ಫೋನ್ ಕದ್ದಾಲಿಕೆ : ಸಿಬಿಐ ತನಿಖೆ ಬಗ್ಗೆ ಅನುಮಾನವಿದೆ!
ಹುಬ್ಬಳ್ಳಿ, ಆಗಸ್ಟ್ 19 : ಫೋನ್ ಟ್ಯಾಪಿಂಗ್ ಕುರಿತು ಕರ್ನಾಟಕ ರಾಜಕೀಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸುವುದಾಗಿ ಘೋಷಣೆ ಮಾಡಿದ್ದಾರೆ.
ಜೆಡಿಎಸ್ ಪಕ್ಷದ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, "ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದನ್ನು ಸ್ವಾಗತಿಸುತ್ತೇನೆ" ಎಂದು ಹೇಳಿದ್ದಾರೆ. ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಸಹ ಸಿಬಿಐ ತನಿಖೆಗೆ ತೀರ್ಮಾನಿಸಿದ್ದನ್ನು ಸ್ವಾಗತಿಸಿದ್ದರು.
"ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಧಿಕಾರವಿದೆ. ಈ ಹಿನ್ನಲೆಯಲ್ಲಿ ಸಿಬಿಐ ತನಿಖೆ ಬಗ್ಗೆ ಅನುಮಾನ ಮೂಡುತ್ತಿದೆ. ಸಿಬಿಐ ಕೇಂದ್ರ ಸರ್ಕಾರದ ಮುಖ ನೋಡಿ ತನಿಖೆ ಮಾಡದೇ ಪ್ರಾಮಾಣಿಕವಾಗಿ ತನಿಖೆ ಮಾಡಬೇಕು" ಎಂದು ಹೊರಟ್ಟಿ ಹೇಳಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ಸಿಬಿಐ ತನಿಖೆ ಮಾಡಿದರೂ ಅಷ್ಟೇ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಕಾರ ಪಡೆದು ತನಿಖೆ ಮಾಡಿದರೂ ಅಷ್ಟೇ. ನನಗೆ ಯಾವುದೇ ಭಯವಿಲ್ಲ" ಎಂದು ಹೇಳಿದ್ದರು.

ಪ್ರಾಮಾಣಿಕ ತನಿಖೆ ಆಗಬೇಕು
"ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಸಿಬಿಐ ಕೇಂದ್ರ ಸರ್ಕಾರದ ಮುಖ ನೋಡಿ ತನಿಖೆ ಮಾಡದೇ ಪ್ರಾಮಾಣಿವಾಗಿ ತನಿಖೆ ಮಾಡಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಅವರದ್ದೇ ಅಧಿಕಾರವಿದೆ ಎಂಬ ಉದ್ದೇಶದಿಂದ ಫೋನ್ ಕದ್ದಾಲಿಕೆ ಪ್ರಕರಣವನ್ನ ಸಿಬಿಐಗೆ ಒಪ್ಪಿಸಲಾಗಿದೆ" ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಏಕಪಕ್ಷೀಯ ತನಿಖೆ ನಡೆಯಬಾರದು
"ರಾಜ್ಯದಲ್ಲಿ ಹಲವಾರು ತನಿಖಾ ತಂಡಗಳಿವೆ ಅವುಗಳಿಂದ ತನಿಖೆ ನಡೆಸಬಹುದು. ಒಂದು ವೇಳೆ ಏಕಪಕ್ಷೀಯ ತನಿಖೆ ನಡೆದಲ್ಲಿ ಸಿಬಿಐಗೆ ಕೊಡಬಾರದು. ಸಿಬಿಐ ತನಿಖೆ ಪೂರ್ಣಗೊಂಡು ವರದಿ ಬರುವ ತನಕ ಕಾಯೋಣ" ಎಂದು ಹೊರಟ್ಟಿ ಹೇಳಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲೂ ಆಗಿದೆ
"ಫೋನ್ ಕದ್ದಾಲಿಕೆ ಸಿಎಂ ಕುಮಾರಸ್ವಾಮಿ ಸರ್ಕಾರದಲ್ಲಿ ಮಾತ್ರವಲ್ಲ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಆಗಿದೆ. ಅವುಗಳನ್ನು ಸಿಬಿಐಗೆ ಒಪ್ಪಿಸಬೇಕು. ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಮಾಡಿದರೆ ಆಪರೇಷನ್ ಕಮಲದ ವಿಷಯ ಹೊರಗೆ ಬರುತ್ತದೆ" ಎಂದು ಹೊರಟ್ಟಿ ಹೇಳಿದರು.

ಸಿಎಂಗೆ ಅಧಿಕಾರವಿದೆ
"ದೇಶ ಮತ್ತು ರಾಜ್ಯಕ್ಕೆ ಗಂಡಾಂತರ ಎದುರಾದಾಗ ಫೋನ್ ಟ್ಯಾಪಿಂಗ್ ಮಾಡಲು ಸಿಎಂಗೆ ಅಧಿಕಾರವಿದೆ. ಈ ರೀತಿ ಮಾಡಿದರೆ ಸಿಬಿಐ ಜೈಲಿಗೆ ಹಾಕುತ್ತಾ. ರಾಜ್ಯದಲ್ಲಿ ಚರ್ಚೆ ನಡೆಯುತ್ತಿರುವ ಫೋನ್ ಟ್ಯಾಪಿಂಗ್ ಪ್ರಕರಣ ತೋಳ ಬಂತು ತೋಳ ಎಂಬಂತೆ ಆಗಬಾರದು" ಎಂದು ಬಸವರಾಜ ಹೊರಟ್ಟಿ ಹೇಳಿದರು.












Click it and Unblock the Notifications