ಹಾಸನ: ಪ್ರಥಮ ಹಳಗನ್ನಡ ಸಾಹಿತ್ಯ ಉದ್ಘಾಟನೆ
ಹಾಸನ, ಜೂನ್ 25: ಕನ್ನಡ ಸಾಹಿತ್ಯ ಪರಿಷತ್ನಿಂದ ಆಯೋಜಿತವಾಗಿರುವ ಪ್ರಥಮ ಹಳಗನ್ನಡ ಸಾಹಿತ್ಯ ಸಮ್ಮೇಳನವು ನಿನ್ನೆ ಸಂಜೆ ಹಾಸನದ ಶ್ರವಣಬೆಳಗೋಳದಲ್ಲಿ ಆರಂಭವಾಯಿತು.
ಸಂಸದ ದೇವೇಗೌಡ ಅವರು ಸಮ್ಮೇಳನದ ಉದ್ಘಾಟನೆ ಮಾಡಿದರು. ಹಿರಿಯ ಇತಿಹಾಸಜ್ಞ, ಸಾಹಿತಿ ಡಾ.ಷ.ಷಟ್ಟರ್ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಉದ್ಘಾಟನೆ ಮಾಡಿ ಮಾತನಾಡಿದ ದೇವೇಗೌಡ ಅವರು, ಹಳಗನ್ನಡ ಕರ್ನಾಟಕದ ಬೆಳವಣಿಗೆಯ ಕುರುಹು, ಹಿಂದೆ ಗ್ರಾಮಗಳಲ್ಲಿ ಶಿಕ್ಷಕರು ಜೈಮಿನಿ ಭಾರತಗಳನ್ನು ಗ್ರಾಮಸ್ಥರಿಗೆ ಹೇಳುವ ಪರಿಪಾಠ ಇತ್ತು ಈಗ ಆ ರೀತಿಯ ವಾತಾವರಣವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜೈನ ಸಾಹಿತ್ಯದ ಬಗ್ಗೆಯೂ ಮಾತನಾಡಿದ ಅವರು, ರಾಜರ ಕಾಲದಿಂದಲೂ ಜೈನ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಸುಂದರಗೊಳಿಸಿದೆ. ಪಂಪ, ರನ್ನ, ಜನ್ನ, ನಾಗಚಂದ್ರರಂತಹಾ ಕವಿಗಳು ನೀಡಿದ ಕೊಡುಗೆ ಅಪಾರ ಎಂದರು.
ಹಳಗನ್ನಡದಲ್ಲಿ ನನಗೆ ಪರಿಶ್ರಮವಿಲ್ಲ ಎಂದ ಅವರು ಕುವೆಂಪು ಅವರು ತಮ್ಮ ರಾಮಾಯಣ ದರ್ಶನಂ ಕೃತಿಯಲ್ಲಿ ಹಳಗನ್ನಡ ಬಳಸಿದ್ದಾರೆ ಎಂದು ನೆನಪಿಸಿದರು. ಹಿಂದೆ ಶ್ರವಣಬೆಳಗೊಳದಲ್ಲಿಯೇ ನಡೆದ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ್ದನ್ನೂ ಅವರು ನೆನಪಿಸಿಕೊಂಡರು.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಓದುಗರ ಸಂಖ್ಯೆ ನಶಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಜೈನ ಸ್ಥಳವು ಸಾಹಿತ್ಯಕ್ಕೆ ಸ್ವಾಗತ ಕೋರುತ್ತದೆ ಎಂದು ಅವರು ಹೇಳಿದರು.
ಕ.ಸಾ.ಪ ಅಧ್ಯಕ್ಷ ಮನುಬಳಿಗಾರ್, ಸಮ್ಮೇಳನಾಧ್ಯಕ್ಷ ಮಡದಿ ಪ್ರೇಮಲತಾ ಶೆಟ್ಟರ್, ಶಾಸಕ ಸಿ.ಎನ್.ಬಾಲಕೃಷ್ಣ ವೇದಿಕೆಯಲ್ಲಿದ್ದರು.












Click it and Unblock the Notifications