ಸಂಜ್ಯೋತ ರೈಲು ಸ್ಫೋಟ: ಅಸೀಮಾನಂದಗೆ ಜಾಮೀನು
ವದೆಹಲಿ, ಆ.28: ಇಸ್ಲಾಮಿಕ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಹಿಂದು ಭಯೋತ್ಪಾದನೆ ಆರಂಭಿಸುವ ಮಾತನಾಡಿದ್ದ, ಸಂಜ್ಯೋತ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದಗೆ ಗುರುವಾರ ಪಂಜಾಬ್ ಮತ್ತು ಹರ್ಯಾನ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಸಂಕಟಮೋಚನ ದೇಗುಲ ಸೇರಿದಂತೆ ವಿವಿಧ ಹಿಂದು ದೇವಾಲಯಗಳ ಮೇಲಿನ ದಾಳಿಗೆ ಪ್ರತಿಕಾರವಾಗಿ ಮುಸ್ಲಿಂ ಮಸೀದಿಗಳ ಮೇಲೆ ದಾಳಿ ಮಾಡಲಾಗಿದೆ. ಮಾಲೇಗಾಂವ್, ಸಮಜೋತ ಎಕ್ಸ್ಪ್ರೆಸ್, ಅಜ್ಮೀರ್ ದರ್ಗಾ ಹಾಗೂ ಮೆಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇತರ ಹಿಂದೂ ಕಾರ್ಯಕರ್ತರೊಡನೆ ತಾವೂ ಭಾಗಿಯಾಗಿದ್ದಾಗಿ ಮ್ಯಾಜಿಸ್ಟ್ರೇಟರೊಬ್ಬರ ಮುಂದೆ ಬಂಧಿತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕ ಸ್ವಾಮಿ ಆಸೀಮಾನಂದ ತಪ್ಪೊಪ್ಪಿಕೊಂಡಿದ್ದರು.
ಆಸೀಮಾನಂದ ಹಾಗೂ ಇತರೆ ಮೂವರು ಆರೋಪಿಗಳ ಮೇಲಿನ ವಿವಿಧ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್ ಐಎ) ನಡೆಸುತ್ತಿತ್ತು.

ಆಸೀಮಾನಂದರ ತಪ್ಪೊಪ್ಪಿಗೆಯಿಂದ ಹಿಂದು ಉಗ್ರರ ಜಾಲ ಕಾರ್ಯನಿರತವಾಗಿರುವುದು ಖಚಿತವಾಗಿದೆ. ಹಾಗೆಯೇ ಅವರ ಸಹಿ ಇರುವ 42 ಪುಟಗಳ ತಪ್ಪೊಪ್ಪಿಗೆ ಹೇಳಿಕೆ ತಮ್ಮ ಬಳಿಯಿದೆ. ಮುಸ್ಲಿಮರನ್ನು ಗುರಿಯಾಗಿಸಿ ಧಾರ್ಮಿಕ ಸ್ಥಳಗಳಲ್ಲಿ ನಡೆಸುತ್ತಿರುವ ಭಯೋತ್ಪಾದನಾ ದಾಳಿ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಈ ತಪ್ಪೊಪಿಗೆ ಹೇಳಿಕೆ ಬಹಳ ಮುಖ್ಯವಾಗಿದೆ ಎಂದು 'ತೆಹಲ್ಕಾ' ನಿಯತಕಾಲಿಕ ಹೇಳಿಕೊಂಡಿದೆ.
ಹರ್ಯಾಣದಿಂದ 160ಕಿ.ಮೀ ದೂರವಿರುವ ಪಾಣಿಪಟ್ ಸಮೀಪದ ದಿವಾನ ಎಂಬ ಗ್ರಾಮದ ಬಳಿ 2007ರ ಫೆ.18ರಂದು ಸಂಜ್ಯೋತಾ ಎಕ್ಸ್ ಪ್ರೆಸ್ ಲಿಂಗ್ ರೈಲು ಸ್ಫೋಟಗೊಂಡಿತ್ತು. ಸ್ಫೋಟದ ರುವಾರಿ ಎಂದು ಆಸೀಮಾನಂದ ಗುರುತಿಸಲಾಗಿತ್ತು.
ರೈಲು ಸ್ಫೋಟದಲ್ಲಿ ಸುಮಾರು 68 ಮಂದಿ ಸಾವನ್ನಪ್ಪಿದ್ದರು. ಮೃತರಲ್ಲಿ ಹೆಚ್ಚಿನ ಮಂದಿ ಪಾಕಿಸ್ತಾನಿ ಪ್ರಯಾಣಿಕರಿದ್ದರು. ಆಸೀಮಾನಂದ ಅವರು ಹಿಂದೂಪರ ಸಂಘಟನೆ ಅಭಿನವ್ ಭಾರತ್ ಸಂಘಟನೆಯ ಸದಸ್ಯರಾಗಿದ್ದರು. 2007ರಲ್ಲಿ ಹೈದರಾಬಾದಿನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದ ನಂತರ ಆಸೀಮಾನಂದ ಸ್ವಾಮಿಯನ್ನು ಬಂಧಿಸಲಾಗಿತ್ತು. (ಐಎಎನ್ ಎಸ್)












Click it and Unblock the Notifications