ಸರ್ಕಾರಿ ಐಬಿಯಲ್ಲಿ ತಹಶೀಲ್ದಾರ್ಗಳ ಎಣ್ಣೆ ಪಾರ್ಟಿ: ಪ್ರಶ್ನಿಸಿದವರ ವಿರುದ್ಧವೇ ದೂರು
ಹಾಸನ, ಅಕ್ಟೋಬರ್ 05: ಹಾಸನ ಜಿಲ್ಲೆ ಹೊಳೆನರಸೀಪುರದ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಏಳು ಮಂದಿ ತಹಶೀಲ್ದಾರ್ಗಳು ಎಣ್ಣೆ ಪಾರ್ಟಿ ಮಾಡಿ ಸಿಕ್ಕಿಬಿದ್ದಿದ್ದಾರೆ.
ಹೊಳೆನರಸೀಪುರದ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಹೊಳೆನರಸೀಪುರ ತಹಶೀಲ್ದಾರ್ ಶ್ರೀನಿವಾಸ್ ಅವರು ನಿನ್ನೆ (ಅಕ್ಟೋಬರ್ 04) ಗುಂಡು ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಗೆ ಹಾಸನ ಜಿಲ್ಲೆಯ ತಾಲ್ಲೂಕುಗಳ ತಹಶೀಲ್ದಾರ್ ಅವರುಗಳು ಹಾಜರಾಗಿದ್ದರು. ಪಾರ್ಟಿಯಲ್ಲಿ ಮದ್ಯ, ಮಾಂಸ ಹೇರಳವಾಗಿ ಸರಬರಾಗಿತ್ತು.
ಹಾಸನ, ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಸೀಕೆರೆ, ಸಕಲೇಶಪುರ, ಅರಕಲಗೂಡು ತಹಶೀಲ್ದಾರ್ಗಳು ಪಾರ್ಟಿಯಲ್ಲಿ ಹಾಜರಿದ್ದರು. ಪಾರ್ಟಿ ನಡೆಯುತ್ತಿದ್ದ ವೇಳೆಯಲ್ಲಿಯೇ ಐಬಿಗೆ ಬಿಜೆಪಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ.
ಐಬಿಗೆ ದಾಳಿ ಮಾಡಿದ ಬಿಜೆಪಿ ಕಾರ್ಯಕರ್ತರು
ಐಬಿಗೆ ದಾಳಿ ಮಾಡಿದ ಬಿಜೆಪಿ ಕಾರ್ಯಕರ್ತರು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ತಹಶೀಲ್ದಾರ್ಗಳನ್ನು ಪ್ರಶ್ನೆ ಮಾಡಿದ್ದಾರೆ. ಅದೇ ವೇಳೆಗೆ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ದಾಳಿ ಮಾಡಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಆವಾಜ್ ಹಾಕಿ ಗುಂಪನ್ನು ಚದುರಿಸಿದ್ದಾರೆ.
ದಾಳಿ ಮಾಡಿದವರನ್ನು ಬಂಧಿಸಲಾಗಿದೆ
ದಾಳಿ ಮಾಡಿದ ಬಿಜೆಪಿ ಸ್ಥಳೀಯ ಮುಖಂಡರ ಮೇಲೆಯೇ ಪ್ರಕರಣ ದಾಖಲಿಸಲಾಗಿದ್ದು, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಾಗೇಶ್ ಸೇರಿದಂತೆ ರಾಮಣ್ಣ, ಸುನಿಲ್, ಅಶೋಕ್ ಅವರುಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಪ್ರವೇಶ ಮತ್ತು ಚಾಕು ತೋರಿಸಿ ಬೆದರಿಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.
ಚುನಾವಣೆ ಮುಗಿದ ಬಳಿಕ ಗೆಟ್ ಟುಗೆದರ್ ಪಾರ್ಟಿ
ಚುನಾವಣೆ ಮುಗಿದ ಬಳಿಕ ಗೆಟ್ ಟುಗೆದರ್ ಪಾರ್ಟಿ ಮಾಡುತ್ತಿದ್ದೆವು. ಯಾರೋ ವಿಡಿಯೋ ಮಾಡಲು ಬಂದು ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಿದರು. ಐದಾರು ಮಂದಿ ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದರು. ಪೊಲೀಸರಿಗೆ ದೂರು ನೀಡಿ ಅವರನ್ನು ಬಂಧಿಸಿಸಿದ್ದೇನೆ. ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇನೆ ಎಂದು ಹೊಳೆನರಸೀಪುರ ತಹಶೀಲ್ದಾರ್ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.
ಕುಣಿಗಲ್ನಲ್ಲಿ ಇಂತಹುದೇ ಘಟನೆ ನಡೆದಿತ್ತು
ಕೆಲವು ದಿನಗಳ ಹಿಂದೆಯಷ್ಟೆ ತಮಕೂರಿನ ಕುಣಿಗಲ್ನಲ್ಲಿ ಇದೇ ರೀತಿ ಪಿಡಬ್ಲ್ಯೂಡಿ ಅಧಿಕಾರಿಗಳು ಸರ್ಕಾರಿ ಐಬಿಯಲ್ಲಿ ಪಾರ್ಟಿ ಮಾಡಿದ್ದರು. ಇದು ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು.