ಥಿರವಾದ ಆರೋಗ್ಯ ಇಲ್ಲದವರೂ ಯಾತ್ರೆಗೆ ಮುಂದಾಗಬಾರದು'' ಎಂದು ಮನವಿ ಮಾಡಿದ್ದಾರೆ.

"ಕಳೆದ ಎರಡು ವರ್ಷಗಳಿಂದ ಕೊರೊನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಚ್ಚಿದ್ದ ಧಾರ್ಮಿಕ, ಯಾತ್ರಾ ಸ್ಥಳಗಳು ಈ ವರ್ಷ ಪೂರ್ಣ ಪ್ರಮಾಣದಲ್ಲಿ ತೆರಯಲಾಗಿದೆ. ಈ ಹಿನ್ನೆಲೆಯಲ್ಲಿ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿದೆ. ಯಾತ್ರಾರ್ಥಿಗಳಿಗೆ ಉತ್ತಮ ಅನುಭವ ಕಲ್ಪಿಸಲು ಹಾಗೂ ಅವರಿಗೆ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣ ಕಲ್ಪಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ'' ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.












Click it and Unblock the Notifications