ಕಾವೇರಿ ಗಲಭೆ: ಹಾಸನದಲ್ಲಿ ಅಂಗಡಿ ಧ್ವಂಸ ಮಾಡಿದ್ದವರ ಬಂಧನ
ಹಾಸನ, ಸೆಪ್ಟೆಂಬರ್ 16: ಕಾವೇರಿ ನೀರು ಬಿಡುವ ವಿಚಾರವಾಗಿ ನಡೆದ ಗಲಾಟೆ ವೇಳೆ ಮಂಕಿ ಟೋಪಿ ಧರಿಸಿ, ಅಂಗಡಿಗಳಿಗೆ ನುಗ್ಗಿ ಧ್ವಂಸ ಮಾಡಿದ್ದ ಐವರು ಕಿಡಿಗೇಡಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ದಿನಗಳ ಹಿಂದೆ ಸಂಜೆ 6 ಗಂಟೆ ಸಮಯದಲ್ಲಿ ಸಾಲಗಾಮೆ ರಸ್ತೆ, ಸರಸ್ವತಿ ದೇವಸ್ಥಾನದ ಬಳಿಯಿರುವ ಐಯನ್ಸ್ ಬೇಕರಿಗೆ ನುಗ್ಗಿದ ಮಂಕಿ ಟೋಪಿ ಧರಿಸಿದ್ದ 8 ಕಿಡಿಗೇಡಿಗಳು ಗಾಜನ್ನು ಕಲ್ಲು ಮತ್ತು ದೊಣ್ಣೆಗಳಿಂದ ಒಡೆದು ಪುಡಿಗಟ್ಟಿದ್ದರು. ತಿಂಡಿಗಳನ್ನು ಎಳೆದು ಚಲ್ಲಾಪಿಲ್ಲಿಯಾಗಿ ಹರಡಿ, ಮಾಲೀಕರಿಗೆ ಧಮಕಿ ಹಾಕಿ ಬೈಕಿನಲ್ಲಿ ಪರಾರಿಯಾಗಿದ್ದರು.[ಹಾಸನದಲ್ಲಿ ಮಾರುತಿ ವ್ಯಾನ್ ಗೆ ಆಕಸ್ಮಿಕ ಬೆಂಕಿ: ಭಸ್ಮ]

ಬಳಿಕ 7.30ಕ್ಕೆ ತೆಲುಗರ ಬೀದಿಯಲ್ಲಿ ಮುತ್ತು ಮೀನ ಮೆಡಿಕಲ್ಸ್ ಗೆ ನುಗ್ಗಿ ಟಿವಿ, ಕಂಪ್ಯೂಟರ್, ಸಿಸಿ ಕ್ಯಾಮೆರಾವನ್ನು ಒಡೆದಿದ್ದರು. ಎದುರು ನಿಂತಿದ್ದ ಹೋಂಡಾ ಬೈಕಿಗೆ ಬೆಂಕಿ ಹಾಕಿ, ಅಲ್ಲಿಂದ ಪರಾರಿಯಾಗಿದ್ದರು.
ಈ ಸಂಬಂಧ ದೂರು ದಾಖಲಾಗಿತ್ತು. ಡಿವೈಎಸ್ಪಿ ಕೆ.ಬಿ.ಜಯರಾಂ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ನೇತೃತ್ವದಲ್ಲಿ ಪಿಎಸ್ಐ ಸುರೇಶ್, ಪಿಎಸ್ಐ ಪ್ರಮೋದ್ ಕುಮಾರ್, ಎಸ್. ಆರೀಕಿಯಪ್ಪ ಹಾಗೂ ಸಿಬ್ಬಂದಿ ಅಣ್ಣೇಗೌಡ, ಮೋಹನ್, ಸೋಮಶೇಖರ್, ಯಶೋಧರ, ಜಯಣ್ಣ ಅವರ ತಂಡ ರಚಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.[ಅರಸೀಕೆರೆ ಬಳಿ ಅಪಘಾತ, ಇಬ್ಬರು ಸಾವು]

8 ಮಂದಿ ಪೈಕಿ ಹಾಸನದ ಸ್ಲಂ ಬೋರ್ಡ್ ನಿವಾಸಿ ಆಟೋ ಚಾಲಕ ಪ್ರಮೋದ್, ಜಯನಗರ ಸರ್ವಿಸ್ ಸ್ಟೇಷನ್ ಬಳಿಯ ಚಾಲಕ ಹರೀಶ್, ಹುಣಸಿನಕೆರೆ ರಸ್ತೆ ಕ್ಯಾಂಟಿನ್ ಬಳಿಯ ನವೀನ್, ಗಾಂಧಿನಗರ 1ನೇ ಕ್ರಾಸ್ ನಲ್ಲಿ ವಾಸವಿರುವ ಆಟೋ ಚಾಲಕ ಸುದರ್ಶನ್, ನಗರದ ನಿಸರ್ಗ ಹಾಸ್ಟೆಲ್ ಹಿಂಭಾಗ ಕಲಾ ಕಾಲೇಜು ರಸ್ತೆಯ ಬಳಿ ಯಿರುವ ಎ2ಬಿ ಡಿಸ್ಟ್ರಿಬ್ಯೂಟರ್ ಶಿವ ಎಂಬುವರನ್ನು ಬಂಧಿಸಲಾಗಿದೆ.[ಕುರಿ ಮಾರ್ತೀವಿ ಎಂದು ಬಂದವರು ಕೊಲೆ ಮಾಡಿ ಆಭರಣ ದೋಚಿ ಪರಾರಿ]
ಈ ಘಟನೆಯ ರೂವಾರಿ ಮಣಿಕಂಠನಾಗಿದ್ದು, ಆತ ಸೇರಿದಂತೆ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ. ಕಾವೇರಿ ವಿಚಾರವಾಗಿ ಇದುವರೆಗೆ ನಾಲ್ಕು ಪ್ರಕರಣಗಳು ಮಾತ್ರ ದಾಖಲಾಗಿವೆ ಎಂದು ಎಸ್ ಪಿ ಮಾಹಿತಿ ನೀಡಿದರು. ಇದೆ ವೇಳೆ ಡಿವೈಎಸ್ಪಿ ಕೆ.ಬಿ. ಜಯರಾಂ ಇತರರು ಇದ್ದರು.












Click it and Unblock the Notifications