Manipur Bollywood: ಮಣಿಪುರದಲ್ಲಿ ಬಾಲಿವುಡ್ ಸಿನಿಮಾ ಸೌಂಡ್ ಜೋರು!
ಅದು ಭಾರತದಲ್ಲೇ ಇರುವ ರಾಜ್ಯ ಆದ್ರೂ ಆ ರಾಜ್ಯದಲ್ಲಿ ಹಿಂದಿ ಸಿನಿಮಾ ಹಾಕಿದ್ರೆ ಸಾಕು ಥಿಯೇಟರ್ಗೆ ಬೆಂಕಿ ಬೀಳುತ್ತಿತ್ತು. ಬಾಲಿವುಡ್ ಸಿನಿಮಾಗಳು ಅಲ್ಲಿಗೆ ಕಾಲಿಟ್ಟು ವರ್ಷಗಳೇ ಕಳೆದಿವೆ. ಹೀಗಿದ್ದಾಗಲೂ ದಿಢೀರ್ ಅಲ್ಲಿ ಹಿಂದಿ ಸಿನಿಮಾ ಬೆಳ್ಳಿತೆರೆಯಲ್ಲಿ ಝಗಮಗಿಸಿದೆ. ಅರೆರೆ ಯಾವುದು ಆ ರಾಜ್ಯ? ಅನ್ನೋ ನಿಮ್ಮ ಕುತೂಹಲದ ಪ್ರಶ್ನೆಗೆ ಸಂಪೂರ್ಣ ಉತ್ತರ ನಮ್ಮಲ್ಲಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕಾರಣ ಎಲ್ಲವೂ ಛಿದ್ರ ಛಿದ್ರವಾಗಿ ಹೋಗಿದೆ. ಈ ಹೊತ್ತಲ್ಲೇ ಅಲ್ಲಿನ ಜನರು ಮನೆ ಬಿಟ್ಟು ಓಡಿ ಹೋಗುತ್ತಿದ್ದಾರೆ. ಜನಾಂಗೀಯ ದ್ವೇಷದ ಜ್ವಾಲೆಯಲ್ಲಿ ಬೇಯುತ್ತಿರುವ ಮಣಿಪುರದಲ್ಲಿ ಒಂದು ಜನಾಂಗ ನಿಷೇಧಿಸಿದ್ದ ಹಿಂದಿ ಸಿನಿಮಾಗೆ ಮತ್ತೊಂದು ಜನಾಂಗ ಜೈ ಎಂದಿದೆ. ಈ ಮೂಲಕ 23 ವರ್ಷಗಳ ನಂತರ ಮಣಿಪುರದಲ್ಲಿ ಹಿಂದಿ ಸಿನಿಮಾ ಪ್ರದರ್ಶನ ಕಂಡಿದೆ. ಹಾಗಾದರೆ ಯಾವುದು ಆ ಹಿಂದಿ ಸಿನಿಮಾ? ದಿಢೀರ್ ಇಂತಹ ಬೆಳವಣಿಗೆ ಮೂಡಲು ಕಾರಣ ಏನು? ಬನ್ನಿ ತಿಳಿಯೋಣ.

2000ರಲ್ಲಿ ಹಿಂದಿ ಸಿನಿಮಾ ಬ್ಯಾನ್
ಮಣಿಪುರದ ಹೆಸರು ಕೇಳಿದರೆ ಭಯ ಮೂಡುವ ಪರಿಸ್ಥಿತಿ ಇದೆ. ಹಲವು ತಿಂಗಳಿಂದ ಇಲ್ಲಿ ಬೆಂಕಿ ಧಗಧಗಿಸುತ್ತಿದೆ. ಕಂಡ ಕಂಡವರ ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ ಕಿಡಿಗೇಡಿಗಳು. ಇಂತಿಪ್ಪ ಮಣಿಪುರದಲ್ಲಿ 2 ದಶಕಗಳ ಹಿಂದೆ ಹಿಂದಿ ಸಿನಿಮಾ ಪ್ರದರ್ಶನಕ್ಕೆ ಮೈತೇಯಿ ಹಾಗೂ ನಾಗ ಸಂಘಟನೆ 'ರೆವೆಲ್ಯೂಷನರಿ ಪಿಪಲ್ಸ್ ಫ್ರಂಟ್' ನಿಷೇಧ ಹೇರಿತ್ತು. ಹಿಂದಿ ಹೇರಿಕೆಯನ್ನ ಮಾಡಲಾಗುತ್ತಿದೆ ಎಂದು ಆರೋಪಿಸಿ, 2000ರ ಸೆಪ್ಟೆಂಬರ್ನಲ್ಲಿ ಈ ನಿರ್ಧಾರ ಕೈಗೊಂಡು ಬಾಲಿವುಡ್ ವಿರುದ್ಧ ಯುದ್ಧ ಸಾರಲಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿ ಹೋಗಿದ್ದು, ಆಶ್ಚರ್ಯಕರ ಘಟನೆ ನಡೆದಿದೆ.
ರಾಜಧಾನಿ ಸಮೀಪವೇ ಘಟನೆ
ಅಷ್ಟಕ್ಕೂ ಕುಕಿ ಸಮುದಾಯದ ಸಂಘಟನೆ ಎಚ್ಎಸ್ಎ (HSA) ಹಿಂದಿ ಸಿನಿಮಾ ಪ್ರದರ್ಶನ ಆಯೋಜಿಸಿ ಪರೋಕ್ಷ ಸಮರ ಸಾರಿದೆ. 23 ವರ್ಷ ಹಿಂದೆ ರೆವೆಲ್ಯೂಷನರಿ ಪೀಪಲ್ಸ್ ಫ್ರಂಟ್ ತೆಗೆದುಕೊಂಡ ನಿರ್ಧಾರಕ್ಕೆ ವಿರುದ್ಧವಾಗಿ ಸಿನಿಮಾ ಪ್ರದರ್ಶನ ನಡೆದಿದೆ. ನಟ ವಿಕ್ಕಿ ಕೌಶಲ್ ಅಭಿನಯದ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಮಣಿಪುರದ ಚುರ್ಚಾಂದಪುರದ ರೆಂಗ್ಕೈ ಎಂಬ ಭಾಗದಲ್ಲಿ ಪ್ರದರ್ಶನ ಕಂಡಿದೆ. ಹಿಂದಿ ಸಿನಿಮಾ ನೋಡಲು ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿದ್ದು ಗಮನ ಸೆಳೆದಿದೆ. ಇನ್ನು ಮಣಿಪುರ ರಾಜಧಾನಿ ಇಂಫಾಲದಿಂದ ಕೇವಲ 63 ಕಿಲೋ ಮೀಟರ್ ದೂರದಲ್ಲಿ ಘಟನೆ ನಡೆದಿದೆ.

ಮನೆ ಕಳೆದುಕೊಂಡವರಿಗೆ ಹೊಸ ಮನೆ
ಮಣಿಪುರದಲ್ಲಿ ಹಿಂಸಾಚಾರ ಕಾರಣ ಮನೆ ಕಳೆದು ಕಳೆದುಕೊಂಡು ಪರದಾಡುತ್ತಿರುವ ಜನರಿಗೆ ಸರ್ಕಾರ ಸಹಾಯ ಹಸ್ತ ಚಾಚಿದೆ. ಮೇ 3ರಂದು ಮಣಿಪುರದಲ್ಲಿ ಶುರುವಾದ ಹಿಂಸಾಚಾರದಲ್ಲಿ 180 ಕ್ಕೂ ಹೆಚ್ಚು ಜನ ಮೃತಪಟ್ಟು, 3000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಜೊತೆಗೇ 60 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದು, ಆಸ್ತಿ ನಷ್ಟಕ್ಕೆ ಲೆಕ್ಕ ಸಿಗುತ್ತಿಲ್ಲ. ಈ ಸ್ಥಿತಿಯಲ್ಲಿ ಮಣಿಪುರ ಸರ್ಕಾರ 3000 ಸಿದ್ಧಪಡಿಸಿದ ಮನೆಗಳನ್ನ ಜನರಿಗೆ ಹಂಚಿಕೆ ಮಾಡಲು ಸಿದ್ಧತೆಯನ್ನ ನಡೆಸುತ್ತಿದೆ. ಮಣಿಪುರದಲ್ಲಿ ಸ್ಥಿತಿ ಹೇಗಿದೆ ಎಂದರೆ ಎಲ್ಲಿ ಬೇಕಾದರೂ ಬೆಂಕಿ ಬೀಳಬಹುದು. ಹೀಗೆ ಉದ್ರಿಕ್ತರ ಗುಂಪು ಕಂಡ ಕಂಡ ಜಾಗದಲ್ಲಿ ಬೆಂಕಿ ಹಚ್ಚಿ ಸಂಭ್ರಮಿಸುತ್ತಿದೆ. ಈ ಹೊತ್ತಲ್ಲೇ ಸ್ಥಳೀಯ ಸರ್ಕಾರ ನೆರವಿನ ಹಸ್ತ ಚಾಚಿದೆ.
ತಪ್ಪು ಮಾಡಿದವರಿಗೆ ಶಿಕ್ಷೆ ಗ್ಯಾರಂಟಿ!
ಮಣಿಪುರ ಹಿಂಸೆಯ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುವಾಗಲೇ ಮಣಿಪುರದ ಸಿಎಂ ಡ್ರಗ್ಸ್ ದಂಧೆ ವಿರುದ್ಧ ಗರಂ ಆಗಿದ್ದಾರೆ. ಡ್ರಗ್ಸ್ ವಿರುದ್ಧದ ಕ್ರಮ ಯಾವುದೇ ಸಮುದಾಯದ ಅಥವಾ ವ್ಯಕ್ತಿಗಳ ವಿರುದ್ಧ ಅಲ್ಲ. ದೇಶವನ್ನ ರಕ್ಷಿಸಲು ಇದು ಅನಿವಾರ್ಯ ಎಂದು ನಿನ್ನೆ ಮಣಿಪುರದ ಸಿಎಂ ಬಿರೇನ್ ಸಿಂಗ್ ಗುಡುಗಿದ್ದರು. ನಿಷೇಧಿತ ಕೃಷಿಗಾಗಿ ವ್ಯಾಪಕ ಅರಣ್ಯನಾಶ ಆರಂಭಿಸಿದಾಗ ಸರ್ಕಾರ ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ, ಅಕ್ರಮ ಡ್ರಗ್ಸ್ ದಂಧೆ ಕೊನೆಗಾಣಿಸಲು ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಮಣಿಪುರ ಸಿಎಂ ಹೇಳಿದ್ದರು. ಈ ಮೂಲಕ ಹಿಂಸೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮದ ಮುನ್ಸೂಚನೆ ನೀಡಿದ್ದರು.












Click it and Unblock the Notifications