ಹಾಸ್ಯ ಕಲಾವಿದ ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅನುಮತಿ
ನವದೆಹಲಿ, ನವೆಂಬರ್ 12: ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರಿಗೆ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ಸುಪ್ರೀಂಕೋರ್ಟ್ ವಿರುದ್ಧ ಸರಣಿ ಟ್ವೀಟ್ಗಳ ಮೂಲಕ ಲೇವಡಿ ಮಾಡಿದ್ದ ಹಾಸ್ಯ ಕಲಾವಿದ ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನೇಕ ವಕೀಲರು ಮುಂದಾಗಿದ್ದಾರೆ.
ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ತಮ್ಮ ಅನುಮತಿ ನೀಡಿದ್ದಾರೆ. ಕುನಾಲ್ ಕಮ್ರಾ ಅವರು ಮಾಡಿದ ಟ್ವೀಟ್ಗಳು 'ತೀವ್ರ ಆಕ್ಷೇಪಾರ್ಹವಾಗಿವೆ' ಮತ್ತು 'ನ್ಯಾಯಾಂಗ ನಿಂದನೆ ಅಪರಾಧ ಪ್ರಕರಣಕ್ಕೆ ಸಮನಾಗಿವೆ' ಎಂದು ಅವರು ಹೇಳಿದ್ದಾರೆ.
ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನೀಡಿ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರ ವಿರುದ್ಧವಾಗಿ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಸರಣಿ ಟ್ವೀಟ್ಗಳನ್ನು ಮಾಡಿದ್ದರು. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಪ್ರಾರಂಭಿಸಲು ಅನುಮತಿ ನೀಡುವಂತೆ ಮುಂಬೈ ಮೂಲಕದ ವಕೀಲರೊಬ್ಬರು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ಅನುಮತಿ ಕೋರಿದ್ದರು.

ಕಮ್ರಾ ಅವರ ಟ್ವೀಟ್ಗಳು ಆಕ್ಷೇಪಾರ್ಹವಾಗಿವೆ. ಈ ಟ್ವೀಟ್ಗಳು ಸುಪ್ರೀಂಕೋರ್ಟ್ಅನ್ನು ನಿಂದಿಸುವ ಅಪರಾಧಕ್ಕೆ ಪೂರಕವಾಗಿವೆಯೇ ಎಂದು ಕೋರ್ಟ್ ನಿರ್ಧರಿಸಬಹುದು ಎಂಬುದಾಗಿ ವೇಣುಗೋಪಾಲ್ ಹೇಳಿದ್ದಾರೆ.
ಇಂದು ಜನರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಇದು ಎಂದು ನಂಬುವ ಮೂಲಕ ಸುಪ್ರೀಂಕೋರ್ಟ್ ಮತ್ತು ಅದರ ನ್ಯಾಯಮೂರ್ತಿಗಳನ್ನು ಧೈರ್ಯದಿಂದ ಮತ್ತು ಮನಬಂದಂತೆ ಟೀಕಿಸಬಹುದು ಎಂದು ನಂಬಿಕೊಂಡಿದ್ದಾರೆ. ಆದರೆ ಸಂವಿಧಾನದ ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ನ್ಯಾಯಾಂಗ ನಿಂದನೆ ಕಾನೂನಿಗೂ ಒಳಪಟ್ಟಿದೆ ಎಂದು ಹೇಳಿರುವ ವೇಣುಗೋಪಾಲ್, ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸಲು ಒಪ್ಪಿಗೆ ನೀಡಿದ್ದಾರೆ.












Click it and Unblock the Notifications