ಅಮಿತ್ ಶಾ ರಾಜ್ಯಭಾರ 3 ರಾಜ್ಯಗಳ ಚುನಾವಣೆ ಮುಗಿಯುವ ತನಕ?
ನವದೆಹಲಿ, ಜೂನ್ 10: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಪ್ರದರ್ಶನ ನೀಡಿ, ಮತ್ತೊಮ್ಮೆ ಅಧಿಕಾರ ಹಿಡಿಯಲು ನೆರವಾದ ಅಧ್ಯಕ್ಷ ಅಮಿತ್ ಶಾ ಅವರು ಈಗ ಮೋದಿ ಸರ್ಕಾರ್ 2.0ನಲ್ಲಿ ಕ್ಯಾಬಿನೆಟ್ ಸಚಿವ, ದೇಶದ ಗೃಹ ಸಚಿವ. ಒಬ್ಬ ವ್ಯಕ್ತಿಗೆ ಒಂದು ಹುದ್ದೆ ನಿಯಮ ಅಮಿತ್ ಅವರಿಗೂ ಅನ್ವಯ. ಆದರೆ, ಸದ್ಯಕ್ಕೆ ಈ ನಿಯಮ ಬದಿಗೊತ್ತಲು ಬಿಜೆಪಿ ಮುಂದಾಗಿದೆ.
ಮುಂಬರುವ ಮಹಾರಾಷ್ಟ್ರ, ಹರ್ಯಾಣ ಹಾಗೂ ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿಯುವ ತನಕ ಅಮಿತ್ ಶಾ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂಬ ಸುದ್ದಿ ಬಂದಿದೆ.
ಮುಂಬರುವ ಚುನಾವಣೆಗೂ ಮುನ್ನ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ, ವರ್ಷಾಂತ್ಯದವರೆಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಮುಂದುವರೆಯುವುದು ಖಚಿತವಾಗಿದೆ.

ಜೂನ್ 13 ಹಾಗೂ 14ರಂದು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಿಜೆಪಿ ಘಟಕಗಳ ಪ್ರಮುಖರ ಸಭೆಯನ್ನು ಅಮಿತ್ ನಡೆಸಲಿದ್ದಾರೆ. ಈ ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ರಾಜ್ಯ ಘಟಕಗಳ ಪುನಾರಚನೆ ಚರ್ಚೆ ಹಾಗೂ ನಿರ್ಧಾರವಾಗಲಿದೆ.
ಮತ್ತೊಮ್ಮೆ ದೇಶದೆಲ್ಲೆಡೆ ಸದಸ್ಯತ್ವ ಅಭಿಯಾನ ಆರಂಭಕ್ಕೆ ಕರೆ ನೀಡುವ ಸಾಧ್ಯತೆ ಹೆಚ್ಚಿದೆ. ಇದಾದ ಬಳಿಕ ಬೂತ್ ಮಟ್ಟದಿಂದ ರಾಜ್ಯ ಘಟಕದವರೆಗೆ ಸಂಘಟನೆಯ ಪುನಾರಚನೆಯಾಗಲಿದೆ.
ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡ್ ಬಿಜೆಪಿ ಮುಖಂಡರ ಜತೆ ಅಮಿತ್ ಶಾ ಸಭೆ ನಡೆಸಲು ಮುಂದಾಗಿದ್ದಾರೆ. ಚುನಾವಣೆಗೆ ಬೇಕಾದ ಕಾರ್ಯತಂತ್ರ, ಪಕ್ಷ ಸಂಘಟನೆ ಬಗ್ಗೆ ಚರ್ಚಿಸಲಿದ್ದಾರೆ. ಅಮಿತ್ ಶಾ ಅವರ ಮಾರ್ಗದರ್ಶನದಂತೆ ಈ ಮೂರು ರಾಜ್ಯಗಳ ಚುನಾವಣೆ ನಡೆಯಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.












Click it and Unblock the Notifications