ಜನಸಂಖ್ಯೆ ಹೆಚ್ಚಳ ನಿಯಂತ್ರಿಸಲು ಬಾಬಾ ರಾಮ್ದೇವ್ ಹೊಸ ಐಡಿಯಾ
ನವದೆಹಲಿ, ಮೇ 27: ಯೋಗ ಗುರು, ಪತಂಜಲಿ ಉತ್ಪನ್ನಗಳ ಸಂಸ್ಥೆ ಸಂಸ್ಥಾಪಕ ಬಾಬಾ ರಾಮ್ದೇವ್ ಅವರು ಭಾರತದ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿಸಲು ಹೊಸ ಐಡಿಯಾ ಒಂದನ್ನು ನೀಡಿದ್ದಾರೆ.
ಯಾವುದೇ ದಂಪತಿಗೆ ಹುಟ್ಟುವ ಮೂರನೇ ಮಗು ಹಾಗೂ ಆ ನಂತರದ ಮಗುವಿಗೆ ಮತದಾನದ ಹಕ್ಕನ್ನು ಸರ್ಕಾರ ನಿರಾಕರಿಸಬೇಕು, ಹೀಗೊಂದು ಕಾನೂನನ್ನು ದೇಶದಲ್ಲಿ ತಂದರೆ ಜನಸಂಖ್ಯೆ ನಿಯಂತ್ರಣವಾಗುತ್ತದೆ ಎಂದು ಬಾಬಾ ರಾಮ್ದೇವ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಅಷ್ಟೆ ಅಲ್ಲ, ಮೂರನೇ ಮತ್ತು ಆ ನಂತರದ ಮಗುವು ಮುಂದೆಹೋಗಿ ಚುನಾವಣೆಗಳಲ್ಲಿ ನಿಲ್ಲುವಂತಿಲ್ಲ, ಆತನಿಗೆ ಸರ್ಕಾರಿ ಉದ್ಯೋಗವಾಗಲಿ ಮತ್ತಿತರ ಸೇವೆಗಳು ದೊರಕುವುದಿಲ್ಲವೆಂದು ನಿಯಮ ತರಬೇಕಿದೆ ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.
ಇನ್ನು 50 ವರ್ಷದಲ್ಲಿ ಭಾರತದ ಜನಸಂಖ್ಯೆ 150 ಕೋಟಿ ದಾಟಬಾರದು, ಭಾರತವು ಅಷ್ಟೋಂದು ಜನಸಂಖ್ಯೆಯನ್ನು ತಡೆದುಕೊಳ್ಳಲು ಇನ್ನೂ ತಯಾರಾಗಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಆದರೆ ಈಗಿನ ವೇಗ ನೋಡಿದರೆ ಇನ್ನು ಹತ್ತು ವರ್ಷಗಳಲ್ಲಿಯೇ ಭಾರತದ ಜನಸಂಖ್ಯೆ 150 ಕೋಟಿ ದಾಟುವ ಆತಂಕವಿದೆ ಎಂದು ಬಾಬಾ ಹೇಳಿದರು.

ಮುಂಚೆಯೂ ಹೇಳಿದ್ದರು ರಾಮ್ದೇವ್
ಈ ಮುಂಚೆಯೂ ಬಾಬಾ ರಾಮ್ದೇವ್ ಅವರು ಈ ರೀತಿಯ ಹೇಳಿಕೆ ನೀಡಿದ್ದರು. ಎರಡಕ್ಕಿಂತಲೂ ಹೆಚ್ಚು ಮಕ್ಕಳನ್ನು ಹೆತ್ತವರಿಗೆ ಮತದಾನದ ಹಕ್ಕು ನಿಷೇಧಿಸಬೇಕು ಮತ್ತು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ನಿರಾಕರಿಸಬೇಕು ಎಂದು ರಾಮ್ದೇವ್ ಹೇಳಿದ್ದರು.

ಎರಡೇ ಮಕ್ಕಳಿಗೆ ಕುಟುಂಬ ನಿಲ್ಲುತ್ತದೆ: ರಾಮ್ದೇವ್
ಈ ರೀತಿಯ ನಿಯಮಗಳನ್ನು ಜಾರಿಗೆ ತರುವುದರಿಂದ ಎರಡೇ ಮಕ್ಕಳಿಗೆ ಕುಟುಂಬ ನಿಲ್ಲುತ್ತದೆ. ಈ ನಿಯಮವನ್ನು ಧರ್ಮಾತೀತವಾಗಿ ಜಾರಿಗೆತರಬೇಕು ಎಂದು ಬಾಬಾ ರಾಮ್ದೇವ್ ಹೇಳಿದರು.

'ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಮದ್ಯ ನಿಷೇಧವಾಗಿದೆ'
ಇಷ್ಟೆ ಅಲ್ಲದೆ ಬಾಬಾ ರಾಮ್ದೇವ್ ಅವರು, ದೇಶದಾದ್ಯಂತ ಮದ್ಯವನ್ನು ನಿಷೇಧ ಮಾಡಬೇಕೆಂದು ಸಹ ಆಗ್ರಹಿಸಿದ್ದಾರೆ. ಇಸ್ಮಾಮಿಕ್ ರಾಷ್ಟ್ರಗಳಲ್ಲಿ ಮದ್ಯ ನಿಷೇಧಿಸಲಾಗಿದೆ. ಆಗಿದ್ದ ಮೇಲೆ ಭಾರತದಲ್ಲಿ ಏಕೆ ಮದ್ಯ ನಿಷೇಧಿಸಬಾರದು ಎಂದು ಬಾಬಾ ರಾಮ್ದೇವ್ ಹೇಳಿದ್ದರು.

ಗೋಹತ್ಯೆಯನ್ನೂ ನಿಷೇಧಿಸಿ: ರಾಮ್ದೇವ್
ಗೋ ಹತ್ಯೆಯನ್ನು ಇಡೀಯ ಭಾರತದಲ್ಲಿ ನಿಷೇಧಿಸಬೇಕೆಂದು ಸಹ ಬಾಬಾ ರಾಮ್ದೇವ್ ಅವರು ಆಗ್ರಹಿಸಿದರು. ಗೋ ರಕ್ಷಕರ ದಾಳಿಯನ್ನು ನಿಯಂತ್ರಿಸಲು ಗೋಹತ್ಯೆ ನಿಷೇಧಿಸುವುದೇ ದಾರಿ ಎಂದೂ ಸಹ ಅವರು ಅಭಿಪ್ರಾಯಪಟ್ಟಿದ್ದಾರೆ. ಮಾಂಸ ತಿನ್ನುವವರಿಗೆ ಭಾರತದಲ್ಲಿ ಬೇರೆ ವಿವಿದ ಮಾಂಸಗಳು ಲಭ್ಯವಿವೆ ಎಂದೂ ಅವರು ಹೇಳಿದ್ದಾರೆ.












Click it and Unblock the Notifications