ಮಿಕ್ಸಿ ಸ್ಫೋಟ ಪ್ರಕರಣ: ಪ್ರೀತಿ ನಿರಾಕರಿಸಿದಕ್ಕೆ ಮಹಿಳೆಯ ಕೊಲೆಗೆ ಮುಂದಾಗಿದ್ದ ಆರೋಪಿ
ಹಾಸನ, ಜನವರಿ 4: ಕೊರಿಯರ್ ಕಚೇರಿಗೆ ಪಾರ್ಸಲ್ ಬಂದಿದ್ದ ಮಿಕ್ಸಿ ಸ್ಫೋಟವಾಗಿರುವ ಘಟನೆ ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ಡಿಸೆಂಬರ್ 26ರಂದು ನಡೆದಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿದ್ದು, ಕೊರಿಯರ್ ಅಂಗಡಿಯಲ್ಲಿ ಮಿಕ್ಸಿ ಸ್ಫೋಟ ಪ್ರಕರಣದ ಮುಖ ಆರೋಪಿ ಅನೂಪ್ಕುಮಾರ್ನನ್ನು ಬಂಧಿಸಲಾಗಿದೆ. ನೆಲಮಂಗಲ ಬಳಿ ಆರೋಪಿಯನ್ನು ಬಂಧಿಸಿದ್ದೇವೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದ ಪಡೆಯಲಾಗಿದೆ ಎಂದು ತಿಳಿಸಿದರು.
ಆರೋಪಿ ಮಿಕ್ಸಿಯಲ್ಲಿ ಡೆಟೊನೆಟರ್ ಇಟ್ಟು ಬ್ಲಾಸ್ಟ್ ಮಾಡುವುದು ಹೇಗೆ ಎಂದು ಇಂಟರ್ನೆಟ್ ಸರ್ಚ್ ಮಾಡಿದ್ದಾನೆ. ರಾಮನಗರದಲ್ಲಿ ನಡೆಯುತ್ತಿರುವ ಕ್ವಾರಿಯಲ್ಲಿ ಎರಡು ಡೆಟೊನೆಟರ್ ತಂದಿದ್ದಾನೆ. ಡೆಟೊನೆಟರ್ ಅನ್ನು ಕದ್ದು ತಂದಿದ್ದಾನೆ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ಇನ್ನು ಆರೋಪಿ ಡಿಸೆಂಬರ್ 16 ರಂದು ಪಾರ್ಸೆಲ್ ಕಳುಹಿಸಿದ್ದಾನೆ. ಬಳಿಕ ಡಿಸೆಂಬರ್ 17ರಿಂದಲೇ ಮಿಕ್ಸಿ ಬ್ಲಾಸ್ಟ್ ಆಗಿರುವ ಸುದ್ದಿ ಬಂದಿದಿಯಾ ಎಂದು ಗೂಗಲ್ನಲ್ಲಿ ಸರ್ಚ್ ಮಾಡಿದ್ದಾನೆ. ಕೊರಿಯರ್ ಟ್ರಾಕಿಂಗ್ ಐಡಿ ಡೆಲಿವರಿ ಆಗಿದಿಯಾ, ಬಾಂಬ್ ತಯಾರಿಕೆ ಬಗ್ಗೆಯೂ ಸರ್ಚ್ ಮಾಡಿದ್ದಾನೆ. ಡೆಟೊನೆಟರ್ ಬ್ಲಾಸ್ಟ್ ಮಾಡುವ ವೈರ್ನ್ನು ಅವರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ತಲಘಟ್ಟಪುರದಲ್ಲಿರುವ ಆತನ ಮನೆಯಲ್ಲಿ ಮಿಕ್ಸಿಯ ಮೂರನೇ ಜಾರ್ ಸಿಕ್ಕಿದೆ ಎಂದು ಹರಿರಾಂ ಶಂಕರ್ ತಿಳಿಸಿದ್ದಾರೆ.
ನನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ, ಅವಮಾನ ಮಾಡಿದ್ದಕ್ಕೆ ವಸಂತಾಳನ್ನು ಕೊಲ್ಲಲು ನಿರ್ಧರಿಸಿದ್ದೆ ಎಂದು ಆರೋಪಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಪ್ರಕರಣದ ಪ್ರಮುಖ ವ್ಯಕ್ತಿಯಾಗಿರುವ ಹಾಸನದ 41 ವರ್ಷದ ಮಹಿಳೆ ವಸಂತಾ ಈ ಹಿಂದೆ ಮದುವೆಯಾಗಿ ಕೆಲವು ವರ್ಷಗಳ ಹಿಂದೆಯೇ ಮೊದಲ ಗಂಡನಿಂದ ವಿಚ್ಛೇದನ ಪಡೆದಿದ್ದರು. ನಂತರ ವರ ಬೇಕು ಎಂದು ಮ್ಯಾಟ್ರಿಮೋನಿಯಲ್ಲಿ ತನ್ನ ಫೋಟೋ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಮೂಲತಃ ಮಂಡ್ಯ ಜಿಲ್ಲೆಯ, ಹಾಲಿ ಬೆಂಗಳೂರಿನಲ್ಲಿ ವಾಸವಾಗಿರುವ ಅನೂಪ್ಕುಮಾರ್ ಈ ಮಹಿಳೆಯನ್ನು ಮೆಚ್ಚಿಕೊಂಡು ಮದುವೆ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ.
ಇದಕ್ಕೆ ಓಕೆ ಎಂದ ಮಹಿಳೆ ಮತ್ತು ಅನೂಪ್ಕುಮಾರ್ ಬಹುಬೇಗ ಹತ್ತಿರವಾಗಿದ್ದಾರೆ. ಅನೇಕ ಕಡೆಗಳಲ್ಲಿ ಇಬ್ಬರು ಜೊತೆಯಾಗಿ ಓಡಾಡಿದ್ದರು. ಈ ನಡುವೆ ಮಹಿಳೆ ಅನೂಪ್ ಕುಮಾರ್ನಿಂದ ಅನೇಕ ಕಾರಣ ನೀಡಿ ಲಕ್ಷಾಂತರ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಳು. ನಂತರ ಮದುವೆಗೆ ನಿರಾಕರಿಸಿದ್ದಾಳೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಅನೂಪ್ ಕುಮಾರ್ ಈ ಪ್ರಕರಣಕ್ಕೆ ಮುಂದಾಗಿದ್ದಾನೆ ಎನ್ನುವ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.












Click it and Unblock the Notifications