ಕಾಂಗ್ರೆಸ್ಸಿಗರಿಂದ ಬಿಜೆಪಿ ವರಿಷ್ಠರ ಹೆಸರು ದುರ್ಬಳಕೆ: ರವಿ ಗಾಣಿಗ ವಿರುದ್ಧ ದೂರು ದಾಖಲು
ಹುಬ್ಬಳ್ಳಿ, ಆಗಸ್ಟ್ 25: ರಾಜ್ಯ ಸರ್ಕಾರ ಮುಡಾ ಹಗರಣ, ವಾಲ್ಮೀಕಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿದೆ. ಈ ಸಂಬಂಧ ಸಾಲು ಸಾಲು ಆರೋಪ ಮಾಡಿದ ಬಿಜೆಪಿಯೆ ಸರ್ಕಾರ ಬೀಳಿಸಲು ಹೀಗೆಲ್ಲ ಮಾಡುತ್ತಿದೆ. ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ.ಆಪರ್ ನೀಡಲಾಗಿದೆ ಎಂದು 'ಕೈ' ಶಾಸಕ ರವಿ ಗಾಣಿಗ ಹೇಳಿದ್ದಾರೆ. ಈ ಕುರಿತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹಾಗೂ ಮಹೇಶ್ ಟೆಂಗಿನ ಕಾಯಿ ತಕ್ಕ ಪ್ರತ್ಯುತ್ತರ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಪಿ.ರಾಜೀವ್ ಸುದ್ದಿಗೋಷ್ಠಿ ನಡೆಸಿ ಇಂದಿನ ಬೆಳವಣಿಗೆ ಕುರಿತು ಮಾತನಾಡಿದರು. ಕರ್ನಾಟಕದಲ್ಲಿ ಆಡಳಿತದ ಅರಾಜಕತೆ ಶುರುವಾಗಿದೆ. ಕಾಂಗ್ರೆಸ್ಸಿಗರಿಗೆ ಬಿಜೆಪಿಗರು ಆಫರ್ ನೀಡಿದ್ದಾರೆ ಎಂದು ಶಾಸಕ ರವಿ ಗಾಣಿಗ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ.

ರಾಜ್ಯದ ಸರ್ಕಾರ ಆಡಳಿತ ನಿರ್ವಹಣೆ, ಕಾನೂನು ಸುವ್ಯವಸ್ಥೆ ನಿರ್ವಹಿಸುವಲ್ಲಿ ಸಂಪೂರ್ಣ ಕುಸಿದಿದೆ. ಜನ ಜೀವನ ಸುಲಲಿತ ಮಾಡಲು ಸಾಧ್ಯವಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚುವ ಉದ್ದೇಶದಿಂದ ವಿಷಯಾಂತರ ಮಾಡುತ್ತಿದೆ. ಹೀಗಾಗಿ ಶಾಸಕ ರವಿ ಗಾಣಿಗ ಅವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ವರಿಷ್ಠರ ಹೆಸರು ದುರ್ಬಳಕೆ
ಕಾಂಗ್ರೆಸ್ ಶಾಸಕರಿಗೆ ಯಾರು ಆಫರ್ ಕೊಟ್ಟಿದ್ದಾರೆ?. ಯಾರು ಎಷ್ಟು ಅಡ್ವಾನ್ಸ್ ಎಷ್ಟು ಕೊಟ್ಟಿದ್ದಾರೆ ಎನ್ನುವುದನ್ನು ದೇಶದ ಜನರ ಮುಂದೆ ರವಿ ಗಾಣಿಗ ಅವರು ತೆರೆದಿಡಬೇಕು. ಯಾವುದೇ ಪ್ರಯತ್ನ ಬಿಜೆಪಿ ಮಾಡುತ್ತಿಲ್ಲ. ಶಾಸಕ ರವಿ ಗಾಣಿಗ ಅವರು ಬಿಜೆಪಿಯ ದೊಡ್ಡ ದೊಡ್ಡ ನಾಯಕರ ಹೆಸರುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ರವಿ ಗಾಣಿಗ ಅವರ ವಿರುದ್ಧ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ.

ದಲಿತರಿಗೆ ರಕ್ಷಣೆ ನೀಡದ ಸರ್ಕಾರ
ಇನ್ನು ಉಡುಪಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಆಗಿದ್ದರ ಕುರಿತು ಮಾತನಾಡಿದ ಗೃಹ ಮಂತ್ರಿ ಜಿ.ಪರಮೇಶ್ವರ ಅವರು ಇದು ಸಾಮೂಹಿಕ ಅತ್ಯಾಚಾರ ಅಲ್ಲ ಎಂದು ಪ್ರತಿಕ್ರಿಸಿದರು. ನಂಜನಗೂಡಿನಲ್ಲಿ ಒಬ್ಬ ದಲಿತ ಹೆಣ್ಣುಮಗಳ ಶವ ನೇತಾಡಿದೆ ಎಂದರೆ ಏನರ್ಥ, ದಲಿತರಿಗೆ ರಕ್ಷಣೆ ಸಿಗುತ್ತಿಲ್ಲ ಎಂದರ್ಥ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತರ ರಕ್ಷಣೆ ಮಾಡುವಲ್ಲಿ ಗೃಹ ಸಚಿವರು ಸಂಪೂರ್ಣ ದಕ್ಷತೆ ಮರೆತಿದ್ದಾರೆ. ರಾಜ್ಯದಲ್ಲಿ ದಲಿತರ ರಕ್ಷಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದುಹೋಗಿದೆ. ರಾಜ್ಯದಲ್ಲಿ ಗ್ಯಾರಂಟಿಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ.
ಕಳೆದ ಬಾರಿ 3 ಲಕ್ಷ 21 ಸಾವಿರ ಬಜೆಟ್ ಮಂಡನೆ ಮಾಡಿದ್ದರು. ಇಷ್ಟೊಂದು ಹಣ ಎಲ್ಲಿ ಹೋಯ್ತು? ಈವರೆಗೂ ಯಾವ ಶಾಸಕನಿಗೂ ಅನುದಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಹಣದ ಮೂಟೆ ಲೂಟಿಮಾಡಿ ಹೈಕಮಾಂಡ್ ಗೆ ಕಳುಹಿಸುವಲ್ಲಿ ನಿರತವಾಗಿದೆ.
ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯವಾಗದೇ ಈ ರೀತಿ ವಿಷಯಾಂತರ ಮಾಡುತ್ತಿದ್ದಾರೆ. ಶಾಸಕ ರವಿ ಗಾಣಿಗ ಅವರು ಬಿಜೆಪಿ ಆಫರ್ ನೀಡಿರುವ ಬಗ್ಗೆ ಸ್ಪಷ್ಟಪಡಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ನ ಶಾಸಕರು ಬಾಯಿ ಮುಚ್ಚಿಕೊಂಡು ಬಿದ್ದಿರಬೇಕು ಶಾಸಕ ರವಿ ಗಾಣಿಗ ಹಾಗೂ ಕಾಂಗ್ರೆಸ್ಸಿಗರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಏನಂದ್ರು?
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಇದೇ ವಿಷಯವಾಗಿ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ ಅವರು, ನಿಮ್ಮ ಕರ್ತವ್ಯ ಏನು ಎಂಬುದನ್ನು ಅರಿತು ಮುಂದುವರೆಯಿರಿ. ಬಿಜೆಪಿ ಆಫರ್ ಮಾಡಿದೆ ಎಂದು ವಿನಾಕಾರಣ ನಮ್ಮ ಮೇಲೆ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ. ಮಂಡ್ಯ ಶಾಸಕ ರವಿ ಗಾಣಿಗ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದದ್ದರು ಎಂದರು.
ಬಿಜೆಪಿಯಿಂದ ನನಗೆ 100 ಕೋಟಿ ಆಫರ್ ಎಂಬ ಕಾಂಗ್ರೆಸ್ನ ರವಿ ಗಾಣಿಗ ಹೇಳಿಕೆ ಯಾವ ಆಧಾರದ ಮೇಲೆ ಕೊಟ್ಟಿದ್ದಾರೆ? ಅದನ್ನು ಸ್ಪಷ್ಟಪಡಿಸಬೇಕು. ರಾಜ್ಯದ ಜನರು ನಿಮಗೆ 135 ಸ್ಥಾನಗಳನ್ನು ನೀಡಿರುವುದು ಸುಸೂತ್ರ ಆಡಳಿತ ಮಾಡಲು. ನಮಗೆ 66 ಸ್ಥಾನ ನೀಡಿ ವಿರೋಧ ಪಕ್ಷದಲ್ಲಿಟ್ಟು ರಚನಾತ್ಮಕ, ಕ್ರಿಯಾತ್ಮಕ ಹೋರಾಟ ಮಾಡುವ ಅಧಿಕಾರ ನೀಡಿದ್ದಾರೆ. ಇಂದು ಕಾಂಗ್ರೆಸ್ ಮನೆ ಮುರಿದು ಹೋಗುತ್ತಿದೆ. ಅದನ್ನು ಮುಚ್ಚಿಕೊಳ್ಳಲು ಬೇರೊಬ್ಬರ ಮನೆಯ ಮೇಲಿ ಇಲಿ ಒಗೆಯುವ ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ಕಾಂಗ್ರೆಸ್ ನಾಯಕರ ನಡೆಯನ್ನು ಕಟುವಾಗಿ ಟೀಕಿಸಿದರು.












Click it and Unblock the Notifications