ಪಂಜಾಬ್ಗೆ ಬಂದ 173 ಸಿಖ್ ಯಾತ್ರಾರ್ಥಿಗಳಿಗೆ ಕೊರೊನಾ ಸೋಂಕು
ಚಂಡೀಗಢ, ಮೇ 01 : ಮಹಾರಾಷ್ಟ್ರದಿಂದ ಪಂಜಾಬ್ಗೆ ವಾಪಸ್ ಆದ ಸಿಖ್ ಯಾತ್ರಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಯಾತ್ರಾರ್ಥಿಗಳು ಈಗ ರಾಜ್ಯಕ್ಕೆ ವಾಪಸ್ ಆಗಿದ್ದಾರೆ.
Recommended Video
ಲಾಕ್ ಡೌನ್ ಜಾರಿಯಾದ ಕಾರಣ ಮಹಾರಾಷ್ಟ್ರದ ಗುರುದ್ವಾರದಲ್ಲಿ ಸಿಖ್ ಯಾತ್ರಾರ್ಥಿಗಳು ಸಿಲುಕಿದ್ದರು. ಏಪ್ರಿಲ್ 22ರಂದು ಅವರು ಪಂಜಾಬ್ಗೆ ವಾಪಸ್ ಆಗಲು ಆರಂಭಿಸಿದ್ದರು. ಎಲ್ಲರನ್ನೂ ಕ್ವಾರಂಟೈನ್ನಲ್ಲಿ ಇಡಲು ಸರ್ಕಾರ ಆದೇಶ ನೀಡಿತ್ತು.
ಶುಕ್ರವಾರ 173 ಯಾತ್ರಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಪಂಜಾಬ್ನ ವಿರೋಧ ಪಕ್ಷಗಳು ಮಹಾರಾಷ್ಟ್ರ ಮತ್ತು ಪಂಜಾಬ್ ಸರ್ಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ. ಯಾತ್ರಾರ್ಥಿಗಳಿಗೆ ಸರಿಯಾದ ಸೌಲಭ್ಯ ನೀಡಿಲ್ಲ ಎಂದು ದೂರಿವೆ.

ಮಹಾರಾಷ್ಟ್ರ ಸರ್ಕಾರ ಯಾತ್ರಾರ್ಥಿಗಳಿಗೆ ಸರಿಯಾದ ಸೌಲಭ್ಯ ನೀಡಿಲ್ಲ. ಅವರ ವೈದ್ಯಕೀಯ ಪರೀಕ್ಷೆಯನ್ನು ಸಹ ಮಾಡದೇ ವಾಪಸ್ ಕಳಿಸಿಕೊಟ್ಟಿದೆ ಎಂದು ಆರೋಪಿಸಲಾಗಿದೆ.
ಸುಮಾರು 4 ಸಾವಿರ ಯಾತ್ರಾರ್ಥಿಗಳು ಮಹಾರಾಷ್ಟ್ರದ ನಾಂದೇಡ್ನಲ್ಲಿರುವ ಗುರುದ್ವಾರಕ್ಕೆ ಹೋಗಿದ್ದರು. ಮಾರ್ಚ್ 25ರಂದು ಲಾಕ್ ಡೌನ್ ಘೋಷಣೆಯಾದ ಬಳಿಕ ಅಲ್ಲಿ ಸಿಲುಕಿದ್ದರು. ಕೇಂದ್ರ ಗೃಹ ಇಲಾಖೆ ಒಪ್ಪಿಗೆ ಬಳಿಕ 3,500 ಜನರು ಪಂಜಾಬ್ಗೆ ಮರಳಿದ್ದಾರೆ.
"ಇಷ್ಟು ದೊಡ್ಡ ಮಟ್ಟದಲ್ಲಿ ಯಾತ್ರಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತದೆ ಎಂದು ನಾವು ಅಂದಾಜಿಸಿರಲಿಲ್ಲ. ಇನ್ನೂ ಸುಮಾರು 300 ಜನರನ್ನು ಪರೀಕ್ಷೆ ಮಾಡಬೇಕಿದೆ. ಜನರು ಆತಂಕ ಪಡಬೇಡಿ ಮನೆಯಲ್ಲಿಯೇ ಇರಿ" ಎಂದು ವೈದ್ಯಕೀಯ ಶಿಕ್ಷಣ ಸಚಿವ ಓಂ ಪ್ರಕಾಶ್ ಸೋನಿ ಕರೆ ನೀಡಿದ್ದಾರೆ.
ಇಷ್ಟು ದೊಡ್ಡ ಮಟ್ಟದಲ್ಲಿ ಕೊರೊನಾ ಕಂಡು ಬಂದ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಗುರುದ್ವಾರಕ್ಕೆ ಸಂದೇಶ ರವಾನೆ ಮಾಡಲಾಗಿದೆ. ಇದು ಕೊರೊನಾ ಹಾಟ್ ಸ್ಪಾಟ್ ಆಗಿರಬಹುದು ಎಂದು ಪಂಜಾಬ್ ಸರ್ಕಾರ ಸಂದೇಶದಲ್ಲಿ ತಿಳಿಸಿದೆ.
ಗುರುದ್ವಾರ ಪಂಜಾಬ್ ಸರ್ಕಾರದ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದೆ. ಇಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತಿದೆ. ಸೋಂಕು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಪಂಜಾಬ್ನಲ್ಲಿ ಇದುವರೆಗೂ 539 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. 19 ಜನರು ಇದುವರೆಗೂ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.











Click it and Unblock the Notifications