ನನಗೆ ನಾನೇ ಹೈಕಮಾಂಡ್: ಸಚಿವ ಕೆಎನ್ ರಾಜಣ್ಣ
ಹಾಸನ, ಫೆಬ್ರವರಿ 11; ಮೂವರು ಉಪ ಮುಖ್ಯಮಂತ್ರಿಗಳ ನೇಮಕದ ಕುರಿತು ಮಾತನಾಡಿ ಪಕ್ಷದ ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಸಚಿವ ಕೆ. ಎನ್. ರಾಜಣ್ಣ ಈಗ ಹೈಕಮಾಂಡ್ ಬಗ್ಗೆ ಮಾತನಾಡಿದ್ದಾರೆ.
ಸಹಕಾರ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎನ್. ರಾಜಣ್ಣ ಬೇಲೂರಿನಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದರು. "ನನಗೆ ನಾನೇ ಹೈಕಮಾಂಡ್ ನನಗೆ ಯಾರೂ ಹೈಕಮಾಂಡ್ ಇಲ್ಲ. ನನ್ನ ಹೈಕಮಾಂಡ್ ಇರೋದು ನಮ್ಮ ಊರಿನ ಮತದಾರರಿದ್ದಾರಲ್ಲ ಅವರು" ಎಂದು ಹೇಳಿದರು.

"ನನಗೆ ಹೈಕಮಾಂಡ್ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಎಲ್ಲಾ ಇದ್ದಾರೆ. ಅವರಿಗೆ ಕೊಡಬೇಕಾದ ಗೌರವ ಅವರಿಗೂ ಕೊಡುತ್ತೇನೆ. ಅವರು ಮಾತು ಯಾವುದು ಕೇಳಬೇಕು, ಅವರ ಮಾತು ಕೇಳುತ್ತೇವೆ. ಅವರು ಮಾತನ್ನು ನಾನು ಧಿಕ್ಕರಿಸಲ್ಲ. ಅಂತಿಮವಾಗಿ ನನ್ನ ಹೈಕಮಾಂಡ್ ನನ್ನ ಕ್ಷೇತ್ರದ ಮತದಾರರು" ಎಂದರು.
ನಾವೇನು ಹೇಳುವುದಕ್ಕೆ ಆಗುತ್ತದೆ?: 40% ಕಮೀಷನ್ ಬಗ್ಗೆ ಮಾಜಿ ಸಚಿವ ಬಿ. ಶಿವರಾಂ ಆರೋಪ ವಿಚಾರದ ಕುರಿತು ಸಚಿವ ಕೆ. ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದರು. "40% ಬಗ್ಗೆ ಹೇಳಬೇಕು ಅಂದರೆ ಅರ್ಧಫೈಸೆ ಲಂಚದ ಆರೋಪ ನನ್ನ ಮೇಲೆ ಇದ್ದರೆ ಬಂದು ಯಾವುದಾದರೂ ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಹೇಳಿ. ನಾನು ರಾಜಕೀಯನೇ ಬಿಟ್ಟು ಬಿಡುತ್ತೀನಿ" ಎಂದರು.
"ನಾಲಿಗೆ ಹೇಗೆ ಬೇಕಾದರೂ ತಿರುಗುತ್ತದೆ. ಎಲುಬಿಲ್ಲದ ನಾಲಿಗೆ, ಆಚಾರವಿಲ್ಲದೆ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ಅಂತಾರೆ. ಪ್ರಾಮಾಣಿಕತೆಯಲ್ಲಿ ಯಾರಿಗೇನು ನಾನು ಕಡಿಮೆಯಿಲ್ಲ. ಯಾರೆಲ್ಲಾ ಆರೋಪ ಮಾಡುತ್ತಾರಲ್ಲ ಅವರು ಮೊದಲು ಆತ್ಮಾವಲೋಕನಾ ಮಾಡಿಕೊಳ್ಳಲಿ" ಎಂದು ಸಚಿವರು ಸಲಹೆ ನೀಡಿದರು.
ಕೆ. ಎನ್. ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ಥರ ಆಡುತ್ತಾರೆ ಎಂಬ ಕೆಲ ನಾಯಕರ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, "ನನ್ನ ನಡವಳಿಕೆ ಜನರು ಮೆಚ್ಚಬೇಕು ಅಷ್ಟೇ. ಯಾರೋ ಮುಖಂಡರನ್ನು ಮೆಚ್ಚಿಸುವ ನಡವಳಿಕೆ ನನಗೆ ಬೇಕಿಲ್ಲ" ಎಂದರು.
"ಹೈಕಮಾಂಡ್ಗೆ ಹೆದರವರಿಗೆ ನಾವೇನು ಹೇಳಲು ಆಗುತ್ತದೆ: ಎಂಬ ಬಿ. ಶಿವರಾಂ ಹೇಳಿಕೆ ವಿಚಾರವಾಗಿ ಮಾತನಾಡಿದ ಕೆ. ಎನ್. ರಾಜಣ್ಣ, "ಅದು ನನ್ನ ಇಷ್ಟ, ನಾನು ಯಾರಿಗೆ ಹೆದರಬೇಕು ಹೆದರುತ್ತೀನಿ. ನಾನು ಹೈಕಮಾಂಡ್ಗೆ ನಿಷ್ಠನಾಗಿದ್ದೇನೆ. ಇದನ್ನು ಪದೇ ಪದೇ ಹೇಳಿದ್ದಿನಿ. ನಾನು ನಿಷ್ಠ, ಆದರೆ ಗುಲಾಮನಲ್ಲ" ಎಂದು ಹೇಳಿದರು.
ದೂರು ಕೊಡಲಿ; ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸರ್ಕಾರದ ವಿರುದ್ಧ ಮಾಡಿದ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, "ಯಾರು ಕೇಳ್ತಾ ಇದ್ದಾರೆ ಎಂದು ದೂರು ಕೊಡಬೇಕಲ್ಲ ಅವರು. ಪ್ರಧಾನಮಂತ್ರಿ ಮೋದಿಯವರು ರಾತ್ರಿ ಫೋನ್ ಮಾಡಿದ್ದರು. ಏನೋ ಹೇಳಿದರು ಅಂತ ನಾನು ಹೇಳಲು ಆಗುತ್ತದೆಯೇ?" ಎಂದರು.
"ದೂರು ಕೊಡಬೇಕಲ್ಲ, ಯಾವ ಅಧಿಕಾರಿಗಳು ಕೇಳಿದ್ದಾರೆ?. ಎಷ್ಟು ಕೇಳಿದ್ದಾರೆ? ಏನಾದರೂ ಹೇಳಬೇಕಲ್ಲ. ಕೆಂಪಣ್ಣ ಬಗ್ಗೆ ಗೌರವವಿದೆ, ಸತ್ಯ ಹೇಳುತ್ತಾರೆ ಅಂತ ನಾನು ನಂಬುತ್ತೀನಿ. ನಿರ್ಧಿಷ್ಟವಾಗಿ ಅವರು ಹೇಳಬೇಕು. ಮೂರು ಲಕ್ಷಕ್ಕೂ ಅಧಿಕ ಅಧಿಕಾರಿಗಳು ಇದ್ದಾರೆ. ಯಾವ ಅಧಿಕಾರಿ ದುಡ್ಡು ಕೇಳುತ್ತಾರೆ?, ಯಾರ ಪರವಾಗಿ ಕೇಳುತ್ತಾರೆ?, ಯಾವ ವಿಚಾರಕ್ಕೆ ಕೇಳುತ್ತಾರೆ? ಎಂದು ಹೇಳಿದರೆ ಅವರ ಬಗ್ಗೆ ಇರುವ ಗೌರವ ಇನ್ನೂ ಹೆಚ್ಚುತ್ತದೆ" ಎಂದು ಹೇಳಿದರು.
"ಬಿಜೆಪಿಯವರು ಅಸ್ತ್ರವಾಗಿ ಬಳಸಿಕೊಳ್ಳಲು ಹೇಳಿ, ಯಾರು ಬೇಡ ಅಂತಾರೆ?. ಯಾರೂ ಸನ್ಯಾಸಿಗಳಲ್ಲ, ಎಲ್ಲರೂ ರಾಜಕೀಯ ಮಾಡುವವರೇ. ಯಾವುದೇ ಅಂಶಗಳು ಅವರಿಗೆ ಬೆಂಬಲವಾಗಿರುತ್ತೆ ಅದನ್ನು ಬಳಸಿಕೊಂಡು ಮಾಡಲಿ" ಎಂದು ಸಚಿವ ರಾಜಣ್ಣ ತಿಳಿಸಿದರು.
"ರಾಜಕೀಯ ನಿಂತ ನೀರಲ್ಲ, ಅದು ಹರಿಯುವಂತಹ ನೀರು. ವಿಶೇಷವಾಗಿ ಚುನಾವಣೆಗಳು ಬರುವ ಪೂರ್ವದಲ್ಲಿ ಈ ರೀತಿಯ ಬೆಳವಣಿಗೆ ಆಗುತ್ತದೆ. ಕಾಂಗ್ರೆಸ್ನಿಂದ ಹೋಗುವವರಿಲ್ಲ ಅಂತ ನಾನೇನು ಹೇಳಲ್ಲ. ಬೇರೆ ಪಕ್ಷದಿಂದ ಕಾಂಗ್ರೆಸ್ಗೆ ಬರೋರಿಲ್ಲ ಅಂತಲೂ ನಾನು ಹೇಳೋದಿಲ್ಲ. ಅದೆಲ್ಲಾ ಸರ್ವೇ ಸಾಮಾನ್ಯ, ಈಗಲೇ ಅದನ್ನೆಲ್ಲಾ ಈಗಲೇ ನಿರ್ಧರಿಸಲು ಸಾಧ್ಯವಿಲ್ಲ" ಎಂದರು.











Click it and Unblock the Notifications