ರೈತರಿಗೆ ಶಾಕ್ ನೀಡಿದ ಬ್ಯಾಂಕ್ ನೋಟಿಸ್: ಸಾಲ ಮನ್ನಾ ನಂಬಿದ್ದವರಿಗೆ ಬರಸಿಡಿಲು
ಹುಬ್ಬಳ್ಳಿ, ಫೆಬ್ರವರಿ 15: ಅಕಾಲಿಕ ಮಳೆ, ಬೆಳೆ ಇಳುವರಿ ಕಡಿಮೆ, ಕನಿಷ್ಟ ಬೆಂಬಲ ಬೆಲೆ ಇಲ್ಲದೆ ರಾಜ್ಯದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ರೈತರ ಜೊತೆಗೆ ನಿಂತು ಅವರಿಗೆ ಧೈರ್ಯ ತುಂಬಬೇಕು. ಆದರೆ ರಾಜ್ಯದಲ್ಲಿ ಆಗುತ್ತಿರುವುದೇ ಬೇರೆಯಾಗಿದೆ
ಕೊಟ್ಟಿದನ್ನು ಕಸಿದುಕೊಳ್ಳುವ ಹುನ್ನಾರ ರಾಜ್ಯದಲ್ಲಿ ನಡೆಯುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ. ರೈತರಿಗೆ ಗಾಯ ಮೇಲೆ ಬರೆ ಎಳೆಯಲಾಗುತ್ತಿದೆ. ನಮ್ಮ ಸಾಲ ಮನ್ನಾ ಆಗಿದೆ ಅಂತ ನೆಮ್ಮದಿಯಿಂದಿದ್ದ ರೈತರಿಗೆ ಈಗ ಬರಸಿಡಲು ಬಡಿದಂತಾಗಿದೆ.
ರೈತರ ಸಾಲ ಮನ್ನಾ ಯೋಜನೆ, 2019ರಲ್ಲಿ ಅಧಿಕಾರದಲ್ಲಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆಯ ಹೆಜ್ಜೆ. ತೀವ್ರ ಸಂಕಷ್ಟದಲ್ಲಿದ್ದ ರಾಜ್ಯದ ಕೋಟ್ಯಾಂತರ ರೈತರ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ, ಅವರನ್ನು ಋಣಮುಕ್ತ ಮಾಡುವ ಉದ್ದೇಶದಿಂದ, ಬ್ಯಾಂಕ್ ಗಳಲ್ಲಿ ರೈತರು ಮಾಡಿದ್ದ ಬೆಳೆ ಸಾಲವನ್ನು ಮನ್ನ ಮಾಡಲಾಗಿತ್ತು. ಈ ಯೋಜನೆಯಿಂದ ಸಹಾಯ ಪಡೆದ ರೈತರು ತಮ್ಮ ಸಾಲ ಮನ್ನಾ ಆಗಿದೆ ಅಂತ, ಇಷ್ಟು ದಿನ ನೆಮ್ಮದಿಯಿಂದ ಕೃಷಿ ಚಟುವಟಿಕೆಯಲ್ಲಿದ್ದ ಅನ್ನದಾತನಿಗೆ ಈಗ ಶಾಕ್ ಆಗಿದೆ.

2019ರಲ್ಲಿ ಅಂದು ಸಾಲ ಮನ್ನಾ ಆಗಿದೆ ಎಂದು ಸರ್ಕಾರ ರೈತರಿಗೆ ಪತ್ರ ನೀಡಿತ್ತು. ಆದರೆ ಇಂದು ಬ್ಯಾಂಕ್ ಗಳು, ನಿಮ್ಮ ಸಾಲ ಮನ್ನಾ ಆಗಿಲ್ಲ ಪಡೆದ ಸಾಲವನ್ನು ಬಡ್ಡಿ ಸಮೇತವಾಗಿ ಕಟ್ಟಿ ಅಂತ ಸಾಲ ವಸೂಲಾತಿ ಪತ್ರದ ಜೊತೆಗೆ ಕೋರ್ಟ್ ನೋಟಿಸ್ ನೀಡಿವೆ.
ಅಧಿಕಾರದಲ್ಲಿದ್ದಾಗ ಸಾಲ ಮನ್ನಾ ಮಾಡಿದ್ದ ಅಂದಿನ ಕುಮಾರಸ್ವಾಮಿ ಸರ್ಕಾರ, ಬೈ ಎಲೆಕ್ಷನ್ ಬಳಿಕ ರೈತರ ಖಾತೆಗೆ ಹಾಕಿದ್ದ ಹಣವನ್ನು ವಾಪಸು ಪಡೆದು ಸುದ್ದಿಯಾಗಿತ್ತು. ಕೊಟ್ಟು ಕಸಿದುಕೊಂಡ ಸರ್ಕಾರ ಅಂತ ರಾಜ್ಯದ ರೈತರು ಸಮ್ಮಿಶ್ರ ಸರ್ಕಾರಕ್ಕೆ ಹಿಡಿ ಶಾಪಹಾಕಿದ್ದರು. ಆಗ ಎಚ್ಚೆತ್ತ ಸರ್ಕಾರ ಇದು ಟೆಕ್ನಿಕಲ್ ಸಮಸ್ಯೆ ಎಂದು ತೇಪೆ ಹಚ್ಚಲು ಮುಂದಾಗಿತ್ತು. ಆಗಿನಿಂದ ಈ ಸಾಲಮನ್ನಾದ ಹೈಡ್ರಾಮಾ ಮುಗಿದಿಲ್ಲ. ನಿಮ್ಮ ಖಾತೆಗೆ ತಪ್ಪಾಗಿ 50 ಸಾವಿರ ರೂ ಜಮೆಯಾಗಿದೆ ಎಂದು ಬ್ಯಾಂಕ್ನವರು ರೈತರ ಖಾತೆಯಿಂದ ಅದನ್ನು ಮತ್ತೆ ವಾಪಸ್ ಪಡೆದಿದ್ದಾರೆ. ಇಷ್ಟುದಿನ ಸಾಲ ಮನ್ನಾ ಆಗಿದೆ ಎಂದು ಈವರೆಗೆ ಖುಷಿಯಲ್ಲಿದ್ದ ರೈತರಿಗೆ, ಈ ನೋಟಿಸ್ನಿಂದ ಬರ ಸಿಡಿಲು ಬಡಿದಂತಾಗಿದೆ.
2019 ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರ 50 ಸಾವಿರ ವರೆಗಿನ ಬೆಳೆ ಸಾಲ ಮನ್ನಾ ಮಾಡಿತ್ತು .ಸ್ವತಃ ಸಿಎಂ ಕುಮಾರಸ್ವಾಮಿಯವರ ಸಹಿ ಇರುವ ಪತ್ರಗಳನ್ನು ರೈತ ಫಲಾನುಭವಿಗಳಿಗೆ ಕಳುಹಿಸಲಾಗಿತ್ತು. ಅಲ್ಲದೇ ಈ ಮನ್ನಾ ಯೋಜನೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಹಿರಿಯ ಐಎಎಸ್ ಅಧಿಕಾರಗಳ ನೇತೃತ್ವದ ತಂಡ ರಚಿಸಲಾಗಿತ್ತು. ರೈತರ ಸಾಲ ಖಾತೆಗೆ ಮನ್ನಾ ಮೊತ್ತ ನೇರವಾಗಿ ಜಮೆ ಮಾಡಲು ಈ ತಂಡವು ಹಗಲಿರಳು ಶ್ರಮಿಸುತ್ತಿದೆ. ಶೀಘ್ರವೇ ನಿಮ್ಮ ಸಾಲದ ಖಾತೆಗೆ ಹಣ ಜಮೆಯಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಅದರಂತೆ ಬ್ಯಾಂಕ್ನ ಸಾಲದ ಖಾತೆಗೆ 50 ಸಾವಿರ ರೂ. ಜಮೆ ಕೂಡಾ ಆಗಿತ್ತು. ಆದರೆ ಹಣವನ್ನ ವಾಪಸ್ ಪಡೆಯಲಾಗಿದೆ.

ಸಾಲ ಮನ್ನಾ ಮೊತ್ತವೆಂದೇ ರೈತರು ಭಾವಿಸಿದ್ದರಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿ ನುಡಿದಂತೆ ನಡೆದು ರೈತರ ಅವರು ಬಾಳು ಹಸನಗೊಳಿಸಿದರು ಎಂದು ಪ್ರಶಂಸನೀಯ ಮಾತುಗಳನ್ನಾಡಿದ್ದರು. ಆದರೆ ಈಗ ಏಕಾಏಕಿ ಬ್ಯಾಂಕ್ಗಳು ಉಲ್ಟಾ ಹೊಡೆದಿದ್ದು, ಇದರ ಹಿಂದೆ ಯಾರ ಕುಮ್ಮಕ್ಕಿದೆ, ಇದು ರಾಜಕೀಯ ತಂತ್ರನಾ ಎನ್ನುವುದು ಸತ್ಯ ತನಿಖೆ ಮೂಲಕ ಹೊರ ಬರಬೇಕಿದೆ.












Click it and Unblock the Notifications