ಪಠಾಣ್ ವಿವಾದ: ಸಿನಿಮಾಗಳ ಮೇಲೆ ಅನಗತ್ಯ ಟೀಕೆ ಮಾಡದಂತೆ ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ಸೂಚನೆ
ನವದೆಹಲಿ, ಜನವರಿ, 19: "ಸಿನಿಮಾಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನು" ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕತಿಗೆ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ನಡೆದ ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಈ ಎಚ್ಚರಿಕೆಗಳನ್ನು ನೀಡಿದ್ದಾರೆ. ಸಭೆಯ ಕೊನೆಯಲ್ಲಿ ಪ್ರಧಾನಿ ಮೋದಿ, ಪಕ್ಷದ ನಾಯಕರಿಗೆ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಪಟ್ಟಿಯನ್ನು ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹು ನಿರೀಕ್ಷಿತ ಚಿತ್ರ ಪಠಾಣ್ ಬಗ್ಗೆ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದು, ಚಿತ್ರ ಬಹಿಷ್ಕಾರಕ್ಕೂ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೆ ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ.

ಸಿನಿಮಾಗಳ ಬಗ್ಗೆ ಅನಗತ್ಯ ಟೀಕೆ ಬೇಡ: ಪ್ರಧಾನಿ
ಪ್ರತಿಯೋಬ್ಬ ಬಿಜೆಪಿಯ ಸಚಿವರು ಚಲನಚಿತ್ರಗಳ ಬಗ್ಗೆ ಕಾಮೆಂಟ್ ಮಾಡುತ್ತಲೇ ಇರುತ್ತಾರೆ ಎಂದು ಪ್ರಧಾನಿಯವರು ಸ್ಪಷ್ಟವಾಗಿ ಹೇಳಿದ್ದು, ಇದನ್ನು ಟೀಕಿಸಿದ್ದಾರೆ. ಯಾವುದೇ ಸಚಿವರ ಹೆಸರನ್ನು ತೆಗೆದುಕೊಳ್ಳದೇ ಇಂತಹ ಘಟನೆಗಳು ನಡೆಯದಂತೆ ಪ್ರಧಾನಿ ಸೂಚಿಸಿದ್ದಾರೆ.
ಪ್ರಧಾನಿ ಮೋದಿಯವರ ಸಂದೇಶವನ್ನು ಸ್ವೀಕರಿಸಲಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಚಿತ್ರ "ಪಠಾಣ್" ಚಿತ್ರವನ್ನು ಕಟುವಾಗಿ ಟೀಕಿಸಿದ್ದವರಲ್ಲಿ ಇವರು ಒಬ್ಬರು.

ಯಾವ ಸಚಿವರ ಹೆಸರು ತೆಗೆದುಕೊಳ್ಳದೆ ಎಚ್ಚರಿಕೆ ನೀಡಿದ ಪ್ರಧಾನಿ
ಇನ್ನು ಒಬ್ಬ ಸಚಿವರು ಯಾವಾಗಲೂ ಸಿನಿಮಾಗಳ ಬಗ್ಗೆ ಟೀಕಿಸುತ್ತಲೇ ಮಾಡುತ್ತಲೇ ಇರುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ' ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಹೆಸರನ್ನು ತೆಗೆದುಕೊಂಡಿಲ್ಲ' ಎಂದು ಮಾಹಿತಿ ನೀಡಿದ್ದಾರೆ.
"ಅವರ ಪ್ರತಿಯೊಂದು ಮಾತು ಮತ್ತು ಪ್ರತಿ ವಾಕ್ಯವು ನಮಗೆ ಮುಖ್ಯವಾಗಿದೆ. ಅದಕ್ಕಾಗಿಯೇ ಎಲ್ಲಾ ಕಾರ್ಯಕರ್ತರು ಕಾರ್ಯಕಾರಿಣಿ ಸಭೆಯಿಂದ ಸ್ಫೂರ್ತಿ ಪಡೆದಿದ್ದಾರೆ. ನಮ್ಮ ನಡವಳಿಕೆಯು ಅವರ ಮಾರ್ಗದರ್ಶನ ಮತ್ತು ಶಕ್ತಿಯಿಂದ ತುಂಬಿದೆ" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಬೇಷರಂ ರಂಗ್" ಬಗ್ಗೆ ಭುಗಿಲೆದ್ದಿದ್ದ ಆಕ್ಷೇಪ
ಕಳೆದ ತಿಂಗಳುಗಳಲ್ಲಿ ಪಠಾಣ್ ಸಿನಿಮಾ ಮತ್ತು ಅದರ "ಬೇಷರಂ ರಂಗ್" ಹಾಡಿನ ವಿರುದ್ಧ ಭಾರಿ ಆಕ್ಷೇಪಗಳು ಕೇಳಿ ಬಂದಿವೆ. ಬಲಪಂಥೀಯ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಚಲನಚಿತ್ರವನ್ನು ಬಹಿಷ್ಕಾರ ಮಾಡಬೇಕು, "ಬೇಷರಂ ರಂಗ್" ಹಾಡನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದರು.
ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಕಿತ್ತಳೆ ಬಣ್ಣದ ಬಿಕಿನಿ "ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುತ್ತದೆ" ಎಂದು ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಒಂದರಲ್ಲಿ ನಾಯಕ ನಟ ಶಾರುಕ್ ಖಾನ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿಸಲಾಗಿದೆ.
ಈ ಹಾಡು ಕೊಳಕು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದ ಸಚಿವ ನರೋತ್ತಮ್ ಮಿಶ್ರಾ ಅದರ ಶೀರ್ಷಿಕೆ ಕೂಡ "ಆಕ್ಷೇಪಾರ್ಹ" ಎಂದು ಆರೋಪಿಸಿದ್ದಾರೆ.
"ಅಲ್ಲದೆ, ಕೇಸರಿ ಮತ್ತು ಹಸಿರು ಬಣ್ಣಗಳನ್ನು ವೇಷಭೂಷಣಗಳಲ್ಲಿ ಬಳಸಿರುವ ವಿಧಾನವು ಆಕ್ಷೇಪಾರ್ಹವಾಗಿದೆ. ಹಾಡಿನಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದೆ. ಇಲ್ಲದಿದ್ದರೇ, ನಾವು ಮಧ್ಯಪ್ರದೇಶದಲ್ಲಿ ಚಲನಚಿತ್ರವನ್ನು ಪ್ರದರ್ಶಿಸಬೇಕೇ ಬೇಡವೇ ಎಂಬ ಬಗ್ಗೆ ನಿರ್ಧರಿಸಬೇಕಾಗುತ್ತದೆ" ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಕೆ ನೀಡಿದ್ದರು.

ಸಮಾಜದ ಪ್ರತಿಯೊಂದು ವರ್ಗವನ್ನು ತಲುಪಬೇಕು: ಮೋದಿ
ಸಿನಿಮಾಗ ಬಗ್ಗೆ ಅನಗತ್ಯ ಕಾಮೆಂಟ್ ಮಾಡುವುದು ಬಿಡಿ ಎಂಬುದರ ಜೊತೆಗೆ ಪ್ರಧಾನಿ ಮೋದಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಮೋದಿ ಎಲ್ಲರನ್ನೂ ಒಳಗೊಳ್ಳುವ ಸಂದೇಶವನ್ನು ರವಾನಿಸಿದ್ದಾರೆ. "
ಕೇವಲ ಚುನಾವಣಾ ಪರಿಗಣನೆಗಳಿಲ್ಲದೆ ಅಲ್ಪಸಂಖ್ಯಾತರಾದ ಬೋಹ್ರಾಗಳು, ಪಸ್ಮಾಂಡಾಗಳು ಮತ್ತು ಸಿಖ್ಖರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗವನ್ನು ತಲುಪಬೇಕು ಎಂದು ಹೇಳಿದ್ದಾರೆ.
"ಬಿಜೆಪಿಯು ಇನ್ನು ಮುಂದೆ ಕೇವಲ ರಾಜಕೀಯ ಚಳವಳಿಯಾಗಿರದೆ ಸಾಮಾಜಿಕ ಆಂದೋಲನವಾಗಿದೆ. ಬಿಜೆಪಿ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳನ್ನು ಪರಿವರ್ತಿಸಲು ಕೆಲಸ ಮಾಡುತ್ತಿದೆ" ಎಂದು ಅಧಿವೇಶನದಲ್ಲಿ ಭಾಗವಹಿಸಿದ್ದ ಸಚಿವರು, ಮುಖಂಡರು ಮತ್ತು ಕಾರ್ಯಕರ್ತರಿಗೆ ಹೇಳಿದ್ದಾರೆ.
ಸಭೆಯಲ್ಲಿ ಮುಂಬರುವ ಚುನಾವಣೆಗಳ ಬಗ್ಗೆ ಮಾರ್ಗಸೂಚಿಯನ್ನು ರಚಿಸಲಾಗಿದೆ.











Click it and Unblock the Notifications