ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ: ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಬಂದ ವಾಯುಪಡೆ
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು ಹಲವು ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಯವತ್ಮಾಲ್ ಜಿಲ್ಲೆಯಲ್ಲಿ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಕಾರಣ ಪ್ರವಾಹ ಉಂಟಾಗಿದ್ದು, ಹಲವರು ಸಿಲುಕಿದ್ದಾರೆ ಇವರನ್ನು ರಕ್ಷಿಸಲು ಭಾರತೀಯ ವಾಯುಪಡೆಯ ವಿಮಾನಗಳು ಆಗಮಿಸಿದೆ.
ಭಾರತೀಯ ವಾಯುಪಡೆಯ ಎರಡು ಎಂಐ-17 ವಿ5 ಚಾಪರ್ಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡವು ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಒಟ್ಟಾಗಿ ಕೆಲಸ ಮಾಡಿದೆ. ಯವತ್ಮಾಲ್ ನಲ್ಲಿ ಸಿಲುಕಿದ್ದ 110 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

"ಯವತ್ಮಾಲ್ ಜಿಲ್ಲಾಡಳಿತದಿಂದ ಬಂದ ಮಾಹಿತಿಯ ಪ್ರಕಾರ, ಮಹಾಗಾಂವ್ ತಾಲೂಕಿನ ಆನಂದನಗರ ತಾಂಡಾದಲ್ಲಿ ಸಿಕ್ಕಿಬಿದ್ದ ಎಲ್ಲಾ 110 ನಾಗರಿಕರನ್ನು ಸ್ಥಳಾಂತರಿಸಲಾಗಿದೆ ಮತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತಂಡವು ಭಾರತೀಯ ವಾಯುಪಡೆಯ ಎಸ್ಡಿಆರ್ ಎಫ್ ಮೇಲ್ವಿಚಾರಣೆಯಲ್ಲಿ ದೋಣಿಗಳ ಸಹಾಯದಿಂದ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ. ಇಡೀ ತಂಡಕ್ಕೆ ಅಭಿನಂದನೆಗಳು," ಎಂದು ದೇವೇಂದ್ರ ಫಡ್ನವಿಸ್ ಹೇಳಿದರು.
ಎರಡು ದಿನಗಳಿಂದ ಭಾರಿ ಮಳೆ
ಎರಡು ದಿನಗಳ ನಿರಂತರ ಮಳೆಯ ನಂತರ, ಪ್ರವಾಹದಂತಹ ಪರಿಸ್ಥಿತಿಯಿಂದಾಗಿ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ಸುಮಾರು 110 ಜನರು ಸಿಲುಕಿಕೊಂಡಿದ್ದಾರೆ. ನಿನ್ನೆ ರಾತ್ರಿ ಈ ಭಾಗದ ಮನೆಗಳು ಜಲಾವೃತಗೊಂಡಿದ್ದು, ರಸ್ತೆಗಳು ಜಲಾವೃತವಾಗಿವೆ.
ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಯವತ್ಮಾಲ್ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಸುಮಾರು 231 ಮಿಮೀ ಮಳೆಯಾಗಿದೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದರು.
"ಮಧ್ಯರಾತ್ರಿಯ ಸುಮಾರಿಗೆ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು, ಬೆಳಗ್ಗೆ ಎದ್ದು ನೋಡಿದಾಗ ನಮ್ಮ ಮನೆ ನೀರಿನಲ್ಲಿ ಮುಳುಗಿತ್ತು, ನಮ್ಮ ಮನೆಗೆ ನೀರು ನುಗ್ಗಿದ್ದು, ಸೋಫಾ, ಫ್ರಿಡ್ಜ್, ರೇಷನ್ ಸೇರಿದಂತೆ ಪೀಠೋಪಕರಣಗಳು ನೀರಿನಲ್ಲಿ ಮುಳುಗಿವೆ" ಎಂದು ಸ್ಥಳೀಯರೊಬ್ಬರು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ರಾಜ್ಯಾದ್ಯಂತ ಭರ್ಜರಿ ಮಳೆ
ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಮುಂಬೈನಲ್ಲಿ ಭಾರೀ ಮಳೆಯಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಮುಂಬೈ ಮತ್ತು ಅಕ್ಕಪಕ್ಕದ ಪ್ರದೇಶಗಳ ರಸ್ತೆಗಳು ಸಹ ತೀವ್ರ ಜಲಾವೃತಗೊಂಡಿವೆ.
ಸುದ್ದಿ ಸಂಸ್ಥೆ ಎಎನ್ಐ ಪ್ರಕಾರ, ಪ್ರಾದೇಶಿಕ ಹವಾಮಾನ ಇಲಾಖೆಯು ಪಾಲ್ಘರ್, ಥಾಣೆ, ಮುಂಬೈ, ರಾಯಗಡ, ರತ್ನಗಿರಿ ಮತ್ತು ಸಿಂಧುದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾನುವಾರ ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.












Click it and Unblock the Notifications