ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಹಾಸನದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ
ಹಾಸನ, ನವೆಂಬರ್ 04 : 'ಹಾಸನ ಜಿಲ್ಲೆಯಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಅಭಿವೃದ್ದಿಗೆ ನೀಲ ನಕ್ಷೆ ಸಿದ್ದವಾಗುತ್ತಿದ್ದು ಶೀಘ್ರದಲ್ಲೇ ಅದಕ್ಕೊಂದು ರೂಪ ಹಾಗೂ ಚಾಲನೆ ದೊರೆಯಲಿದೆ' ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸಹಾಸನ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಸಚಿವರು, ಶಾಸಕರು, ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, 'ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಹೇಮಾವತಿ, ಯಗಚಿ ಬೇಲೂರು ಹಳೇ ಬೀಡುಗಳನ್ನು ಕೇಂದ್ರ ವನ್ನಾಗಿರಿಸಿಕೊಂಡು 150000 ರೂ. ಕೋಟಿಗೂ ಅಧಿಕ ಮೊತ್ತದ ಪ್ರವಾಸಿ ಆಕರ್ಷಣೆಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು ಜೈಪುರ ಮೂಲಕ ಇಂಟೆಕ್ ವಾಸ್ತು ವಿನ್ಯಾಸ ಸಂಸ್ಥೆ ಪ್ರಾರಂಭಿಕ ಹಂತದ ನೀಲ ನಕಾಶೆ ಸಿದ್ದಪಡಿಸಿ ನೀಡಿದೆ' ಎಂದು ಹೇಳಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಾಸನಾಂಬ ದೇವಿಯ ದರ್ಶನವನ್ನು ಪಡೆದರು, ಬಳಿಕ ಮಾತನಾಡಿದ ಅವರು, 'ಹಾಸನಾಂಬೆ ಹಾಸನದ ಅಧಿದೇವತೆ, ಭಕ್ತಾದಿಗಳು ತಲೆಮಾರುಗಳಿಂದ ಪೂಜಿಸುತ್ತಾ, ಬಂದಿದ್ದಾರೆ. ದೇವರ ಶಕ್ತಿ ಮತ್ತು ಪವಾಡಗಳ ಬಗ್ಗೆ ತಮ್ಮದೆ ಆದ ನಂಬಿಕೆ ಹಾಗೂ ಭಕ್ತಿಯನ್ನು ಹೊಂದಿದ್ದಾರೆ ಅದು ಅವರ ವೈಯಕ್ತಿಕ ವಿಚಾರ, ಆ ನಂಬಿಕೆಗೆ ಧಕ್ಕೆ ತರುವಂತಾಗಬಾರದು' ಎಂದರು.

ಪ್ರಾಥಮಿಕ ಹಂತದ ಚರ್ಚೆ ನಡೆದಿದೆ
'ಹಾಸನ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಪ್ರಾಥಮಿಕ ಹಂತದ ಪರಿಶೀಲನೆ ಹಾಗೂ ಚರ್ಚೆಗಳು ನಡೆದಿದ್ದು ಬೆಂಗಳೂರಿನಲ್ಲಿ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಸಿ ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ. ಬೇಲೂರು ಹಾಗೂ ಯಗಚಿ ಅಣೆಕಟ್ಟೆಗಳ ಮುಂಭಾಗ ಬೃದಾವನಕ್ಕಿಂತಲೂ ಆಕರ್ಷಣೀಯವಾದ ಉದ್ಯಾನವನ, ಥೀಂ ಪಾರ್ಕ್, ಜಲಸಾಹಸ ಮನರಂಜನೆಗಳು, ಕ್ರೀಡೆಗಳು, ರಾತ್ರಿ ಸಫಾರಿ, ವಾಸ್ತು ವಿನ್ಯಾಸ ಸೌಂದರ್ಯಭಿವೃದ್ದಿಗೆ ಯೋಜಿಸಲಾಗಿದೆ' ಎಂದು ಮುಖ್ಯಮಂತ್ರಿಗಳು ಹೇಳಿದರು.

ಬಂಡವಾಳ ಹೂಡಿಕೆಗೆ ಆಸಕ್ತಿ
'ಹಾಸನ ಜಿಲ್ಲೆಯಲ್ಲಿ ಎಲ್ಲಾ ಪ್ರವಾಸೋದ್ಯಮ ಅಭಿವೃದ್ದಿಗೆ ಸಾವಿರಾರು ಕೋಟಿ ವೆಚ್ಚವಾಗಲಿದ್ದು ಚೀನಾ, ಜಪಾನ್ ಮತ್ತಿತರ ದೇಶಗಳಿಂದ ಹೂಡಿಕೆದಾರರು ಬಂಡವಾಳ ತೊಡಗಿಸಲು ಮುಂದಾಗಿದ್ದಾರೆ. ಇದರಿಂದ ಅಕ್ಕಪಕ್ಕದ ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ದಿಗೂ ಅನುಕೂಲವಾಗಲಿದೆ' ಎಂದು ಕುಮಾರಸ್ವಾಮಿ ಹೇಳಿದರು.

126 ಕೋಟಿ ಅನುದಾನ
'ಜಿಲ್ಲೆಯ ವಿವಿಧ ಯೋಜನೆಗಳಿಗೆ ಬಜೆಟ್ನಲ್ಲಿ 50 ಕೋಟಿ ಮೀಸಲಾಗಿಡಲಾಗಿದೆ. ನಂತರ 126 ಕೋಟಿ ಅನುದಾನ ಒದಗಿಸಲಾಗುವುದು. ಈ ವರ್ಷ ಬಾರಿ ಮಳೆಯಿಂದ ಜಿಲ್ಲೆಯಲ್ಲಿಯೂ ನೂರಾರು ಶಾಲಾ, ಕಾಲೇಜು ಕಟ್ಟಡಗಳು ಹಾನಿಗೀಡಾಗಿವೆ. ಅವುಗಳ ದುರಸ್ಥಿಗೆ 15 ಕೋಟಿ ರೂ ಅನುದಾನ ಒದಗಿಸಲಾಗುವುದು. ಬೇಲೂರಿ ತಾಲ್ಲೂಕಿನಲ್ಲಿಯೂ ಸಾಕಷ್ಟು ಹಾನಿ ಸಂಭವಿಸಿದ್ದು ಅದನ್ನು ಅತಿವೃಷ್ಟಿ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಗಮನ ಹರಿಸಲಾಗುವುದು' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಹಣಕಾಸಿನ ಕೊರತೆ ಇಲ್ಲ
'ಅಭಿವೃದ್ದಿ ಕಾರ್ಯಗಳಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ರಾಷ್ಟ್ರೀಕೃತ ಬ್ಯಾಂಕ್ಗಳ ರೈತರ ಸಾಲಮನ್ನಾಕ್ಕೆ ಬಜೆಟ್ನಲ್ಲಿಯೂ ಅನುದಾನ ಘೊಷಿಸಿದೆ. ಸಹಾಕಾರ ಬ್ಯಾಂಕ್ಗಳ ಸಾಲಮನ್ನಾ ಕಂತುಗಳು ಬಿಡುಗಡೆಯಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳು ಈಗ ಸಹಕಾರ ನೀಡುವ ಸೂಚನೆ ನೀಡಿವೆ ಇದೇ ತಿಂಗಳು 10ಲಕ್ಷ ಜನರಿಗೆ ಖುಣ ಮುಕ್ತ ಪತ್ರ ವಿತರಿಸಲಾಗುವುದು. ಯಾವುದೇ ರೈತರು ಕೃಷಿಗಾಗಿ ಸಾಲದ ಹೊರೆ ಹೊರುವಂತಾಗಬಾರದು, ಆತ್ಮಹತ್ಯೆ ಮಾಡಿಕೊಳ್ಳುವಂತಾಗಬಾರದು' ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications