ಹಸುಗಳನ್ನು ಕಟುಕರಿಗೆ ಮಾರುವ 'ಇಸ್ಕಾನ್' ಭಾರತದ ಅತಿ ದೊಡ್ಡ ವಂಚಕ ಸಂಸ್ಥೆ: ಕಲ್ಲೋಲ ಸೃಷ್ಟಿಸಿದ ಮನೇಕಾ ಗಾಂಧಿ ಹೇಳಿಕೆ
ನವದೆಹಲಿ, ಸೆಪ್ಟೆಂಬರ್ 27: ಇಂಟರ್ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕನ್ಸಿಯಸ್ನೆಸ್ (ಇಸ್ಕಾನ್) ದೇಶದ ಅತಿ ದೊಡ್ಡ ವಂಚಕ ಸಂಸ್ಥೆಯಾಗಿದೆ. ಇದು ಗೋವುಗಳನ್ನು ಕಟುಕರಿಗೆ ಮಾರುತ್ತದೆ ಎಂದು ಬಿಜೆಪಿ ನಾಯಕಿ, ಸಂಸದೆ ಮನೇಕಾ ಗಾಂಧಿ ಹೇಳಿಕೆ ನೀಡಿದ್ದಾರೆ. ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವ ಇಸ್ಕಾನ್ ಬಗೆಗಿನ ಈ ಹೇಳಿಕೆಯು ಕಲ್ಲೋಲವನ್ನೇ ಸೃಷ್ಟಿ ಮಾಡಿದೆ.
ಇಸ್ಕಾನ್ ಸಂಸ್ಥೆಯು ತನ್ನ ಗೋಶಾಲೆಗಳಿಂದ ಹಸುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ ಎಂದು ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಈ ಸಂದರ್ಶನದ ವಿಡಿಯೊ ಇದೀಗ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ.

'ಇಸ್ಕಾನ್ ಎನ್ನುವುದು ದೇಶದ ಅತಿದೊಡ್ಡ ವಂಚಕ ಸಂಸ್ಥೆಯಾಗಿದೆ. ಈ ಸಂಸ್ಥೆ ಗೋಶಾಲೆಗಳನ್ನು ನಡೆಸುತ್ತಿದೆ. ಈ ಕಾರಣಕ್ಕಾಗಿ ಸರ್ಕಾರದಿಂದ ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆಯುತ್ತದೆ. ಜಮೀನುಗಳು ಮತ್ತು ಎಲ್ಲ ಸವಲತ್ತುಗಳು ಈ ಸಂಸ್ಥೆಗೆ ಸರ್ಕಾರ ಒದಗಿಸುತ್ತದೆ' ಎಂದು ಸಂದರ್ಶನವೊಂದರಲ್ಲಿ ಮನೇಕಾ ಗಾಂಧಿ ಹೇಳಿದ್ದಾರೆ.
ಆಂಧ್ರಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್ ಗೋಶಾಲೆಗೆ ಭೇಟಿ ನೀಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. ಅಲ್ಲಿ ಒಂದೇ ಒಂದು ಗೊಡ್ಡು ಹಸು ಇರಲಿಲ್ಲ. ಒಂದು ಕರು ಸಹ ಇರಲಿಲ್ಲ. ಅಲ್ಲಿದ್ದ ಹಸುಗಳೆಲ್ಲವೂ ಹಾಲು ನೀಡುವ ಹಸುಗಳಾಗಿದ್ದವು. ಇದರಲ್ಲಿ ವಂಚನೆ ಇದೆ ಎಂಬುದು ನನಗೆ ಅರ್ಥವಾಯಿತು ಎಂದು ಮನೇಕಾ ಗಾಂಧಿ ಹೇಳಿದ್ದಾರೆ.
'ಇಸ್ಕಾನ್ ತನ್ನ ಎಲ್ಲಾ ಹಸುಗಳನ್ನು ಕಟುಕರಿಗೆ ಮಾರುತ್ತಿದೆ. ಅವರು ಮಾರುವಷ್ಟು ಹಸುಗಳನ್ನು ಬೇರೆ ಯಾರೂ ಮಾರುವುದಿಲ್ಲ. ಅವರು ' ಹರೇ ರಾಮ್, ಹರೇ ಕೃಷ್ಣ ' ಎಂದು ಜಪಿಸುತ್ತಾ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಅವರು ಕಟುಕರಿಗೆ ಮಾರಾಟ ಮಾಡಿದ ಹಸುಗಳ ಸಂಖ್ಯೆಯಷ್ಟು ಬಹುಶಃ ಬೇರೆ ಯಾರೂ ಮಾರಿಲ್ಲ' ಎಂದು ಅವರು ಆರೋಪಿಸಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇಸ್ಕಾನ್ ವಕ್ತಾರ ಯುಧಿಷ್ಟಿರ ಗೋವಿಂದ ದಾಸ್ ಅವರು, 'ಮನೇಕಾ ಗಾಂಧಿ ಅವರ ಹೇಳಿಕೆ ಸುಳ್ಳುಗಳಿಂದ ಕೂಡಿದೆ' ಎಂದು ಹೇಳಿದ್ದಾರೆ.
ಪ್ರಾಣಿಗಳ ಹಕ್ಕುಗಳ ಹೋರಾಟಗಾರ್ತಿ ಎಂದು ಘೋಷಿಸಿಕೊಂಡಿರುವ ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರ ಹೇಳಿಕೆಯಿಂದ ದಿಗ್ಭ್ರಮೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಮನೇಕಾ ಗಾಂಧಿ ಹೇಳಿಕೆಗೆ ಕೃಷ್ಣ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮನೇಕಾ ಗಾಂಧಿ ಅವರ ಆರೋಪದಲ್ಲಿ ನಿಜ ಇರಬಹುದು. ಈ ಕುರಿತು ತನಿಖೆಯಾಗಬೇಕು. ಇಸ್ಕಾನ್ ಪ್ರಾಮಾಣಿಕವಾಗಿದ್ದರೆ ಹೆದರುವ ಅವಶ್ಯಕತೆ ಇಲ್ಲವೆಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ವಾದಿಸಿದ್ದಾರೆ.

'ಹರೇ ಕೃಷ್ಣ' ಆಂದೋಲನ ಎಂದು ಕರೆಯಲ್ಪಡುವ ಇಸ್ಕಾನ್ ಪ್ರಪಂಚದಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದೆ. ಇಸ್ಕಾನ್ನಲ್ಲಿ ಸನ್ಯಾಸಿಗಳಾಗಿ ಸೇರುವವರು ಶ್ರೀ ಕೃಷ್ಣನ ಭಕ್ತರಾಗುತ್ತಾರೆ. ಭಗವದ್ಗೀತೆಯ ಬೋಧನೆಗಳನ್ನು ಪ್ರಚಾರ ಮಾಡಲು ತಮ್ಮ ಜೀವನವನ್ನು ಮುಡಿಪಾಗಿ ಇಡುತ್ತಾರೆ.












Click it and Unblock the Notifications