ಹಾಸನ ವಿಮಾನ ನಿಲ್ದಾಣ : ರೈತರ ಜಮೀನಿಗೆ ನೀಡುವ ಪರಿಹಾರ ಏರಿಕೆ
ಹಾಸನ, ಜುಲೈ 04 : ಹಾಸನ ನಗರದ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣಕ್ಕೆ ಈ ಹಿಂದೆ ಭೂಸ್ವಾಧೀನ ಪ್ರಕ್ರಿಯೆಗೆ ನಡೆಸಲಾಗಿರುವ ಜಮೀನುಗಳಿಗೆ ಹೊಸ ದರ ನಿಗದಿಪಡಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.
ಗುರುವಾರ ಕೆಂಚಟ್ಟಹಳ್ಳಿ, ಭುವನಹಳ್ಳಿ, ಸಮುದ್ರವಳ್ಳಿ, ಗೇಕರವಳ್ಳಿ ಗ್ರಾಮಗಳ ಭೂ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಸುಧೀರ್ಘ ಮಾತುಕತೆ ನಡೆಸಿದರು. ಮಾಲೀಕರ ಅಭಿಪ್ರಾಯಗಳನ್ನು ಆಲಿಸಿದರು. ಪರಿಹಾರದ ದರವನ್ನು ಹೆಚ್ಚಿಸಬೇಕು ಎಂದು ರೈತರು ಆಗ್ರಹಿಸಿದರು.
ರೈತರು ಹಾಸನದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಆಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಆದಷ್ಟು ಬೇಗ ಈ ಕಾರ್ಯ ಆಗಬೇಕು. ಆದರೆ, ತಮ್ಮ ಜಮೀನಿಗೆ ಹೆಚ್ಚಿನ ಪರಿಹಾರ ಒದಗಿಸಿಕೊಡಬೇಕು ಮತ್ತು ಎಲ್ಲಾ ಗ್ರಾಮಗಳಿಗೂ ಏಕರೂಪದ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಎಲ್ಲರ ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿಗಳು, 'ಇದು 2007 ರ ಹಿಂದೆಯೇ ನಡೆದಿರುವ ಭೂ ಸ್ವಾಧೀನ ಪ್ರಕ್ರಿಯೆ. ಕೆಂಚೆಟ್ಟಹಳ್ಳಿ ಮತ್ತು ಭುವನಹಳ್ಳಿಗಳಲ್ಲಿ ಎಕರೆಗೆ 11 ಲಕ್ಷ ಮತ್ತು ಸಮುದ್ರವಳ್ಳಿ ಹಾಗೂ ಗೇಕರವಳ್ಳಿಗಳಲ್ಲಿ ಎಕರೆಗೆ 9 ಲಕ್ಷ ರೂ. ದರ ನಿಗದಿ ಮಾಡಲಾಗಿತ್ತು' ಎಂದರು.
'ಈಗ ಅದನ್ನು ರೈತರ ಮನವಿಯ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಡಿ ರೇವಣ್ಣ ಅವರು ವಿಶೇಷ ಆಸಕ್ತಿ ತೋರಿಸಿ ಪರಿಷ್ಕೃತಗೊಳಿಸಿ ಪರಿಹಾರ ದರ ನಿಗದಿಪಡಿಸಲು ಅವಕಾಶ ಕಲ್ಪಿಸಿದ್ದಾರೆ' ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಎಲ್ಲಾ ರೈತರ ಬೇಡಿಕೆ ಆಲಿಸಿದ ಜಿಲ್ಲಾಧಿಕಾರಿಗಳು ಸ್ಥಳೀಯರ ಭಾವನೆಗಳಿಗೆ ಗೌರವ ನೀಡಿ ಅವರ ಮನವಿಗಳನ್ನು ಪುರಸ್ಕರಿಸಿ ಎಕರಗೆ 40 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದರು.
'ಕಲಬುರಗಿ ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಹಣ ಬಿಡುಗಡೆಯಾಗಿದೆ. ವಿಮಾನ ನಿಲ್ದಾಣಕ್ಕೆ ರಸ್ತೆಗಳ ಅಭಿವೃದ್ದಿಯಾದರೆ ಈ ಗ್ರಾಮಗಳಲ್ಲಿ ಜಮೀನಿನ ಬೆಲೆಯು ಹೆಚ್ಚಲಿದೆ, ಮೂಲಭೂತ ಸೌಕರ್ಯ ಅಭಿವೃದ್ದಿಯಾಗಲಿದೆ' ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದರು.












Click it and Unblock the Notifications