ಹಸುಗೂಸುಗಳಿಗೆ ಅವಧಿ ಮುಗಿದ ಔಷಧ ಕುಡಿಸಿದ ಹುಬ್ಬಳ್ಳಿ ಕಿಮ್ಸ್ ವೈದ್ಯರು
ಹುಬ್ಬಳ್ಳಿ, ಜವನರಿ 10: ಇಲ್ಲಿನ ಕಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯತನಕ್ಕೆ ಕೊನೆಯೇ ಇಲ್ಲದಂತಾಗಿದೆ, ಇತ್ತೀಚಗಷ್ಟೆ ಬದುಕಿದ್ದ ಗಾಯಾಳುವನ್ನು ಸತ್ತಿದ್ದಾನೆಂದು ಘೋಷಿಸಿ ಜನರ ಆಕ್ರೋಶಕ್ಕೆ ಗುರಿ ಆಗಿದ್ದ ಕಿಮ್ಸ್ ವೈದ್ಯರು ಈಗ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾರೆ.
ಕಿಮ್ಸ್ ಆಸ್ಪತ್ರೆ ವೈದ್ಯರು ಅವಧಿ ಮೀರಿದ ವಿಟಮಿನ್ ಡಿ3 ಔಷಧಿಯನ್ನು ಹಸುಗೂಸುಗಳಿಗಳಿಗೆ ನೀಡುವ ಮೂಲಕ ನಿರ್ಲಕ್ಷ್ಯ ತೋರಿದ್ದಾರೆ. ವೈದ್ಯರ ಈ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ.
ಕಳೆದ ಒಂದು ವಾರದ ಅವಧಿಯಲ್ಲಿ ಜನಿಸಿದ ವಿಟಮಿನ್ ಕೊರತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ವಿಟಮಿನ್ ಡಿ3 ಸಿರಪ್ ಹಾಕುವಂತೆ ವೈದ್ಯರು ಸೂಚನೆ ನೀಡಿದ್ದರು. ಆದರೆ ಆ ಔಷಧಿ ಕಳೆದ ಡಿಸೆಂಬರ್ ಗೆ ಅವಧಿ ಮುಗಿದಿದೆ. ಅದನ್ನು ಗಮನಿಸಿದ ಮಹಾಂತಪ್ಪ ಎಂಬುವರು ತಮ್ಮ ಮಗುವಿಗೆ ಔಷಧಿ ಹಾಕಲಿಲ್ಲ. ವಾರ್ಡ್ ನಲ್ಲಿ ಇದ್ದ ಇತರೆ ಮೂರು ಮಕ್ಕಳಿಗೂ ಹಾಕದಂತೆ ತಿಳಿಸಿದ್ದಾರೆ. ಆದರೆ, ಬೇರೆ ವಾರ್ಡ್ ನಲ್ಲಿ ಮಕ್ಕಳಿಗೆ ಇದೇ ಔಷಧಿಯನ್ನು ವಿತರಿಸಿರುವ ಸಾಧ್ಯತೆ ಇದೆ ಎಂದು ಮಹಾಂತಪ್ಪ ಆರೋಪಿಸಿದ್ದಾರೆ.

ಅವಧಿ ಮುಗಿದ ಔಷದ ಹಾಕುತ್ತಿರುವ ಬಗ್ಗೆ ಮಹಾಂತಪ್ಪ ತಿಳಿಸಿದ ಕೂಡಲೇ ಎಚ್ಚೆತ್ತುಕೊಂಡ ಕಿಮ್ಸ್ ವೈದ್ಯರು ಮಕ್ಕಳಿಗೆ ಹಾಕಲು ನೀಡಿದ್ದ ಅವಧಿ ಮೀರಿದ ಔಷಧಿಯನ್ನು ವಾಪಸ್ ಪಡೆದಿದ್ದಾರೆ. ಅದೃಷ್ಟವಶಾತ್ ಔಷಧಿ ಕುಡಿದ ಮಕ್ಕಳು ಯಾವುದೇ ಅಪಾಯವಿಲ್ಲದೇ ಆರೋಗ್ಯದಿಂದಲೇ ಇವೆ.
ಕೆಲವು ದಿನದ ಹಿಂದಷ್ಟೆ ಅಪಘಾತದಲ್ಲಿ ಗಾಯಗೊಂಡಿದ್ದ ಪ್ರವೀಣ ಮೋಳೆ ಎಂಬುವರನ್ನು ಬದುಕಿದ್ದಾಗಲೇ ಸತ್ತಿದ್ದಾನೆಂದು ಘೋಷಿಸಿ ಶವಾಗಾರಕ್ಕೆ ಸಾಗಿಸಿದ ಕಾರಣ ಕಿಮ್ಸ್ ಆಸ್ಪತ್ರೆ ಸುದ್ದಿಗೆ ಗ್ರಾಸವಾಗಿತ್ತು.












Click it and Unblock the Notifications