ಬ್ಯಾಂಕ್ ವಂಚನೆ: ಕಾಂಗ್ರೆಸ್ ಸಿಎಂ ಅಳಿಯನ ಮೇಲೆ ಕೇಸು ದಾಖಲು
ನವದೆಹಲಿ, ಫೆ 26: ಒಂದರ ಮೇಲೊಂದು ಬ್ಯಾಂಕ್ ವಂಚನೆ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ, ಸಾರ್ವಜನಿಕ ವಲಯದ ಬ್ಯಾಂಕ್ ಒಂದಕ್ಕೆ ನೂರಾರು ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಅವರ ಅಳಿಯನ ಮೇಲೆ ಸಿಬಿಐ ಕೇಸು ದಾಖಲಿಸಿದೆ.
ದೇಶದ ಅತ್ಯಂತ ದೊಡ್ಡ ಸಕ್ಕರೆ ಕಾರ್ಖಾನೆ ಸಿಂಭೋಲಿ ಸುಗರ್ಸ್ ಲಿಮಿಟೆಡ್ ನ ಡಿಜಿಎಂ, ಸಿಎಂ ಅಳಿಯನೂ ಆಗಿರುವ ಗುರುಪಾಲ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳ ಮೇಲೆ 110 ಕೋಟಿ ರೂಪಾಯಿ ಬ್ಯಾಂಕ್ ಸಾಲ ವಂಚನೆ ಕೇಸನ್ನು ಸಿಬಿಐ ದಾಖಲಿಸಿಕೊಂಡಿದೆ.
ಸಿಬಿಐ ಸಲ್ಲಿಸಿರುವ FIR ಪ್ರಕಾರ, ಸಾರ್ವಜನಿಕ ವಲಯದ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಓಬಿಸಿ) ನಲ್ಲಿ ಸಂಸ್ಥೆ ಎರಡು ಸಾಲವನ್ನು ಪಡೆದುಕೊಂಡಿತ್ತು. ಒಂದು 2015ರಲ್ಲಿ 97.85 ಕೋಟಿ, ಇನ್ನೊಂದು ಹಳೆಯ ಸಾಲವನ್ನು ತೀರಿಸಲು 110 ಕೋಟಿ ರೂಪಾಯಿಯ ಇನ್ನೊಂದು ಸಾಲವನ್ನು ಪಡೆದುಕೊಂಡಿತ್ತು.

ಆದರೆ, ಎರಡನೇ ಸಾಲವನ್ನು ನವೆಂಬರ್ 29, 2016ರಲ್ಲಿ ಎನ್ಪಿಎ (Non-performing Asset) ಎಂದು ಘೋಷಿಸಲಾಗಿತ್ತು. ಇದು ಅಪನಗದೀಕರಣದ ಮೂರು ವಾರದ ನಂತರ ಎನ್ಪಿಎ ಅಕೌಂಟ್ ಎಂದು ಘೋಷಿಸಲಾಗಿದೆ ಎಂದು ಸಿಬಿಐ FIRನಲ್ಲಿ ಹೇಳಿದೆ.
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್, ನವೆಂಬರ್ 17, 2017ರಲ್ಲಿ ಸಿಬಿಐಗೆ ದೂರು ಸಲ್ಲಿಸಿದ್ದರೂ, ಫೆಬ್ರವರಿ ತಿಂಗಳಲ್ಲಿ ಸಿಬಿಐ FIR ದಾಖಲಿಸಿಕೊಂಡಿದೆ. ಮುಖ್ಯಮಂತ್ರಿಗಳ ಅಳಿಯನ ಜೊತೆ ಸಂಸ್ಥೆಯ ಸಂಸ್ಥಾಪಕ ಗುರ್ಮೀತ್ ಸಿಂಗ್ ಮಾನ್, ಸಿಇಓ ಜಿ ಎಸ್ ಸಿ ರಾವ್, ಮುಖ್ಯ ಹಣಕಾಸು ಅಧಿಕಾರಿ ಸಂಜಯ್ ತಪ್ರಿಯಾ ಮೇಲೆ ದೂರು ದಾಖಲಾಗಿದೆ.
ಇದರ ಜೊತೆಗೆ ಓಬಿಸಿ ಬ್ಯಾಂಕಿನ ಹಲವು ಹಿರಿಯ ಅಧಿಕಾರಿಗಳ ಮೇಲೂ ಸಿಬಿಐ ಕೇಸ್ ದಾಖಲಿಸಿಕೊಂಡಿದೆ. ಭಾನುವಾರ (ಫೆ 25) ಸಂಸ್ಥೆಯ ಎಂಟು ಅಧಿಕಾರಿಗಳ ಮನೆ ಮತ್ತು ಇತರ ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿದೆ.












Click it and Unblock the Notifications