ಹುಬ್ಬಳ್ಳಿ: ಬಡ್ಡಿ ಕುಳಗಳಿಂದ ಹೊಡೆದು ವ್ಯಕ್ತಿಯ ಕೊಲೆ
ತಾವು ನೀಡಿದ ಹಣಕ್ಕೆ ಬಡ್ಡಿ ನೀಡಿಲ್ಲವೆಂದು ಬಡ್ಡಿ ಕುಳಗಳು ಸ್ಥಳೀಯ ಬಂಕಾಪುರ ಚೌಕ ನಿವಾಸಿ ಪರಶುರಾಮ ದೊಡ್ಡಮನಿ (40) ಎಂಬಾತನನ್ನು ಹೊಡೆದು ಸಾಯಿಸಿದ್ದಾರೆ.
ಹುಬ್ಬಳ್ಳಿ, ಫೆಬ್ರವರಿ, 8: ಬಡ್ಡಿ ನೀಡಿಲ್ಲ ಎಂಬ ಒಂದೇ ಕಾರಣಕ್ಕೆ ಬಡ್ಡಿ ಕುಳಗಳು ವ್ಯಕ್ತಿಯೋರ್ವನನ್ನು ಹೊಡೆದು ಸಾಯಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ತಾವು ನೀಡಿದ ಹಣಕ್ಕೆ ಬಡ್ಡಿ ನೀಡಿಲ್ಲವೆಂದು ಬಡ್ಡಿ ಕುಳಗಳು ಸ್ಥಳೀಯ ಬಂಕಾಪುರ ಚೌಕ ನಿವಾಸಿ ಪರಶುರಾಮ ದೊಡ್ಡಮನಿ (40) ಎಂಬಾತನನ್ನು ಹೊಡೆದು ಸಾಯಿಸಿದ್ದಾರೆ. ಫೆಬ್ರವರಿ 3 ರಂದು ದೊಡ್ಡಮನಿಯನ್ನು ಕೇಶ್ವಾಪುರದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಹಾಕಿ ಸ್ಟಿಕ್ ಹಾಗೂ ಬಡಿಗೆಗಳಿಂದ ಬಡ್ಡಿ ವ್ಯಾಪಾರಿಗಳು ಹಲ್ಲೆ ಮಾಡಿದ್ದರು. [ಹುಬ್ಬಳ್ಳಿ: ಕಾಟ್ಲಾ ಮೀನು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಯುವಕ ಸಾವು!]
ಹಲ್ಲೆಯಿಂದ ಗಾಯಗೊಂಡಿದ್ದ ದೊಡ್ಡಮನಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ದೊಡ್ಡಮನಿ ಮೃತಪಟ್ಟಿದ್ದಾರೆ.
ಪ್ರತಿಭಟನೆ
ದೊಡ್ಡಮನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕಿಮ್ಸ್ ಆಸ್ಪತ್ರೆ ಶವಾಗಾರದ ಮುಂದೆ ಮೃತರ ಸಂಬಂಧಿಗಳು ಶವ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸ್ ಕಮಿಷನರ್ ಪಾಂಡುರಂಗ ರಾಣೆ ಸ್ಥಳಕ್ಕೆ ಬರುವಂತೆ ಮೃತರ ಸಂಬಂಧಿಕರು ಒತ್ತಾಯಿಸಿದ್ದು, ಅಲ್ಲಿವರೆಗೆ ಶವ ಪರೀಕ್ಷೆಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪೊಲೀಸರು ಹಾಗೂ ಮೃತರ ಸಂಬಂಧಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. [ಹುಬ್ಬಳ್ಳಿ ಸಂಚಾರಿ ಪೊಲೀಸ್ರ ಕಣ್ತಪ್ಪಿಸಿದ್ರೆ 'ಟ್ರಾಫಿಕ್ ಆಪ್' ಇದೆ ಜೋಕೆ!]
ಮದನ ಬುಗಡಿ, ಕಿರಣ, ದೊಡ್ಡೇಶ ದೊಡ್ಡಮನಿ ಹಾಗೂ ಇನ್ನಿಬ್ಬರು ಸೇರಿ ಹಲ್ಲೆ ಮಾಡಿ ಪರಶುರಾಮ ದೊಡ್ಡಮನಿಯನ್ನು ಕೊಂದಿದ್ದಾರೆ ಎಂದು ಮೃತರ ಸಂಬಂಧಿಗಳು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿಯವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ.