ಮೋದಿ ಸರಕಾರಕ್ಕೆ 4 ವರ್ಷ: ವಿದೇಶಾಂಗ ಸಚಿವಾಲಯದ ಅದ್ಭುತ ಸ್ಪರ್ಶ
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಹಳ ಸಮಯದಿಂದ ಸುದ್ದಿಯಲ್ಲಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಈ ನಾಲ್ಕು ವರ್ಷದಲ್ಲಿ ವಿದೇಶಾಂಗ ಸಚಿವಾಲಯ ಹಲವು ಸವಾಲುಗಳನ್ನು ಎದುರಿಸಿದೆ ಮತ್ತು ಆ ಪೈಕಿ ತುಂಬ ಸವಾಲು ಅಂದರೆ ಯುದ್ಧಪೀಡಿತ ಭೂಮಿಯಿಂದ ಭಾರತೀಯರನ್ನು ವಾಪಸ್ ಕರೆತಂದಿದ್ದು.
ವಿದೇಶಾಂಗ ಸಚಿವಾಲಯದ ಜವಾಬ್ದಾರಿ ಸುಷ್ಮಾ ಸ್ವರಾಜ್ ತೆಗೆದುಕೊಂಡಿದ್ದು, ವಿದೇಶಗಳಲ್ಲಿ ಸಿಲುಕಿದ್ದ ಹತ್ತು ಸಾವಿರಕ್ಕೂ ಹೆಚ್ಚು ಭಾರತೀಯರನ್ನು ರಕ್ಷಿಸಲಾಗಿದೆ. ಇದರ ಜತೆಗೆ ದೋಕ್ಲಾಂನ ಬಿಕ್ಕಟ್ಟು ಪರಿಹರಿಸುವಲ್ಲಿ ಕೂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೊಡಗಿಸಿಕೊಂಡಿತ್ತು. ದೋಕ್ಲಾಂನ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸುಷ್ಮಾ ಸ್ವರಾಜ್ ಹೇಳಿದ್ದರು.
ಇನ್ನು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮಧ್ಯದ ಅನೌಪಚಾರಿಕ ಭೇಟಿ ಎರಡು ದೇಶಗಳ ಮಧ್ಯದ ಪರಸ್ಪರ ವಿಶ್ವಾಸ ವೃದ್ಧಿಗೆ ಪೂರಕ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಎನ್ ಡಿಎ ಸರಕಾರ ನಾಲ್ಕು ವರ್ಷ ಪೂರೈಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸುಷ್ಮಾ ಸ್ವರಾಜ್, ದೋಕ್ಲಾಂನಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಯುದ್ಧದ ಹೊರತಾಗಿ ಪರಿಹಾರ ಮಾರ್ಗಗಳು ಕಂಡುಬರುವುದಿಲ್ಲ. ಆದರೆ ಎರಡು ಕಡೆಯಿಂದ ಮಾತುಕತೆ ಹಾಗೂ ರಾಜತಾಂತ್ರಿಕ ನಡೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಯಿತು ಎಂದು ಹೇಳಿದ್ದಾರೆ.

"ಭಾರತವು ಚೀನಾದ ಜತೆಗೆ ದೋಕ್ಲಾಂ ಬಿಕ್ಕಟ್ಟನ್ನು ಮಾತುಕತೆ ಹಾಗೂ ರಾಜತಾಂತ್ರಿಕ ನಡೆ ಮೂಲಕ ಬಗೆಹರಿಸಿಕೊಂಡಿದ್ದಕ್ಕೆ ಜಾಗತಿಕ ಸಮುದಾಯವು ಮೆಚ್ಚುಗೆ ವ್ಯಕ್ತಪಡಿಸಿದೆ" ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಎರಡು ದೇಶಗಳು ಯುದ್ಧ ಮಾಡದೆ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂಬ ಭಾವನೆ ಇತ್ತು ಎಂದಿದ್ದಾರೆ.
"ದೋಕ್ಲಾಂ ಸಂಘರ್ಷ ಸ್ಥಳದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಯಥಾ ಸ್ಥಿತಿ ಮುಂದುವರಿದಿದೆ" ಎಂದು ಅಲ್ಲಿನ ಸದ್ಯದ ಸ್ಥಿತಿ ಬಗ್ಗೆ ಸುಷ್ಮಾ ಸ್ವರಾಜ್ ಉತ್ತರಿಸಿದ್ದಾರೆ.

ಕೈಲಾಶ್ ಮಾನಸ ಸರೋವರ ಯಾತ್ರಾರ್ಥಿಗಳಿಗೆ ಅಲ್ಲಿನ ಪವಿತ್ರ ಸರೋವರದಲ್ಲಿ ಸ್ನಾನ ಮಾಡಲು ಚೀನಾ ಅವಕಾಶ ಮಾಡಿಕೊಡಲಿಲ್ಲ ಎಂಬ ಬಗ್ಗೆ ಗಮನ ಸೆಳೆದಾಗ ಸುಷ್ಮಾ ಸ್ವರಾಜ್, ಅದು ಸರಿಯಲ್ಲ. ಸರೋವರದಲ್ಲಿ ಸ್ನಾನಕ್ಕಾಗಿ ಜಾಗ ನಿಗದಿ ಪಡಿಸಲಾಗಿದೆ. ಅದು ಹಾಗೆ ಮುಂದುವರಿಯುತ್ತದೆ ಎಂದು ಉತ್ತರಿಸಿದ್ದಾರೆ.
"ಅಲ್ಲಿ ಕೆಲ ನಿರ್ದಿಷ್ಟ ಸ್ಥಳವಿರುತ್ತದೆ, ಅಲ್ಲಿ ಯಾರೇ ಭಕ್ತರು ಸ್ನಾನ ಮಾಡಬಹುದು. ಸರೋವರದ ಎಲ್ಲೆಂದರಲ್ಲಿ ಸ್ನಾನ ಮಾಡಲು ಸಾಧ್ಯವಿಲ್ಲ" ಎಂದು ಆಕೆ ಹೇಳಿದ್ದಾರೆ.
ಮೋದಿ ಹಾಗೂ ಕ್ಸಿ ಮಧ್ಯದ ಅನೌಪಚಾರಿಕ ಭೇಟಿಯು ಫಲಪ್ರದವಾಗಿದೆ. ಯಾವ ಉದ್ದೇಶದಿಂದ ಭೇಟಿಯನ್ನು ಆಯೋಜಿಸಲಾಗಿತ್ತೋ ಅವೆಲ್ಲ ಈಡೇರಿವೆ ಎಂದು ಹೇಳಿದ್ದಾರೆ.
"ಅನೌಪಚಾರಿಕ ಭೇಟಿಯ ಹಿಂದೆ ಮಾತುಕತೆ ಸುಲಭವಾಗಲಿ ಹಾಗೂ ಜಾಗತಿಕ ವಿಚಾರಗಳಲ್ಲಿ ಪರಸ್ಪರ ಎರಡು ದೇಶಗಳ ಮಧ್ಯೆ ಸಹಮತ ಮೂಡಲಿ ಹಾಗೂ ಪರಸ್ಪರ ವಿಶ್ವಾಸ ವೃದ್ಧಿಸಲಿ ಎಂಬ ಉದ್ದೇಶವಿತ್ತು. ನಮ್ಮ ಎಲ್ಲ ಉದ್ದೇಶವೂ ಈಡೇರಿದೆ" ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಮೋದಿಗೆ ಯಾವಾಗ ಬೇಕೋ ಆಗ ಕರೆ ಮಾಡಬಹುದು ಎಂದು ಚೀನಾ ಅಧ್ಯಕ್ಷರು ಹೇಳಿದ್ದಾರೆ. ಅದೇ ರೀತಿ ಯಾವುದೇ ವಿಚಾರವಾಗಿ ಭಾರತದ ದೃಷ್ಟಿಕೋನ ತಿಳಿದುಕೊಳ್ಳುವ ಸಲವಾಗಿ ತಮಗೂ ಕರೆ ಮಾಡಬಹುದು ಎಂದು ಮೋದಿ ತಿಳಿಸಿದ್ದಾಗಿ ಸುಷ್ಮಾ ಸ್ವರಾಜ್ ಮಾಹಿತಿ ನೀಡಿದ್ದಾರೆ.
ಸಂಕಷ್ಟ ಸಂದರ್ಭದಲ್ಲಿ ತೆರವು ಕಾರ್ಯಾಚರಣೆ:
* 2014ರಲ್ಲಿ 1100 ಮಂದಿಯನ್ನು ಉಕ್ರೇನ್ ನಿಂದ, 3,750 ಮಂದಿಯನ್ನು ಲಿಬಿಯಾದಿಂದ ಮತ್ತು 7200 ಮಂದಿಯನ್ನು ಇರಾಕ್ ನಿಂದ ರಕ್ಷಿಸಲಾಗಿದೆ.
* 2015ರಲ್ಲಿ 6,710 ಮಂದಿ (4748 ಭಾರತೀಯರು) ಯೆಮೆನ್ ನಿಂದ, 2016ರಲ್ಲಿ ದಕ್ಷಿಣ ಸೂಡಾನ್ ನಿಂದ 153 ಮಂದಿಯನ್ನು ರಕ್ಷಿಸಲಾಗಿದೆ.
* 2016ರಲ್ಲಿ ಸೌದಿ ಅರೇಬಿಯಾದಿಂದ 1500ಕ್ಕೂ ಹೆಚ್ಚು ಮಂದಿ ಕಾರ್ಮಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರಕ್ಷಿಸಲಾಗಿದೆ.
ಭಾರತಕ್ಕೆ ವಾಪಸ್ ಕರೆತಂದವರು
* ಫಾ. ಅಲೆಕ್ಸ್ ಪ್ರೇಮ್ ಕುಮಾರ್ ಮತ್ತು ಜುಡಿತ್ ಡಿಸೋಜಾ ಅಫ್ಘಾನಿಸ್ತಾನದಿಂದ ಬಿಡುಗಡೆ
* ಕೇರಳ ಮೂಲದ ಸಿಸ್ಟರ್ ಸ್ಯಾಲಿ ಅವರನ್ನು ಯೆಮೆನ್ ನಿಂದ ಬಿಡುಗಡೆ
* ಮೌಲ್ವಿ ಸೈಯದ್ ಅಸಿಫ್ ಅಲಿ ನಿಜಾಮಿ ಮತ್ತು ಅವರ ಸಂಬಂಧಿ ನಜೀಂ ಅಲಿ ನಿಜಾಮಿ ಪಾಕಿಸ್ತಾನದಿಂದ ಹಿಂತಿರುಗಿದರು
180ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಇ- ವೀಸಾ ಸೌಕರ್ಯ.












Click it and Unblock the Notifications