ಹುಬ್ಬಳ್ಳಿ: ನೌಕರಿ ವಂಚನೆ, ರೈಲ್ವೆ ನೌಕರ ಸೇರಿ ನಾಲ್ವರ ಬಂಧನ
ಹುಬ್ಬಳ್ಳಿ, ಜುಲೈ 25 : ಯುವಕರಿಂದ ಲಕ್ಷಾಂತರ ರೂಪಾಯಿ ಪಡೆದು ನಕಲಿ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಹುಬ್ಬಳ್ಳಿ ರೈಲ್ವೆ ರಕ್ಷಣಾ ದಳ ಯಶಸ್ವಿಯಾಗಿದೆ.
ಕೇಂದ್ರ ಸರ್ಕಾರಿ ನೌಕರಿ ಆಮಿಷವೊಡ್ಡಿ ವಂಚಿಸುತ್ತಿದ್ದ ಒಬ್ಬ ರೈಲ್ವೆ ನೌಕರ ಸೇರಿ ನಾಲ್ವರನ್ನು ಸೋಮವಾರ (ಜುಲೈ24) ದಂದು ಹುಬ್ಬಳ್ಳಿಯಲ್ಲಿ ರೇಲ್ವೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು, ಹಾಸನ, ಸುಬ್ರಹ್ಮಣ್ಯ, ಚಾಮರಾಜನಗರ, ಉತ್ತರ ಕನ್ನಡ ಜಿಲ್ಲೆ ಮುರ್ಡೇಶ್ವರದ ಯುವಕ ಸೇರಿ ಒಟ್ಟು 10 ಜನರಿಂದ ಹಣ ಪೀಕಿದ್ದ ಚಿತ್ರದುರ್ಗದ ರೈಲ್ವೆ ವಾಣಿಜ್ಯ ಸಹಾಯಕ ಆನಂದ ಪಿ.ಎಸ್, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಎಂಟೆಕ್ ಪದವೀಧರ ಮನೋಹರ ಎಸ್.ವಿ, ಚಾಮರಾಜನಗರದ ಸಚಿನ್ ಹಾಗೂ ಹುಬ್ಬಳ್ಳಿ ರೈಲ್ವೆ ಆಸ್ಪತ್ರೆ ಸಫಾಯಿ ಕರ್ಮಚಾರಿ ರಮೇಶ ಎನ್ನುವರನ್ನು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ನೈಋತ್ಯ ರೈಲ್ವೆ ಮುಖ್ಯ ಕಚೇರಿ ಹುಬ್ಬಳ್ಳಿಯಲ್ಲಿ ನಿನ್ನೆ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಯುವಕರಿಗೆ ತಿಳಿಸಿದ್ದರು. ಭಾನುವಾರವೇ ಹುಬ್ಬಳ್ಳಿಗೆ ಬಂದಿದ್ದ ಯುವಕರನ್ನು ಕೈಲಾಶ್ ಲಾಡ್ಜ್ ನಲ್ಲಿ ಉಳಿಸಿ, ತಾವು ಇನ್ನೊಂದು ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು.
ಸೋಮವಾರ ರೈಲ್ವೆ ಆಸ್ಪತ್ರೆಯ ಒಂದು ಕೋಣೆಯಲ್ಲಿ ನಕಲಿ ವೈದ್ಯಕೀಯ ತಪಾಸಣೆ ಏರ್ಪಾಟು ಮಾಡಿದ್ದರು. ಈ ಖಚಿತ ಮಾಹಿತಿ ಮೇರೆಗೆ ಆರ್ ಪಿಎಫ್ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಗೆ ರೈಲ್ವೆ ಆಸ್ಪತ್ರೆಯಲ್ಲೇ ನಕಲಿ ವೈದ್ಯಕೀಯ ಪರೀಕ್ಷೆ ಮಾಡಿಸುವಷ್ಟು ಧೈರ್ಯ ಇದೆ ಎಂದರೆ ಪ್ರಕರಣದಲ್ಲಿ ಮೇಲಾಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎಂಬ ಶಂಕೆ ಮೂಡುತ್ತಿದೆ.
ಪ್ರಕರಣದಲ್ಲಿ ಇನ್ನೂ ಹಲವರು ವಂಚನೆಗೀಡಾಗಿರುವ ಸಾಧ್ಯತೆಗಳಿವೆ ಎಂದು ತನಿಖಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದು. ಹೆಚ್ಚಿನ ತನಿಖೆಗಾಗಿ ಕೇಶ್ವಾಪೂರ ಪೊಲೀಸರಿಗೆ ಆರೋಪಿಗಳನ್ನು ಒಪ್ಪಿಸಿದ್ದಾರೆ.












Click it and Unblock the Notifications