ಸಿದ್ದರಾಮಯ್ಯ ಜ್ಯೋತಿಷ್ಯಾಲಯಕ್ಕೆ ಬೀಗ ಜಡೀರಿ: ಆರ್.ಅಶೋಕ ಲೇವಡಿ
ಹುಬ್ಬಳ್ಳಿ, ಡಿಸೆಂಬರ್ 10: "ಸಿದ್ದರಾಮಯ್ಯ ಬರೀ ಬುರುಡೆ ಬಿಡುತ್ತಾರೆ. ಅವರ ಬುರುಡೆ ಮಾತಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಇನ್ನಾದರೂ ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿ ಮನೆಗೆ ಹೋಗುವುದು ಒಳಿತು" ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.
ನಗರದ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಸುಭದ್ರ ಸರ್ಕಾರ ಮುಂದುವರೆಯಲಿ ಎಂಬುದು ಜನತೆಯ ಆಶಯವಾಗಿದೆ. ಸಮೀಕ್ಷೆ ಮೀರಿ ಬಿಜೆಪಿಗೆ ದೊಡ್ಡ ಗೆಲುವು ಸಿಕ್ಕಿದೆ" ಎಂದರು.
"ಗೆದ್ದವರಿಗೆ ನಾವು ಮಾತು ಕೊಟ್ಟಂತೆಯೇ ನಡೆದುಕೊಳ್ಳುತ್ತೇವೆ. ಸೋತವರ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿಯಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಯಾರಿಂದಲೂ ಬೇಡಿಕೆ, ಬೆದರಿಕೆ ಇಲ್ಲ" ಎಂದರು.

"ಸಿದ್ದರಾಮಯ್ಯ ಅವರು ಬಾಗಿಲು ಮುಚ್ಚಿಕೊಂಡು ಹೋಗಿದ್ದಾರೆ. ಅವರು ವಿರೋಧ ಪಕ್ಷದಲ್ಲಿಯೇ ಮುಂದುವರೆಯಬೇಕು. ಅವರು ಈವರೆಗೂ ಎಲ್ಲೇ ಹೋದರೂ ಪಕ್ಷವನ್ನು ಭಾಗ ಮಾಡಿದ್ದಾರೆ. ಹೀಗಾಗಿ ಇನ್ನೂ ಅವರು ಕಾಂಗ್ರೆಸ್ ನಲ್ಲಿ ಮೂರು ಭಾಗ ಮಾಡಲಿದ್ದಾರೆ" ಎಂದು ಭವಿಷ್ಯ ನುಡಿದರು.
ಈಗಾಗಲೇ ಶರತ್ ಬಚ್ಚೇಗೌಡ ಬಿಜೆಪಿಗೆ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, "ಶರತ್ ಬಚ್ಚೇಗೌಡ ಅವರನ್ನು ಮತ್ತೆ ಕರೆದುಕೊಳ್ಳುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಬಚ್ಚೇಗೌಡ ಅವರು ಮಾತೃ ಪಕ್ಷ ಬಿಟ್ಟು ಹೋಗಿದ್ದು ತಾಯಿಗೆ ಅನ್ಯಾಯ ಮಾಡಿದಂತೆ. ಬಿ.ಎನ್.ಬಚ್ಚೇಗೌಡ ಅವರು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರು ಎಲ್ಲಿಯೂ ಪ್ರಚಾರದಲ್ಲಿ ಭಾಗಿಯಾಗಿಲ್ಲ" ಎಂದ ಅವರು, "ನಮ್ಮ ಪಕ್ಷ ಅಶಿಸ್ತನ್ನು ಎಂದೂ ಸಹಿಸಲ್ಲ. ಅವರ ನಡೆಯನ್ನು ಪಕ್ಷದ ವರಿಷ್ಠರು ಗಮನಿಸಿದ್ದಾರೆ. ವರಿಷ್ಠರು ಅವರು ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.ಈಗ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತವಿದೆ, ಪಕ್ಷಕ್ಕೆ ಯಾರನ್ನೂ ಸೇರಿಸಿಕೊಳ್ಳುವುದಿಲ್ಲ" ಎಂದು ಹೇಳಿದರು.












Click it and Unblock the Notifications