ನರೇಂದ್ರ ಮೋದಿ ಹೃಷಿಕೇಶದ ಆಶ್ರಮದಲ್ಲಿ 2 ವರ್ಷ ಸನ್ಯಾಸಿಯಾಗಿದ್ರು
ಹಾಸನ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೃಷಿಕೇಶದ ದಯಾನಂದಾಶ್ರಮದಲ್ಲಿ ಎರಡು ವರ್ಷ ಸನ್ಯಾಸಿಯಾಗಿದ್ದರು. ಈಗಲೂ ಕೂಡ ಅವರಲ್ಲಿ ಸನ್ಯಾಸಿಯ ಎಲ್ಲ ಗುಣಗಳೂ ಇವೆ ಎಂದು ಹುಬ್ಬಳ್ಳಿಯ ಆರ್ಷವಿದ್ಯಾಪೀಠದ ಚಿದ್ರೂಪಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಪಿಡಬ್ಲ್ಯೂಡಿ ಕಾಲೋನಿಯ ರಾಮಮಂದಿರದ ಸಭಾಭವನದಲ್ಲಿ ವೇದಭಾರತೀ, ಪತಂಜಲಿ ಪರಿವಾರ ಮತ್ತು ವಿಶ್ವಹಿಂದೂ ಪರಿಷತ್ತು ಆಯೋಜಿಸಿರುವ ಗೀತಾ ಜ್ಞಾನ ಯಜ್ಞದಲ್ಲಿ ಉಪನ್ಯಾಸ ನೀಡಿದ ಅವರು, ಯಾರು ಕರ್ಮಗಳ ಫಲವನ್ನು ಅಪೇಕ್ಷಿಸದೆ ಯೋಗ್ಯವಾದ ಕರ್ಮವನ್ನು ಮಾಡುತ್ತಾರೋ ಅವರು ಸನ್ಯಾಸಿಯೂ ಯೋಗಿಯೂ ಆಗಿದ್ದಾರೆ. ಕೇವಲ ಅಗ್ನಿಯನ್ನು ತ್ಯಾಗಮಾಡುವವನು ಸನ್ಯಾಸಿಯೂ ಅಲ್ಲ ಹಾಗೂ ಕರ್ಮವನ್ನು ತ್ಯಾಗ ಮಾಡುವವನು ಯೋಗಿಯೂ ಅಲ್ಲ ಎಂದರು.[ಅರಸೀಕೆರೆ ಬಳಿ ಅಪಘಾತ, ಇಬ್ಬರು ಸಾವು]
ನರೇಂದ್ರಮೋದಿ ಅವರು ನಿಜವಾದ ಸಂನ್ಯಾಸಿ. ದಿನಕ್ಕೆ ಹದಿನೆಂಟಕ್ಕಿಂತ ಹೆಚ್ಚು ಗಂಟೆ ಕರ್ಮ ಮಾಡುತ್ತಾರೆ. ಫಲವನ್ನು ಆ ಭಗವಂತನಿಗೆ ಅರ್ಪಿಸಿ ಬಿಡುತ್ತಾರೆ. ಮೋದಿಯವರು ಹೃಷಿಕೇಶದಲ್ಲಿ ದಯಾನಂದ ಸರಸ್ವತಿ ಸ್ವಾಮೀಜಿ ಅವರೊಡನೆ ಸಂನ್ಯಾಸಿಯಾಗಿದ್ದವರು. ಸ್ವಾಮೀಜಿಯವರೇ ನಿನ್ನ ಕಾರ್ಯಕ್ಷೇತ್ರ ರಾಜಕೀಯ. ನೀನು ಅಲ್ಲಿ ಸೇವೆ ಮಾಡು ಎಂದು ಮೋದಿಯವರನ್ನು ಕಳಿಸಿದರು ಎಂದರು.
ಭಗವದ್ಗೀತೆಯಲ್ಲಿ ಎಲ್ಲೂ ಹಿಂದೂ ಎಂಬ ಪದದ ಉಲ್ಲೇಖವಿಲ್ಲ. ಮಹಾಭಾರತ ರಚಿಸಿದ ವ್ಯಾಸರ ತಾಯಿ ಬೆಸ್ತರವಳು. ಭಗವಾನ್ ಕೃಷ್ಣ ಗೊಲ್ಲರವನು, ಅರ್ಜುನನಾದರೋ ಕ್ಷತ್ರಿಯ. ಇಷ್ಟಾದರೂ ಭಗವದ್ಗೀತೆಯನ್ನು ಬ್ರಾಹ್ಮಣರದ್ದು ಎನ್ನುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನೆ ಮಾಡಿದರು.[ಕುರಿ ಮಾರ್ತೀವಿ ಎಂದು ಬಂದವರು ಕೊಲೆ ಮಾಡಿ ಆಭರಣ ದೋಚಿ ಪರಾರಿ]
ಭಗವದ್ಗೀತೆಯು ಬ್ರಾಹ್ಮಣರಿಗಾಗಲೀ ಅಥವಾ ಕೇವಲ ಹಿಂದುಗಳಿಗಾಗಲೀ ರಚಿಸಿದ ಗ್ರಂಥವಲ್ಲ. ಭಗವದ್ಗೀತೆಯು ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶವಾದರೂ ಇಂದಿನ ಕಾಲಕ್ಕೂ ಅದು ಪ್ರಸ್ತುತ. ಗೀತೆ ಒಳಗೆ ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದನ್ನು ಪಾಶ್ಚಿಮಾತ್ಯರೂ ಒಪ್ಪುತ್ತಾರೆ. ಆದರೆ ಗೀತೆಯನ್ನು ಹಿಂದೂಗಳಲ್ಲಿಯೇ ಕೆಲವರು ವಿರೋಧಿಸುವುದು ವಿಚಿತ್ರವೂ ನಮ್ಮ ದೌರ್ಭಾಗ್ಯವೂ ಆಗಿದೆ ಎಂದರು.[ಮರಳಿಗಾಗಿ ಕೊಲೆ: ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಪ್ರಮುಖ ಆರೋಪಿ]
ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರ ಹರಿಹರಪುರ ಶ್ರೀಧರ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರ ಶೇಷಪ್ಪ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.