ಕಾವೇರಿ ವಿವಾದ : ಮೇಲ್ಮನವಿ ಅರ್ಜಿಗಳ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
ಕಾವೇರಿ ನ್ಯಾಯಾಧಿಕರಣದ ಐ ತೀರ್ಪು ಪ್ರಶ್ನಿಸಿ ನಾಲ್ಕು ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಮುಗಿದಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ನವದೆಹಲಿ, ಅಕ್ಟೋಬರ್ 19: ಕಾವೇರಿ ನ್ಯಾಯಾಧಿಕರಣದ ಐ ತೀರ್ಪು ಪ್ರಶ್ನಿಸಿ ನಾಲ್ಕು ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಮುಗಿದಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಐ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಿಂಧುತ್ವ ಪ್ರಶ್ನಿಸಿದ್ದ ಕೇಂದ್ರ ಸರ್ಕಾರಕ್ಕೆ ಪುದುಚೇರಿ ಕೂಡ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಈ ನಡುವೆ ಮಂಗಳವಾರ ನಿರ್ದೇಶಿಸಿರುವಂತೆ ಮುಂದಿನ ಆದೇಶದವರೆಗೆ ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಕರ್ನಾಟಕಕ್ಕೆ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ ಮತ್ತೊಮ್ಮೆ ಸೂಚನೆ ನೀಡಿದೆ.
ತ್ರಿಸದಸ್ಯ ಪೀಠಗಳ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಮಿತಾವ್, ಖನ್ವಿಲ್ಕರ್ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪು ಕಾಯ್ದಿರಿಸಿದೆ. ಇದೀಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಅತ್ಯಂತ ನಿರ್ಣಾಯಕವಾಗಲಿದೆ.

ನಾರಿಮನ್ ವಾದ : ಕಾವೇರಿ ನ್ಯಾಯಮಂಡಳಿ ರಚನೆ ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. ಸುಪ್ರೀಂಕೋರ್ಟ್ ವ್ಯಾಪ್ತಿಗೆ ಮೀರಿದ್ದು, ನ್ಯಾಯಾಲಯಕ್ಕೆ ಮಂಡಳಿ ರಚನೆ ಮಾಡುವಂತೆ ಸೂಚನೆ ನೀಡುವ ಅಧಿಕಾರವಿಲ್ಲ ಎಂದು ಕರ್ನಾಟಕ ಪರ ವಕೀಲ ನಾರಿಮನ್ ಮತ್ತೊಮ್ಮೆ ವಾದಿಸಿದರು.
ಅಂತಾರಾಜ್ಯ ನದಿ ನೀರು ಹಂಚಿಕೆ ವಿವಾದ ಪರಿಹಾರವಾಗದಿದ್ದ ವೇಳೆ ನ್ಯಾಯಾಲಯ ಮಧ್ಯಪ್ರವೇಶಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ನ್ಯಾಯಮಂಡಲಿ ರಚನೆ ಮಾಡುವಂತೆ ಸಂಸತ್ತಿಗೆ ನಿರ್ದೇಶನ ನೀಡುವ ಅಧಿಕಾರ ನ್ಯಾಯಾಂಗಕ್ಕಿಲ್ಲ. ಇದು ಸಂಸತ್ತಿನ ಪರಮೋಚ್ಛ ಅಧಿಕಾರವನ್ನು ಕಿತ್ತುಕೊಂಡಂತಾಗುತ್ತದೆ ಎಂದು ನಾರಿಮನ್ ಹೇಳಿದರು.
ಶೇಖರ್ ನಫಾಡೆ ವಾದ: ತಮಿಳುನಾಡು ಪರ ವಕೀಲ ಶೇಖರ್ ನಫಾಡೆ ಅವರು 3 ರಾಜ್ಯಗಳ ನಡುವೆ ಅನೇಕ ದಶಕಗಳಿಂದ ನದಿ ನೀರು ಹಂಚಿಕೆ ವಿವಾದ ಪರಿಹಾರವಾಗಿಲ್ಲ. ನ್ಯಾಯಾಧಿಕರಣ ನೀಡಿರುವ ತೀರ್ಪನ್ನು ಯಾರೊಬ್ಬರೂ ಒಪ್ಪಿಕೊಂಡಿಯೂ ಇಲ್ಲ.
ಈ ಹಿನ್ನೆಲೆಯಲ್ಲಿ ನ್ಯಾಯಾಂಗ ತನಗಿರುವ ಪರಮಾಧಿಕಾರ ಬಳಸಿಕೊಂಡು ಸಂಸತ್ತಿಗೆ ನಿರ್ವಹಣಾ ಮಂಡಳಿ ರಚನೆ ಮಾಡಲು ನಿರ್ದೇಶನ ನೀಡಬಹುದು. ಈ ಹಿಂದೆ ಪಂಜಾಬಿನ ಸತ್ಲೇಸ್ ಮತ್ತು ಬಿಯಾಸ್ ನದಿ ನೀರು ಹಂಚಿಕೆ ವಿವಾದ ಇದೇ ರೀತಿ ವಿವಾದ ಉಂಟಾದಾಗ ನ್ಯಾಯಾಲಯವೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಿತ್ತು. ಈ ಮಾನದಂಡವನ್ನೇ ಅನುಸರಿಸಿ ಕಾವೇರಿ ವಿವಾದವನ್ನು ಪರಿಹರಿಸುವಂತೆ ಶೇಖರ್ ನಪಾಡೆ ಮನವಿ ಮಾಡಿದರು.












Click it and Unblock the Notifications