ಉತ್ತರಾಖಂಡ ಪ್ರವಾಹ: ಕರ್ನಾಟಕದ 36 ಜನರ ರಕ್ಷಣೆ
ಬೆಂಗಳೂರು, ಜೂ. 28: ಎರಡು ವರ್ಷಗಳ ಹಿಂದೆ ಜಲಪ್ರಳಯಕ್ಕೆ ತುತ್ತಾಗಿದ್ದ ಉತ್ತರಾಖಂಡದಲ್ಲಿ ಮತ್ತೆ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ಸುಮಾರು 200 ಕನ್ನಡಿಗರ ಸ್ಥಿತಿ ಅಂತ್ರವಾಗಿದ್ದು ತುಮಕೂರು ಜಿಲ್ಲೆ ಶಿರಾದ 29 ಜನ ಮತ್ತು ಚಾಮರಾಜನಗರ ಜಿಲ್ಲೆಯ 7 ಜನರನ್ನು ರಕ್ಷಿಸಲಾಗಿದೆ.
300ಕ್ಕೂ ಹೆಚ್ಚು ಕನ್ನಡಿಗರು ಪ್ರವಾಹದಲ್ಲಿ ಸಿಲುಕಿದ್ದು, 200 ಯಾತ್ರಿಗಳ ಸ್ಥಿತಿ ಅತಂತ್ರವಾಗಿದೆ. ಬೆಂಗಳೂರು, ತುಮಕೂರು, ಪಾವಗಡ, ಗೌರಿಬಿದನೂರು, ಮೈಸೂರು, ಬಳ್ಳಾರಿ ಸೇರಿದಂತೆ ವಿವಿಧೆಡೆಯಿಂದ ಬದರಿನಾಥ, ಕೇದಾರನಾಥ ಸೇರಿದಂತೆ ಉತ್ತರಾಖಂಡದ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿದ್ದ ಕನ್ನಡಿಗರು ಅಲ್ಲಿ ಉಂಟಾದ ಪ್ರವಾಹ ಹಾಗೂ ಭೂಕುಸಿತದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ.[ಜಮ್ಮು ಕಾಶ್ಮೀರ ಪ್ರವಾಹ ಚಿತ್ರಗಳು]

ಬದರಿನಾಥದ ಸತ್ಯಬಾಬಾ ಅನ್ನಕ್ಷೇತ್ರ ಸಮೀಪದ ದೀಪಕ್ ಲಾಡ್ಜ್ ಬಳಿ ಸುಮಾರು 130 ಕನ್ನಡಿಗರ ದೊಡ್ಡ ದಂಡು ನೆರವಿನ ನಿರೀಕ್ಷೆಯಲ್ಲಿದೆ. ಹರಿದ್ವಾರದ ಜೋಶಿಮಠದಲ್ಲೂ 53 ಕನ್ನಡಿಗರು ಸಿಲುಕಿದ್ದಾರೆ. ಇವರೆಲ್ಲ ತುಮಕೂರು, ಶಿರಾ ತಾಲೂಕಿನ ಕನ್ನಡಿಗರು ಎಂದು ಹೇಳಲಾಗಿದೆ. 29 ಕನ್ನಡಿಗರು ದೆಹಲಿಯ ಕರ್ನಾಟಕ ಭವನಕ್ಕೆ ಬಂದಿಳಿದಿದ್ದಾರೆ ಎಂದು ಭವನದ ಜಂಟಿ ನಿವಾಸಿ ಆಯುಕ್ತ ರಂಗಸ್ವಾಮಿ ತಿಳಿಸಿದ್ದಾರೆ.[ಕರಾವಳಿ, ಮಲೆನಾಡಲ್ಲಿ ಮುಂದುವರಿದ ಮಳೆ ಅಬ್ಬರ]
ಆಹಾರ ಪದಾರ್ಥ ಸಿಗುತ್ತಿಲ್ಲ. ವ್ಯಾಪಾರಿಗಳು ಬೆಲೆ ಏರಿಕೆ ಮಾಡಿ ನಮ್ಮನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಮಾಡಿಕೊಂಡ ಮನವಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ ಎಂದು ಪ್ರವಾಸಿಗರು ಆರೋಪಿಸುತ್ತಿದ್ದಾರೆ.
ಪ್ರವಾಹ ಮತ್ತು ಭೂ ಕುಸಿತದಿಂದ ತತ್ತರಿಸಿರುವ ಕೇದಾರ ಕಣಿವೆ, ಹೇಮಕುಂಡ್ ಸಾಹಿಬ್ ಮತ್ತು ಚಮೋಲಿಯಲ್ಲಿನ ಬದ್ರೀನಾಥ್ ಪ್ರದೇಶಗಳಿಗೆ ಇಂದು ಬೆಳಗ್ಗೆ ಭೇಟಿ ನೀಡಿದ ಕೇಂದ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ಶರ್ಮ ಅವರು, ಒಟ್ಟಾರೆ ಎಲ್ಲ 900 ಜನರನ್ನೂ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ನೆರೆ ಹಾವಳಿಗೆ ಸಿಕ್ಕಿ ಅತಂತ್ರರಾಗಿ ಉತ್ತರಾಖಂಡದಿಂದ ದೆಹಲಿಗೆ ಆಗಮಿಸುವ ಕನ್ನಡಿಗರಿಗೆ ಕರ್ನಾಟಕ ಭವನದಲ್ಲಿ ನೆರವು ನೀಡಲಾಗುವುದು ಎಂದು ನಿವಾಸಿ ಆಯುಕ್ತರಾದ ವಂದನಾ ಗುರ್ನಾನಿ ತಿಳಿಸಿದ್ದಾರೆ. ಉತ್ತರಾಖಂಡ ರಾಜ್ಯದ ಕಾರ್ಯದರ್ಶಿ ಮಟ್ಟದ ಐಎಎಸ್ ಅಧಿಕಾರಿ ಶ್ರೀಧರಬಾಬು ಅವರೊಂದಿಗೆ ಅಲ್ಲಿನ ಸ್ಥಿತಿಗತಿ ಕುರಿತು ಚರ್ಚಿಸಲಾಗಿದೆ. ಮಳೆಯಿಂದಾಗಿ ನೂರು ಮೀಟರ್ ಉದ್ದದ ರಸ್ತೆ ಕುಸಿದಿದ್ದು, ಅದನ್ನು ಸರಿಪಡಿಸಲಾಗುತ್ತಿದೆ. ಸದ್ಯ ಮಳೆ ಕಡಿಮೆಯಾಗಿದ್ದು ಎಲ್ಲರನ್ನು ರಕ್ಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಸೂಚನೆಯಂತೆ ಉತ್ತರಾಖಂಡದಿಂದ ಆಗಮಿಸುವ ಸಂತ್ರಸ್ತರಿಗೆ ಕರ್ನಾಟಕ ಭವನದಲ್ಲಿ ವಾಸ್ತವ್ಯ, ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ ಕರ್ನಾಟಕ ಭವನದ ಜಂಟಿ ನಿವಾಸಿ ಆಯುಕ್ತರಾದ ರಂಗಸ್ವಾಮಿ ಹಾಗು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾತ್ರಿಗಳ ರೈಲ್ವೆ ಟಿಕೆಟ್ ಗಳನ್ನು ಸಹ ಪ್ರಯಾಣದ ಅವಧಿಗೆ ಅನುಗುಣವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಸಹಾಯವಾಣಿ ಸಂಖ್ಯೆ
ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ- 1070 (ಟೋಲ್ ಫ್ರೀ)
ದೆಹಲಿ ಕರ್ನಾಟಕ ಭವನದ ಜಂಟಿ ನಿವಾಸಿ ಆಯುಕ್ತ ರಂಗಸ್ವಾಮಿ: 09868393991












Click it and Unblock the Notifications