ಉತ್ತರ ಪ್ರದೇಶ: ಕೈಗಾರಿಕಾ ವಲಯದಲ್ಲಿ ಸ್ಥಳೀಯರಿಗೆ ಶೇ. 90ರಷ್ಟು ಮೀಸಲಾತಿ?
ಉತ್ತರ ಪ್ರದೇಶದ ಪ್ರಮುಖವಾಗಿರುವ ನಿರುದ್ಯೋಗ ಸಮಸ್ಯೆಗೆ ಇತಿಶ್ರೀ ಹಾಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿರುವ ಸಿಎಂ ಆದಿತ್ಯನಾಥ್
ಲಕ್ನೋ, ಏಪ್ರಿಲ್ 4: ಉತ್ತರ ಪ್ರದೇಶದಲ್ಲಿ ಶೀಘ್ರವೇ ನೂತನ ಕೈಗಾರಿಕಾ ನೀತಿಯು ಜಾರಿಗೊಳ್ಳಲಿದ್ದು, ರಾಜ್ಯದಲ್ಲಿ ಬೀಡುಬಿಟ್ಟಿರುವ ಅಥವಾ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಯಾವುದೇ ಕೈಗಾರಿಕೆಯಲ್ಲಿ ಶೇ. 90ರಷ್ಟು ಉದ್ಯೋಗಗಳನ್ನು ಉತ್ತರ ಪ್ರದೇಶದ ಜನತೆಗೇ ಮೀಸಲಿಡಬೇಕೆಂಬ ನಿಯಮ ತರಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಆರ್ ಎಸ್ಎಸ್ ವತಿಯಿಂದ ಪ್ರಕಟವಾಗುವ ಆರ್ಗನೈಸರ್ ವಾರಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೀಗೆ ಹೇಳಿರುವ ಅವರು, ''ಉತ್ತರ ಪ್ರದೇಶದ ಪ್ರಮುಖವಾಗಿರುವ ನಿರುದ್ಯೋಗ ಸಮಸ್ಯೆಗೆ ಇತಿಶ್ರೀ ಹಾಡುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ತಾವು ಕಾಷಾಯ ವಸ್ತ್ರಧಾರಿಗಳಾಗಿರುವುದರಿಂದಲೇ ಜನರು ತಮ್ಮ ಬಗ್ಗೆ ಅನೇಕ ಅಪನಂಬಿಕೆ ಬೆಳೆಸಿಕೊಳ್ಳಲು ಕಾರಣವಾಗಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ''ದೇಶದಲ್ಲಿ ಅನೇಕರು ಕಾಷಾಯ ವಸ್ತ್ರಧಾರಿಗಳಾಗಿದ್ದಾರೆ. ಆದರೆ, ಅವರೆಲ್ಲರಿಗಿಂತಲೂ ಹೆಚ್ಚಾಗಿ ನನ್ನ ಮೇಲೆಯೇ ಅಪನಂಬಿಕೆಗಳು ಹೆಚ್ಚು'' ಎಂದು ಅವರು ಹೇಳಿದ್ದಾರೆ.
''ಜಾತ್ಯಾತೀತತೆ ಹಾಗೂ ಓಲೈಕೆಯ ಸೋಗಿನ ರಾಜಕಾರಣದಿಂದ ಜನರನ್ನು ಮರುಳು ಮಾಡುತ್ತಿದ್ದ ಕೆಲವಾರು ವ್ಯಕ್ತಿಗಳಿಗೆ ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ನಡುಕ ಉಂಟಾಗಿದೆ. ಆದರೆ, ಅವರ ಹಾಗೆ ನಾನು ಜನರಿಗೆ ಮೋಸ ಮಾಡುವುದಿಲ್ಲ. ನನ್ನದೇ ಆದ ಆಡಳಿತ ಶೈಲಿಯ ಮೂಲಕ ಜನರ ಮನಸ್ಸನ್ನು ಗೆಲ್ಲುತ್ತೇನೆ'' ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಮುಖ್ಯಮಂತ್ರಿ ಹುದ್ದೆ ತಮ್ಮ ಪಾಲಿಗೆ ಪದವಿಯಲ್ಲ, ಅದು ತಮ್ಮ ಜವಾಬ್ದಾರಿ ಎಂದು ಹೇಳಿದ ಅವರು, ಸ್ಥಾನ ಮಾನಗಳ ಆಸೆಗಾಗಿ ತಾವು ರಾಜಕೀಯಕ್ಕೆ ಬಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಉತ್ತರ ಪ್ರದೇಶದಲ್ಲಿ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡುವುದೇ ತಮ್ಮ ಆದ್ಯ ಕರ್ತವ್ಯ ಎಂದು ಪುನರುಚ್ಛರಿಸಿದ್ದಾರೆ.