ಹಾಸನಾಂಬ ಜಾತ್ರೆ ಬಗ್ಗೆ ಬೆರಳ ತುದಿಯಲ್ಲಿ ಮಾಹಿತಿ
ಹಾಸನ, ಅಕ್ಟೋಬರ್ 15 : ಹಾಸನಾಂಬ ದೇವಿ ಜಾತ್ರೆಯ ಬಗ್ಗೆ ಬೆರಳ ತುದಿಯಲ್ಲಿ ಮಾಹಿತಿ ನೀಡಲು ವೆಬ್ಸೈಟ್ ಆರಂಭಿಸಲಾಗಿದೆ. ಈ ವರ್ಷ ಅಕ್ಟೋಬರ್ 17 ರಿಂದ 29ರ ತನಕ ಹಾಸನಾಂಬ ದೇವಾಲಯದ ಬಾಗಿಲು ತೆರೆದಿರುತ್ತದೆ.
ದೇವಾಲಯದ ಕುರಿತು ಭಕ್ತಾಧಿಗಳಿಗೆ ಮತ್ತು ಜಿಲ್ಲೆಯ ಕುರಿತ ವಿಶೇಷ ಮಾಹಿತಿಗಳು ಜನರಿಗೆ ಸಿಗಲು ಸಹಾಯಕವಾಗುವಂತೆ ಶ್ರೀ ಹಾಸನಾಂಬ ಡಾಟ್ ಕಾಮ್ ವೆಬ್ಸೈಟ್ ಆರಂಭಿಸಲಾಗಿದೆ. ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ವೆಬ್ಸೈಟ್ಗೆ ಚಾಲನೆ ನೀಡಿದರು.
ಕನ್ನಡ ಮತ್ತು ಇಂಗ್ಲಿಶ್ ಭಾಷೆಗಳಲ್ಲಿ ವೆಬ್ಸೈಟ್ನಲ್ಲಿ ಮಾಹಿತಿ ಲಭ್ಯವಿದೆ. ಜಿಲ್ಲೆಯ ಕುದುರೆ ಗುಂಡಿ ಶಾಸನ, ದೇವಾಲಯದ ಇತಿಹಾಸ, ಹಾಸನಾಂಬ ದೇವಿ ದರ್ಶನದ ಟಿಕೆಟ್ ಲಭ್ಯತೆ, 13 ದಿನಗಳ ದರ್ಶನದ ವೇಳಾಪಟ್ಟಿ, ಪ್ರಸಾದ ವ್ಯವಸ್ಥೆ ಹಾಗೂ ಜಿಲ್ಲೆಯ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ಇದೆ.

ಐತಿಹಾಸಿಕ ಹಾಸನಾಂಬ ದೇವಿಯ ಜಾತ್ರೆಯ ಅಂಗವಾಗಿ ಹಾಸನಾಂಬ ದೇವಿಯ ಒಡವೆಗಳನ್ನು ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ದೇವಸ್ಥಾನದ ಅರ್ಚಕರಿಗೆ ಹಸ್ಥಾಂತರ ಮಾಡಿದರು. ಮೆರವಣಿಗೆ ಮೂಲಕ ಒಡವೆಗಳನ್ನು ದೇವಾಲಯಕ್ಕೆ ತರಲಾಯಿತು.
ಈ ಬಾರಿ ಅಕ್ಟೋಬರ್ 17 ರ 12.30ಕ್ಕೆ ದೇವಾಲಯದ ಬಾಗಿಲು ತೆರಯಲಾಗುತ್ತದೆ. ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಬಾಗಿಲು ಮುಚ್ಚಲಾಗುತ್ತದೆ. ಅಕ್ಟೋಬರ್ 18 ರಿಂದ ಪೂಜಾ, ನೈವೇದ್ಯ ಸಮಯ ಹೊರತುಪಡಿಸಿ ರಾತ್ರಿ 1 ಗಂಟೆಯ ತನಕ ದೇವಿಯ ದರ್ಶನ ಪಡೆಯಲು ಭಕ್ತಾದಿಗಳಿಗೆ ವ್ಯವಸ್ಥೆ ಮಾಡಲಾಗಿದೆ.
ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬ ದೇವಾಲಯದ ಬಾಗಿಲು ತೆರೆಯುವುದು ವಿಶೇಷವಾಗಿದೆ. ಅಶ್ವಯುಜ ಮಾಸದ ಹುಣ್ಣಿಮೆಯ ಬಳಿಕ ಬರುವ ಮೊದಲ ಗುರುವಾರ ದೇವಾಲಯದ ಬಾಗಿಲು ತೆರಯಲಾಗುತ್ತದೆ. ಬಲಿಪಾಡ್ಯಮಿ ಹಬ್ಬದ ಮಾರನೇ ದಿನ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.












Click it and Unblock the Notifications