200 ರು 'ಪ್ರಸಾದ'ಕ್ಕೆ ಕೈಯೊಡ್ಡಿ ಸಿಕ್ಕಿಬಿದ್ದ ಪ್ರಸಾದ!
ಹಾಸನ, ಜೂನ್ 30 : ಪ್ರಥಮ ವರ್ತಮಾನ ವರದಿ ಪ್ರತಿಗಾಗಿ 200 ರುಪಾಯಿ ಲಂಚ ಕೇಳಿ ಹಾಸನ ತಾಲೂಕು ಕಚೇರಿಯ ಎಫ್ಡಿಎ ಪ್ರಸಾದ್ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಹಾಸನ ಜಿಲ್ಲೆ, ಶಾಂತಿಗ್ರಾಮ ಹೋಬಳಿ, ಕರೀಗೌಡನ ಕೊಪ್ಪಲು ನಿವಾಸಿಯಾಗಿರುವ ಈ ಪ್ರಕರಣದ ದೂರುದಾರರ ಹಾಗೂ ಅವರ ತಂದೆಯ ವಿರುದ್ದ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಕಲಂ 107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣವನ್ನು ಮುಂದಿನ ಕ್ರಮಕ್ಕಾಗಿ ಹಾಸನ ತಾಲ್ಲೂಕು ಕಛೇರಿಗೆ ನೀಡಲಾಗಿದೆ. ಅರ್ಜಿದಾರರು ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ಈ ಪ್ರಕರಣದ ತಡೆಯಾಜ್ಞೆ ಪಡೆಯುವ ಸಂಬಂಧ ಪ್ರಥಮ ವರ್ತಮಾನ ವರದಿಯ ನಕಲು ಪ್ರತಿಗಾಗಿ ಹಾಸನ ತಾಲ್ಲೂಕು ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.
ಹಾಸನ ತಾಲೂಕು ಕಚೇರಿಯಲ್ಲಿ ಎಫ್ಡಿಎ ಆಗಿರುವ ಪ್ರಸಾದ್ ಎಂಬುವವರು ಅರ್ಜಿದಾರರಿಗೆ ಪ್ರತಿಯನ್ನು ನೀಡಲು 200 ರುಪಾಯಿ ಲಂಚದ ಹಣ ನೀಡುವಂತೆ ದೂರುದಾರರಿಗೆ ಒತ್ತಾಯಿಸಿದ್ದರು. ಲಂಚ ಕೇಳುತ್ತಿದ್ದಂತೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದರು.
ದೂರುದಾರರು ನೀಡಿದ ದೂರಿನನ್ವಯ ಜೂನ್ 28ರಂದು ಪ್ರಸಾದ್ ಅವರು ದೂರುದಾರರಿಂದ 200 ರು. ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಅವರನ್ನು ದಸ್ತಗಿರಿ ಮಾಡಲಾಗಿದ್ದು, ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಎಸಿಬಿ ಹಾಸನ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸಲಾಗುತ್ತಿದೆ.












Click it and Unblock the Notifications